ವಿಟ್ಲ: ಅಥ್ರಸ್‌ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ

Update: 2020-10-19 11:29 GMT

ಬಂಟ್ವಾಳ, ಅ.19: ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ನೇತೃತ್ವದಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಸಹಬಾಗಿತ್ವದಲ್ಲಿ ಉತ್ತರ ಪ್ರದೇಶದ ರಾಜ್ಯದ ಅಥ್ರಸ್‌‌ನಲ್ಲಿ ದಲಿತ ಯುವತಿಯ ಅತ್ಯಾಚಾರ ಕೊಲೆ ಮತ್ತು ದಕ್ಷಣ ಕನ್ನಡ ಜಿಲ್ಲೆಯ ವಿವಿಧೆಡೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ವಿಟ್ಲದ ನಾಡಕಚೇರಿ ಸಮೀಪ ಪ್ರತಿಭಟನೆ ನಡೆಸಲಾಯಿತು. 

ದ.ಕ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ಅಧ್ಯಕ್ಷ ಬಿ.ಎಂ ಭಟ್ ಮಾತನಾಡಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತ, ಅಲ್ಪಸಂಖ್ಯಾತರ ಮೇಲೆ  ನಿರಂತರ ಅನ್ಯಾಯ ನಡೆಯುತ್ತಿದೆ. ಹಿಂದೂ ಧರ್ಮದ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯಿಂದ ಹಿಂದೂಗಳ ರಕ್ಷಣೆ ಆಗುತ್ತಿಲ್ಲ. ಹಿಂದುಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಬಿಜೆಪಿಯಲ್ಲಿರುವುದು ನಕಲಿ ಹಿಂದುತ್ವವಾಗಿದೆ. ಬಿಜೆಪಿಯಿಂದ ಅಲ್ಪಸಂಖ್ಯಾತ ದಲಿತರನ್ನು ಸರ್ವನಾಶ ಮಾಡುವ ಕಾರ್ಯ ನಡೆಯುತ್ತಿದೆ. ಇದರ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಅತ್ಯಾಚಾರ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹೇಳಿದರು. 

ಈ ಸಂದರ್ಭ ಪ್ರೋ ಬಿ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಸಂಚಾಲಕ ಆನಂದ ಮಿತ್ತಬೈಲು, ವಿದ್ಯುತ್ ಬಳಕೆದಾರರ ಹೋರಾಟ ಸಮಿತಿ ಗೌರವಾಧ್ಯಕ್ಷ ರಮಾನಾಥ ವಿಟ್ಲ, ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು, ಬೆಳ್ತಂಗಡಿ ದಲಿತ ಹಕ್ಕುಗಳ ಹೋರಾಟ ಸಮಿತಿಯ ಈಶ್ವರಿ, ವಿಟ್ಲ ಕನಕಶ್ರೀ ಮೊಗೇರ ಸಂಘಟನೆಯ ಸುರೇಶ್ ಜಿ ಪೆರುವಾಯಿಗುತ್ತು, ಬಂಟ್ವಾಳ ನಳಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಕಡಂಬು, ದ.ಕ ದಲಿತ ಸಂಘಟನೆಗಳ ಹೋರಾಟ ಸಮಿತಿಯ ರಮೇಶ್ ಕೋಟ್ಯಾನ್, ಅಶೋಕ್ ಕುಮಾರ್ ಕೊಂಚಾಡಿ, ಎಸ್.ಪಿ ಆನಂದ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿಕೆಎಂ ಅಶ್ರಫ್, ಅಣ್ಣಪ್ಪ ಅರೆಕಾಡು, ಸುನಂದ ತೆಂಕಿಲ, ಶ್ರೀಧರ್ ಮಂಜನಾಡಿ, ಸೋಮಪ್ಪ ಸುರುಳಿಮೂಲೆ, ರಾಮಣ್ಣ ಪಿಲಿಂಜ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News