ಕೋವಿಡ್ ಮಾರ್ಗಸೂಚಿ ಪಾಲಿಸಿ : ಜನಾರ್ದನ್ ಪೂಜಾರಿ

Update: 2020-10-24 16:07 GMT

ಮಂಗಳೂರು, ಅ.24: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ನಗರದ ಕುದ್ರೋಳಿ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿ, ದೇವರ ದರ್ಶನ ಪಡೆದು ಮಂಗಳೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಗಳೂರು ದಸರಾ ದೊಡ್ಡ ಕಾರ್ಯಕ್ರಮ. ಹಲವು ವರ್ಷಗಳಿಂದ ಕ್ಷೇತ್ರದ ವತಿಯಿಂದ ನಡೆಯು ತ್ತಿರುವ ಮಂಗಳೂರು ದಸರಾವನ್ನು ಇದೀಗ ಶ್ರೀ ಗೋಕರ್ಣನಾಥ ದೇವರು ಚೆನ್ನಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಆಶೀರ್ವಾದ ನಮಗೆ, ನಮ್ಮ ಕುಟುಂಬಕ್ಕೆ ಮತ್ತು ನಮ್ಮೆಲ್ಲರಿಗೆ ಬೇಕು ಎಂದು ಹೇಳಿದರು.

ಗೊಂದಲ, ನೋವಿಗೆ ಎಡೆ ಮಾಡದಿರಿ: ಪ್ರಸ್ತುತ ಕೊರೋನ ಸೋಂಕು ಜಗತ್ತಿನಾದ್ಯಂತ ಹರಡಿದ್ದು, ಸೋಂಕು ನಿಯಂತ್ರಿಸಲು ಸರಕಾರ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ಸರಕಾರದ ನಿಯಮಗಳಿಗೆ ನಾವೆಲ್ಲರೂ ಸ್ಪಂದಿಸಬೇಕು. ನಾನೂ ಕೂಡ ಸ್ಪಂದಿಸುತ್ತಿ ದ್ದೇನೆ. ಸರಕಾರದ ನಿಯಮಗಳ ಚೌಕಟ್ಟಿನಲ್ಲಿ ನವರಾತ್ರಿ ಮತ್ತು ದಸರಾ ಆಚರಿಸಬೇಕು. ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದೆ, ಯಾರ ನೋವಿಗೂ ಕಾರಣವಾಗದೆ ಹಬ್ಬವನ್ನು ಸಂಭ್ರಮಿಸಬೇಕು ಎಂದರು.

ಶ್ರೀ ಕ್ಷೇತ್ರದ ಆಡಳಿತ ಕೂಡ ಸರಕಾರದ ನಿಯಮಗಳ ಚೌಕಟ್ಟಿನಲ್ಲಿ ಮಂಗಳೂರು ದಸರಾವನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು ಎಂದು ಅವರು ಮನವಿ ಮಾಡಿದರು.

ಸಂಜೆ 6 ಗಂಟೆ ವೇಳೆಗೆ ಶ್ರೀಕ್ಷೇತ್ರಕ್ಕೆ ಆಗಮಿಸಿದ ಜನಾರ್ದನ ಪೂಜಾರಿ ಅವರನ್ನು ಕ್ಷೇತ್ರದ ಆಡಳಿತ ಸಮಿತಿಯ ಪದಾಧಿಕಾರಿಗಳು ಸ್ವಾಗತಿಸಿ ದರು. ಕ್ಷೇತ್ರದ ದರ್ಬಾರು ಮಂಟಪದಲ್ಲಿ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳನ್ನು ವೀಕ್ಷಿಸಿದ ಬಳಿಕ ಅವರು ದೀಪ ಬೆಳಗಿಸಿ ಮಂಗಳೂರು ದಸರಾ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಶೇಖರ್ ಪೂಜಾರಿ, ಕೆ. ಮಹೇಶ್ಚಂದ್ರ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ್, ಡಾ. ಬಿ.ಜಿ. ಸುವರ್ಣ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಮೇಯರ್ ಪುರುಷೋತ್ತಮ ಚಿತ್ರಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಮ್‌ದಾಸ್, ಕಾರ್ಪೊರೇಟರ್ ಸುಧೀರ್ ಶೆಟ್ಟಿ, ಅನಿಲ್ ಪೂಜಾರಿ, ಯೋಗೀಶ್ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.

ನಾರಾಯಣ ಗುರುಗಳ ಭಾವಚಿತ್ರದ ಸಾಂಕೇತಿಕ ಪ್ರದಕ್ಷಿಣೆ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಂಗಳೂರು ‘ದಸರಾ ಮಹೋತ್ಸವ’ ಅಂಗವಾಗಿ ಈ ಬಾರಿ ದಸರಾ ಶೋಭಾ ಯಾತ್ರೆಯ ಬದಲು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಸಾಂಕೇತಿಕವಾಗಿ ರಾಜ ಬೀದಿಯಲ್ಲಿ ನಗರ ಪ್ರದಕ್ಷಿಣೆ ನಡೆಸಲು ಕ್ಷೇತ್ರದ ಆಡಳಿತ ಮಂಡಳಿ ನಿರ್ಧರಿಸಿದೆ.

ಕುದ್ರೋಳಿ ಕ್ಷೇತ್ರದಿಂದ ಅ. 25ರಂದು ಸಂಜೆ 6ಗಂಟೆಗೆ ನಾರಾಯಣ ಗುರು ಭಾವಚಿತ್ರವಿರುವ ಟ್ಯಾಬ್ಲೋ ಹೊರಡಲಿದ್ದು, ವಾಹನದಲ್ಲಿ ಸೀಮಿತ ಭಕ್ತರು ಮಾತ್ರ ಭಾಗವಹಿಸಲಿದ್ದಾರೆ. ಈ ಟ್ಯಾಬ್ಲೋ ಕಂಬಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಭಾಗ್, ಬಲ್ಲಾಳ್‌ಬಾಗ್, ಪಿವಿಎಸ್, ನವಭಾರತ್ ಸರ್ಕಲ್, ಕೆ.ಎಸ್. ರಾವ್ ರಸ್ತೆ, ಪಿ.ಎಂ. ರಾವ್ ರೋಡ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾ ಗಕ್ಕೆ ಬಂದು ವಿ.ಟಿ. ರಸ್ತೆ ಮೂಲಕ ನವಭಾರತ್ ಸರ್ಕಲ್‌ಗೆ ಮರಳಿ ಚಿತ್ರಾ ಟಾಕೀಸು, ಅಳಕೆಯಾಗಿ ಶ್ರೀ ಕ್ಷೇತ್ರಕ್ಕೆ ತೆರಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News