ಬಡವರು ಹಸಿವಿನಿಂದಿದ್ದರೆ ಮೋದಿ ಸರಕಾರ ‘ವಿಶೇಷ ಸ್ನೇಹಿತರ’ ಜೇಬು ತುಂಬಿಸುತ್ತಿದೆ: ರಾಹುಲ್ ಗಾಂಧಿ
Update: 2020-10-17 16:44 GMT
ಹೊಸದಿಲ್ಲಿ, ಅ. 17: ನರೇಂದ್ರ ಮೋದಿ ಸರಕಾರ ಕೇವಲ ‘ವಿಶೇಷ ಸ್ನೇಹಿತರ’ ಜೇಬು ತುಂಬಿಸುವ ಕೆಲಸವನ್ನಷ್ಟೇ ಮಾಡುತ್ತಿದೆ. ಇದರಿಂದ ದೇಶದ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಜಾಗತಿಕ ಹಸಿವಿನ ಸೂಚ್ಯಾಂಕ 2020ರ ವರದಿಯಲ್ಲಿ 107 ರಾಷ್ಟ್ರಗಳಲ್ಲಿ ಭಾರತ 94ನೇ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ. ಯಾಕೆಂದರೆ, ಸರಕಾರ ತನ್ನ ಕೆಲವು ವಿಶೇಷ ಗೆಳೆಯರ ಜೇಬು ತುಂಬಿಸುವಲ್ಲಿ ಬ್ಯುಸಿಯಾಗಿದೆ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್ನೊಂದಿಗೆ ಪಾಕಿಸ್ತಾನ (88), ನೇಪಾಳ (73) ಹಾಗೂ ಬಾಂಗ್ಲಾದೇಶ (75) ಸೇರಿಂದತೆ ನೆರೆಯ ರಾಷ್ಟ್ರಗಳಿಗಿಂತ ಭಾರತ ಕೆಳಗಿನ ಸ್ಥಾನ ಪಡೆದುಕೊಂಡಿರುವುದನ್ನು ತೋರಿಸುವ ಗ್ರಾಫ್ ಅನ್ನು ಲಗತ್ತಿಸಿದ್ದಾರೆ.