ಅಕ್ರಮ ಕಲ್ಲು ಗಣಿಗಾರಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

Update: 2020-10-19 12:41 GMT

ಮಂಗಳೂರು: ಮುಡಿಪು ಪ್ರದೇಶ ಬಂಟ್ವಾಳ ತಾಲೂಕು ಸರಹದ್ದಿನಲ್ಲಿದ್ದರೂ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಅದು ನನ್ನ ಕ್ಷೇತ್ರದಲ್ಲಿ ಇಲ್ಲ, ಮಾತ್ರವಲ್ಲದೆ ಅಲ್ಲಿ ನಾನು ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿಲ್ಲ. ನನ್ನ ಸಂಬಂಧಿಕರು ಕೂಡಾ ಅಂತಹ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಹೇಳಿದ್ದಾರೆ.

ಅವರು ಸೋಮವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕ ಮತ್ತು ಮಾಜಿ ಸಚಿವರಾದ ಬಿ.ರಮಾನಾಥ ರೈಯವರು ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆಡಳಿತ ಪಕ್ಷದ ಶಾಸಕರೊಬ್ಬರು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಅವರ ಸಂಬಂಧಿಗಳು ಕೂಡಾ ಅದರಲ್ಲಿ ಇದ್ದಾರೆ ಎಂದು ಆರೋಪಿಸಿದ್ದರು. ನಾನು ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಅಧಿಕೃತ ಪರವಾನಗಿ ಪಡೆದು ಪಟ್ಟಾ ಜಮೀನಿನಲ್ಲಿ ಎಂದು ಅವರು ಹೇಳಿದರು.

ನಾನು ಹಿಂದಿನಿಂದಲೂ ಕಾನೂನು ಬದ್ಧವಾಗಿಯೇ ಗಣಿಗಾರಿಕೆ ಮಾಡಿಕೊಂಡು ಬಂದಿದ್ದೇನೆ. ಆದರೆ ಎಲ್ಲರೂ ಹಾಗೆ ಮಾಡುತ್ತಾರೆ ಎಂದು ಹೇಳಲಾಗದು. ಅಕ್ರಮವಾಗಿ ಗಣಿಗಾರಿಕೆ ಮಾಡುವವರೂ ಇರಬಹುದು. ಉನ್ನತ ಮಟ್ಟದ ತನಿಖೆ ನಡೆಯಲಿ. ಆಗ ಕಾನೂನು ರೀತಿಯಲ್ಲಿ ಗಣಿಗಾರಿಕೆ ಮಾಡುತ್ತಿರುವವವರಿಗೆ ಮಾನ್ಯತೆ ಬರುತ್ತದೆ ಎಂದು ಶಾಸಕರು ನುಡಿದರು.

ಪ್ರಸ್ತುತ ಎಂಟು ತಿಂಗಳಿನಿಂದ ಕೆಂಪು ಕಲ್ಲು ಗಣಿಗಾರಿಕೆಯನ್ನು ಮಾಡಿಲ್ಲ, ಕೋವಿಡ್ ಮತ್ತು ರಾಯಧನವನ್ನು ಹೆಚ್ಚಳ ಮಾಡಿರುವುದು ಅದಕ್ಕೆ ಕಾರಣವಾಗಿದೆ. ಸರಕಾರ ರಾಯಧನವನ್ನು ಟನ್‌ವೊಂದರ ರೂ.92 ರಿಂದ ರೂ.252ಕ್ಕೆ ಹೆಚ್ಚಿಸಿತು. ಆದರೆ ಕೆಂಪು ಮಣ್ಣಿಗೆ ಲಭಿಸುವ ದರ ರೂ.600. ಅದು ಆರ್ಥಿಕವಾಗಿ ನಷ್ಟದ ದಾರಿ ಎಂದು ಹೇಳಿದ ಶಾಸಕರು, ರಾಯಧನವನ್ನು ಕಡಿಮೆ ಮಾಡುವಂತೆ ನಾನೇ ಒತ್ತಾಯಿಸಿದ್ದೇನೆ. ಪ್ರಸ್ತುತ ಅದನ್ನು ರೂ.162ಕ್ಕೆ ಇಳಿಸಲಾಗಿದೆ. ಮುಂದೆ ಕೆಂಪು ಕಲ್ಲು ಗಣಿಗಾರಿಕೆ ಶುರು ಮಾಡುತ್ತಿದ್ದರೆ ಕಾನೂನು ಬದ್ದವಾಗಿಯೇ ಮಾಡುತ್ತೇನೆ ಎಂದು ರಾಜೇಶ ನಾಯ್ಕ್ ಹೇಳಿದರು.

ನಾನು ಸಾರ್ವಜನಿಕ ಬದುಕಿನಲ್ಲಿ ಇರುವವನು. ಜೊತೆಗೆ ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ. ಪಾರದರ್ಶಕವಾಗಿರಬೇಕೆಂದು ಬಯಸಿ ಸ್ಪಷ್ಟನೆ ನೀಡುತ್ತಿದ್ದೇನೆ. ನಾನು ಎಂದಿಗೂ ರಾಜಕೀಯವನ್ನು ಬದುಕು ಮಾಡಿಕೊಂಡಿಲ್ಲ, ಮುಂದೆಯೂ ಬದುಕು ಮಾಡಿಕೊಳ್ಳಲಾರೆ. ಕೃಷಿ ಇದೆ, ಕಾನೂನು ಬದ್ಧ ವ್ಯವಹಾರಗಳಿವೆ. ನಿಯಮಗಳ ಚೌಕಟ್ಟು ಮೀರಲಾರೆ ಎಂದು ಸ್ಪಷ್ಟಪಡಿಸಿದರು.

ದಾಖಲೆ ಒದಗಿಸಿ

ಮಾಜಿ ಸಚಿವ ರಮಾನಾಥ ರೈ ಅವರು ಕಂಪೆನಿಯೊಂದರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಬಿಜೆಪಿಯ ಶಾಸಕರು ಇದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಕ್ಕೆ ಅವರು ದಾಖಲೆ ಒದಗಿಸಬೇಕು ಎಂದು ಆಗ್ರಹಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ, ತಮ್ಮದೇ ಪಕ್ಷದ ಶಾಸಕ ಯು.ಟಿ.ಖಾದರ್ ಅವರನ್ನು ಎದುರು ಹಾಕಿಕೊಳ್ಳುವುದು ಸಾಧ್ಯವಾಗದೆ ಅವರು ಈ ರೀತಿ ವೃಥಾ ಆರೋಪ ಮಾಡಿದ್ದಾರೆ. ಮುಡಿಪು ಭಾಗದಲ್ಲಿ ಅಕ್ರಮ ಗಣಿಗಾರಿಕೆ ಕಂಪೆನಿಯಲ್ಲಿ ತೊಡಗಿರುವವರು ಖಾದರ್ ಸಂಬಂದಿಗಳೇ ಆಗಿದ್ದಾರೆ ಎಂದರು.

ಆಡಳಿತ ಪಕ್ಷದ ಶಾಸಕರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಮಾಜಿ ಸಚಿವ ರೈ ಆರೋಪಿಸಿದ್ದಾರೆ. ರಮಾನಾಥ ರೈ ಅವರು ಪರಿಸರ ಖಾತೆಯ ಸಚಿವರಿದ್ದ ಕಾಲದಲ್ಲಿಯೇ ರಾಜೇಶ್ ನಾಯ್ಕರಿಗೆ ಕೆಂಪು ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ. ಆಗ ರೈ ಅವರಿಗೆ ಪರಿಸರದ ಕಾಳಜಿ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ತು ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೂಡಾ ಅಧ್ಯಕ್ಷ ರವಿಶಂಕರ ಮಿಜಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ, ವಕ್ತಾರ ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

ಸಹಾಯಕ ಆಯುಕ್ತ ಮದನ್ ಮೋಹನ್ ವರ್ಗಾವಣೆ ಅಕ್ರಮ ಕಲ್ಲು ಗಣಿಗಾರಿಕೆ ತಾಣಗಳಿಗೆ ದಾಳಿ ಮಾಡಿದ್ದಕ್ಕೆ ಆಗಿದೆ ಎಂದು ಮಾಜಿ ಸಚಿವರು ಆರೋಪಿಸಿದ್ದಾರೆ. ಅದು ಕೂಡಾ ಸತ್ಯಕ್ಕೆ ದೂರವಾಗಿದೆ. ಅವರ ವರ್ಗಾವಣೆ ಕೆಎಟಿ ಮತ್ತು ಹೈಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಆಗಿದೆ. ನಾವು ನಾಲ್ವರು ಶಾಸಕರು ಅವರನ್ನೇ ಮುಂದುವರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ನೀಡಿದ್ದೇವೆ.

ರಾಜೇಶ ನಾಯ್ಕ್, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News