‘ಮದ್ದಲೆ ಮಾಂತ್ರಿಕ’, ಶತಾಯುಷಿ ಹಿರಿಯಡ್ಕ ಗೋಪಾಲ್ ರಾವ್ ನಿಧನ

Update: 2020-10-17 17:28 GMT

ಉಡುಪಿ, ಅ.17: ಯಕ್ಷಗಾನ ಕ್ಷೇತ್ರದ ಅನರ್ಘ್ಯ ರತ್ನಗಳಲ್ಲಿ ಒಬ್ಬರಾಗಿದ್ದ ‘ಮದ್ದಲೆ ಮಾಂತ್ರಿಕ’ ಎಂದೇ ಕರೆಸಿಕೊಂಡಿದ್ದ ಶತಾಯುಷಿ ಹಿರಿಯಡ್ಕ ಗೋಪಾಲರಾಯರು ಇಂದು ರಾತ್ರಿ ಹಿರಿಯಡ್ಕ ಸಮೀಪದ ಒಂತಿಬೆಟ್ಟಿನ ತಮ್ಮ ಮನೆ ‘ಸೀತಾರಾಮ ನಿಲಯ’ದಲ್ಲಿ ನಿಧನರಾದರು.

ಅವರಿಗೆ 101 ವರ್ಷ ಪ್ರಾಯವಾಗಿತ್ತು. ಅವರು ಪುತ್ರ, ಅಪಾರ ಬಂಧುಮಿತ್ರರು ಹಾಗೂ ಅಭಿಮಾನಿ ವೃಂದವನ್ನು ಅಗಲಿದ್ದಾರೆ. ರವಿವಾರ ಹಿರಿಯಡ್ಕ ಗೋಪಾಲರಾಯರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಕರಾವಳಿಯ ಮೂರು ಜಿಲ್ಲೆಗಳ ಯಕ್ಷಗಾನ ಲೋಕದಲ್ಲಿ ‘ಮದ್ದಲೆ ಮಾಂತ್ರಿಕ’ ರೆಂದೇ ಹೆಸರಾದ ಹಿರಿಯಡ್ಕ ಗೋಪಾಲರಾಯರು ಕಳೆದ ವರ್ಷ ತಮ್ಮ ನೂರು ವರ್ಷ ಪ್ರಾಯದಲ್ಲೂ ನವತಾರುಣ್ಯದ ಎಲ್ಲಾ ಛಾಪನ್ನು ತೋರಿಸಿ ತಮ್ಮ ಕೈಬೆರಳುಗಳಲ್ಲಿದ್ದ ಮದ್ದಲೆಯ ಮಾಂತ್ರಿಕತೆಯನ್ನು ತೋರಿಸಿ ಕಲಾಪ್ರೇಮಿಗಳು ಮತ್ತು ತನ್ನ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದರು.

1919ರ ಡಿ.15ರಂದು ಹಿರಿಯಡ್ಕದಲ್ಲಿ ಜನಿಸಿದ ಗೋಪಾಲರಾಯರು ಕಲಿತಿದ್ದು 6ನೇ ತರಗತಿಯವರೆಗೆ ಮಾತ್ರ. ಆದರೆ ಯಕ್ಷಗಾನ ಚೌಕಿ ಹಾಗೂ ರಂಗಸ್ಥಳದಲ್ಲಿ ಅವರು ಕಲಿತಿದ್ದು ಬದುಕಿನ ಕಲೆಯನ್ನು. 16ನೇ ವಯಸ್ಸಿನಲ್ಲಿ ತಂದೆ ಶೇಷಗಿರಿ ರಾವ್ ಇವರಿಂದ ಮದ್ದಲೆಯನ್ನು ಅಭ್ಯಾಸ ಮಾಡಿದ ಗೋಪಾಲರಾಯರು, ನೃತ್ಯವನ್ನು ಗುರು ನಾಗಪ್ಪ ಕಾಮತರಿಂದ ಕಲಿತರು. 1934ರಲ್ಲಿ ಹಿರಿಯಡ್ಕ ಮೇಳದಲ್ಲಿ ಪಾತ್ರಧಾರಿಯಾಗಿ ಪ್ರವೇಶ ಪಡೆದ ಅವರು 1936ರಲ್ಲಿ ಸಹ ಮದ್ದಲೆ ಕಲಾವಿದರಾದರು. ಮುಂದಿನ ವರ್ಷವೇ ಪೆರ್ಡೂರು ಮೇಳದಲ್ಲಿ ಪ್ರಧಾನ ಮದ್ದಲೆಕಾರರಾಗಿ ಸೇರಿದ ಗೋಪಾಲರಾಯರು ನಂತರ ಹಿಂದಿರುಗಿ ತಿರುಗಿ ನೋಡಲಿಲ್ಲ.

1939ರಿಂದ 67ರವರೆಗೆ ಅವರು ಅಂದು ಬಡಗುತಿಟ್ಟಿನ ಪ್ರಧಾನ ಮೇಳ ವಾದ ಮಂದಾರ್ತಿ ಮೇಳದ ಪ್ರಧಾನ ಮದ್ದಲೆಕಾರರಾಗಿ ದುಡಿದರು.ಈ ನಡುವೆ 1961ರಲ್ಲಿ ಕೋಟ ಶಿವರಾಮ ಕಾರಂತರ ಸಂಪರ್ಕಕ್ಕೆ ಬಂದ ಗೋಪಾಲ ರಾಯರು, ಅವರ ಯಕ್ಷಗಾನ ನೃತ್ಯಗಳಿಗೆ ಹಾಗೂ ಯಕ್ಷಗಾನ ಗೋಷ್ಠಿಗಳಲ್ಲಿ ಮದ್ದಲೆಕಾರರಾಗಿ ಕಾರ್ಯನಿರ್ವಹಿಸಿದರು. ಕಾರಂತರ ಒಡನಾಟ ಸಿಕ್ಕ ಬಳಿಕ ಗೋಪಾಲರಾಯರ ಯಕ್ಷಗಾನ ಬದುಕಿಗೆ ಹೊಸ ದಾರಿ ದೊರೆತಂತಾಯಿತು.

ಮುಂದೆ 1968ರಲ್ಲಿ ಕಾರಂತರು ಬ್ರಹ್ಮಾವರದಲ್ಲಿ ಪ್ರಾರಂಭಿಸಿದ ಯಕ್ಷಗಾನ ಕೇಂದ್ರಕ್ಕೆ ಅಧ್ಯಾಪಕರಾಗಿ ಸೇರಿದರು. ಮರುವರ್ಷ ಪೀಟರ್ ಕ್ಲಾಸ್‌ರ ಜೊತೆ ಕ್ಯಾಲಿಫೋರ್ನಿಯ ವಿವಿಯಲ್ಲಿ ಕೆಲಸ ಮಾಡಿದರು. 1970ರಲ್ಲಿ ಕಾರಂತರ ಸಲಹೆಯಂತೆ ಉಡುಪಿಗೆ ಮರಳಿದ ಗೋಪಾಲರಾಯರು, ಇಲ್ಲಿ ಯಕ್ಷಗಾನದಲ್ಲಿ ಡಾಕ್ಟರೇಟ್ ಮಾಡಲು ಬಂದ ಮಾರ್ತಾ ಆಸ್ಟನ್‌ಗೆ ಯಕ್ಷಗಾನ ನೃತ್ಯ ಕಲಿಸಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದರು.

1971ರಿಂದ ಐದು ವರ್ಷಗಳ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಅಧ್ಯಾಪಕರಾಗಿ ದುಡಿದು, 1976ರಲ್ಲಿ ಕೇಂದ್ರದಿಂದ ನಿವೃತ್ತರಾದರು. ಬಳಿಕ ಯಕ್ಷಗಾನ ಪ್ರಚಾರಕ್ಕಾಗಿ ಮಾರ್ತಾ ಜೊತೆ ಯಕ್ಷಗಾನ ತಂಡದೊಂದಿಗೆ ವಿದೇಶಕ್ಕೆ ಕೊಂಡೊಯ್ದು ಪ್ರಾತ್ಯಕ್ಷಿಕೆ ನೀಡಿದರು. ಈ ಮದ್ಯೆ 1973 ರಲ್ಲಿ ಬಿ.ವಿ.ಕಾರಂತರ ಜೊತೆ ಹೊಸದಿಲ್ಲಿಯ ಎನ್‌ಎಸ್‌ಡಿಯಲ್ಲೂ ಶಿಬಿರದಲ್ಲಿ ಪಾಲ್ಗೊಂಡರು.

ಆ ಬಳಿಕವೂ ಹಲವು ಬಾರಿ ಯಕ್ಷಗಾನ ತಂಡಗಳೊಂದಿಗೆ ವಿದೇಶಿ ಪ್ರಯಾಣ ನಡೆಸಿದ ಗೋಪಾಲರಾಯರಿಗೆ 1972ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1997ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 1998ರಲ್ಲಿ ಜಾನಪದಶ್ರೀ ಪ್ರಶಸ್ತಿ, 2012ರಲ್ಲಿ ಜಾನಪದ ಸಿರಿ ಪ್ರಶಸ್ತಿಗಳನ್ನು ಪಡೆದಿದ್ದರು. 2018ರಲ್ಲಿ ಅವರಿಗೆ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಅದನ್ನು ಸ್ವತಹ ಸಚಿವೆ ಜಯಮಾಲ ಅವರೇ ಹಿರಿಯಡ್ಕದ ಅವರಿಗೆ ಮನೆಗೆ ಬಂದು ಪ್ರದಾನ ಮಾಡಿದ್ದರು.

ಗೋಪಾಲರಾಯರು ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಲಾ ಉತ್ಸವಗಳಲ್ಲಿ ಯಕ್ಷಗಾನದ ಕುರಿತಂತೆ ಪ್ರಾತ್ಯಕ್ಷಿಕೆ, ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ.

ಪ್ರಶಸ್ತಿಗಳು

1972ರಲ್ಲಿ ರಾಜ್ಯ ಸರ್ಕಾರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ,

1984ರಲ್ಲಿ ರಾಜ್ಯಸರ್ಕಾರದ ಗೌರವಧನ ಪ್ರದಾನ,

1992ರಲ್ಲಿ ರಾಜ್ಯ ಸಾಹಿತ್ಯ ಪರಿಷತ್ ಸನ್ಮಾನ,

1997ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ

2012ರಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ಪ್ರಶಸ್ತಿ

2018ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News