ದನ ಸಾಕಣೆಗೆ ಪರಿಸರ ಇಲಾಖೆ ಅನುಮತಿ ಆದೇಶ ಹಿಂಪಡೆಯಿರಿ: ಹರೀಶ್ ಕಿಣಿ ಆಗ್ರಹ

Update: 2020-10-20 17:08 GMT

ಉಡುಪಿ, ಅ.20: ಹೈನುಗಾರಿಕೆ ನಡೆಸುವವರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದುಕೊಳ್ಳಬೇಕೇಂಬ ರಾಜ್ಯ ಬಿಜೆಪಿ ಸರಕಾರದ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಅಲೆವೂರು ಹರೀಶ್ ಕಿಣಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಗ್ರಾಮೀಣ ಜನರ ಕಾಮಧೇನು ಆಗಿರುವ ಹೈನುಗಾರಿಕೆಯನ್ನು ಅವಲಂಬಿಸಿರುವವರಿಗೆ ರಾಜ್ಯ ಬಿಜೆಪಿ ಸರಕಾರದ ಈ ನಿರ್ಧಾರದಿಂದ ಹೊಟ್ಟೆಗೆ ಹೊಡೆದಂತಾಗಿದೆ. ಈ ಆದೇಶ ಜಾರಿಗೆ ಬಂದರೆ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸರಕಾರದ ಈ ನಿರ್ಧಾರ ಮುಂದಿನ ದಿನಗಳಲ್ಲಿ ಕಾರ್ಪೋರೇಟ್ ಹೈನುಗಾರಿಕೆ ನಡೆಸುವವರಿಗೆ ಅನುಕೂಲ ಮಾಡಿಕೊಡಲು ಮೊದಲ ಹೆಜ್ಜೆ ಇಟ್ಟಂತಾಗಿದೆ. ಆದುದರಿಂದ ಬಡ, ಗ್ರಾಮೀಣ ಹೈನುಗಾರರಿಗೆ ಗೌರವಾನ್ವಿತ ಜೀವನ ನಡೆಸಲು ಅನುಕೂಲವಾಗುವಂತೆ ಸುಗ್ರೀವಾಜ್ಞೆ ಮೂಲಕ ಕ್ರಮ ಕೈಗೊಳ್ಳುವಂತೆ ಹರೀಶ್ ಕಿಣಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News