ಭಾರತ ಮುಕ್ತ ದೇಶವಾಗಿರಲು ಬಿಡಿ: ರಾಜ್ಯಸರಕಾರ, ಪೊಲೀಸರಿಗೆ ಸುಪ್ರೀಂ ಎಚ್ಚರಿಕೆ

Update: 2020-10-29 17:19 GMT

ಹೊಸದಿಲ್ಲಿ,ಅ.29: ಸಾಮಾಜಿಕ ಜಾಲತಾಣಗಳಲ್ಲಿಯ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪ್ರಜೆಗಳನ್ನು ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಕರೆಸುವುದರ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ರಾಜ್ಯ ಸರಕಾರಗಳು ಮತ್ತು ಪೊಲೀಸರಿಗೆ ಎಚ್ಚರಿಕೆಯನ್ನು ನೀಡಿದೆ.

 ಫೇಸ್‌ಬುಕ್ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಪ.ಬಂಗಾಳ ಪೊಲೀಸರು ತನಗೆ ಹೊರಡಿಸಿರುವ ಸಮನ್ಸ್‌ನ್ನು ಪ್ರಶ್ನಿಸಿ ದಿಲ್ಲಿಯ ನಿವಾಸಿ ರೋಶನಿ ಬಿಸ್ವಾಸ್ (29) ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರ ಪೀಠವು,‘ಲಕ್ಷ್ಮಣ ರೇಖೆಯನ್ನು ದಾಟಬೇಡಿ,ಭಾರತವು ಮುಕ್ತದೇಶವಾಗಿಯೇ ಇರಲು ಬಿಡಿ. ಸರ್ವೋಚ್ಚ ನ್ಯಾಯಾಲಯವು ಇರುವುದು ವಾಕ್ ಸ್ವಾತಂತ್ರ್ಯದ ರಕ್ಷಣೆಗಾಗಿ. ಸಾಮಾನ್ಯ ಪ್ರಜೆಗಳಿಗೆ ಸರಕಾರದಿಂದ ಕಿರುಕುಳವಾಗದಂತೆ ನೋಡಿಕೊಳ್ಳಲೆಂದೇ ಸಂವಿಧಾನವು ಸರ್ವೋಚ್ಚ ನ್ಯಾಯಾಲಯವನ್ನು ಸೃಷ್ಟಿಸಿದೆ ’ಎಂದು ಹೇಳಿತು.

ಕೋಲ್ಕತ್ತಾದ ರಾಜಾ ಬಝಾರ್ ಪ್ರದೇಶದಲ್ಲಿಯ ಭಾರೀ ಜನಸಂದಣಿಯ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಬಿಸ್ವಾಸ್,ಇದು ಕೊರೋನವೈರಸ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದೆ. ರಾಜ್ಯ ಸರಕಾರವು ಈ ಬಗ್ಗೆ ಏನಾದರೂ ಮಾಡುವುದೇ ಎಂದು ಪ್ರಶ್ನಿಸಿದ್ದರು.

ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಕೋಲ್ಕತಾದ ಬಾಲಿಗಂಜ್ ಪೊಲೀಸ್ ಠಾಣೆಯಲ್ಲಿ ಮೇ 13ರಂದು ಬಿಸ್ವಾಸ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ರಾಜಾ ಬಝಾರ್‌ನಲ್ಲಿ ನಿರ್ದಿಷ್ಟ ಸಮುದಾಯದವರು ಬಹುಸಂಖ್ಯಾತರಾಗಿರುವುದರಿಂದ ಪ್ರದೇಶದಲ್ಲಿ ಲಾಕ್‌ಡೌನ್ ಉಲ್ಲಂಘನೆಗಳ ಬಗ್ಗೆ ರಾಜ್ಯ ಸರಕಾರವು ಮೃದು ನಿಲುವನ್ನು ತಳೆದಿದೆ ಎನ್ನುವುದನ್ನು ಫೇಸ್‌ಬುಕ್ ಪೋಸ್ಟ್‌ಗಳು ಸೂಚಿಸುತ್ತಿವೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

  ಜೂ.5ರಂದು ಬಿಸ್ವಾಸ್ ಲಾಕ್‌ಡೌನ್ ಮುಗಿದ ಬಳಿಕ ತಾನು ಹಾಜರಾಗುವುದಾಗಿ ಮುಚ್ಚಳಿಕೆಯನ್ನು ಬರೆದುಕೊಟ್ಟು ತನ್ನ ಬಂಧನದ ವಿರುದ್ಧ ಕೋಲ್ಕತಾ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದರು. ಬಳಿಕ ಕೋಲ್ಕತ್ತಾ ಪೊಲೀಸರು ತಮ್ಮೆದುರು ವಿಚಾರಣೆಗಾಗಿ ಹಾಜರಾಗುವಂತೆ ಬಿಸ್ವಾಸ್‌ಗೆ ಸಮನ್ಸ್ ಹೊರಡಿಸಿದ್ದರು. ಎಫ್‌ಐಆರ್ ರದ್ದತಿಯನ್ನು ಕೋರಿ ಬಿಸ್ವಾಸ್ ಕೋಲ್ಕತಾ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆಯು ಇನ್ನೂ ಬಾಕಿಯಿದ್ದು,ನ್ಯಾಯಾಲಯವು ಸೆ.29ರಂದು ಪೊಲೀಸರ ಎದುರು ಹಾಜರಾಗುವಂತೆ ಬಿಸ್ವಾಸ್‌ಗೆ ಆದೇಶಿಸಿತ್ತು. ಈ ಆದೇಶವನ್ನು ಬಿಸ್ವಾಸ್ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

 ಕೋಲ್ಕತಾದಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಬಿಸ್ವಾಸ್‌ಗೆ ಸಮನ್ಸ್ ಹೊರಡಿಸಿದ್ದನ್ನು ಆಕ್ಷೇಪಿಸಿದ ಸರ್ವೋಚ್ಚ ನ್ಯಾಯಾಲಯವು,ಅವರನ್ನು ದಿಲ್ಲಿಯಿಂದ ಕೋಲ್ಕತಾಕ್ಕೆ ಕರೆಸುವುದು ಕೇವಲ ಕಿರುಕುಳವಾಗಿದೆ. ನಾಳೆ ಕೋಲ್ಕತಾ,ಮುಂಬೈ,ಮಣಿಪುರ ಮತ್ತು ಚೆನ್ನೈ ಪೊಲೀಸರೂ ‘ನಿಮಗೆ ವಾಕ್ ಸ್ವಾತಂತ್ರ್ಯ ಬೇಕಲ್ಲವೇ,ನಾವು ನಿಮಗೆ ಪಾಠ ಕಲಿಸುತ್ತೇವೆ ’ಎಂಬ ಕಟು ಸಂದೇಶವನ್ನು ರವಾನಿಸಲು ಭಾರತದ ಇತರ ಭಾಗಗಳಿಂದ ಜನರನ್ನು ಕರೆಸಿಕೊಳ್ಳುತ್ತಾರೆ ಎಂದು ಹೇಳಿತು.

ಬಿಸ್ವಾಸ್ ಅವರನ್ನು ಪ್ರಶ್ನಿಸಲಾಗುತ್ತದೆ,ಅವರನ್ನು ಬಂಧಿಸುವುದಿಲ್ಲ ಎಂಬ ಪ.ಬಂಗಾಳ ಪೊಲೀಸರ ಪರ ವಕೀಲ ಆರ್.ಬಸಂತ್ ನಿವೇದನೆಗೆ ಪ್ರತಿಕ್ರಿಯಿಸಿದ ಪೀಠವು,ಇದು ವಾಕ್ ಸ್ವಾತಂತ್ರ್ಯದ ಹಕ್ಕನ್ನು ಬಳಸಿದ್ದಕ್ಕಾಗಿ ಓರ್ವ ಪ್ರಜೆಗೆ ಬೆದರಿಕೆಯಾಗಿದೆ. ಕೊರೋನ ವೈರಸ್ ಸಾಂಕ್ರಾಮಿಕವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಹೇಳಿದ್ದಕ್ಕಾಗಿ ಯಾರನ್ನೇ ಆದರೂ ಕಾನೂನು ಕ್ರಮಕ್ಕೊಳಪಡಿಸುವಂತಿಲ್ಲ. ಇದು ಸರಕಾರದ ವಿರುದ್ಧ ಬರೆಯಲು ಓರ್ವ ಪ್ರಜೆಗೆ ಎಷ್ಟು ಧೈರ್ಯ? ನಾವು ಆಕೆಯನ್ನು ದೇಶದ ಯಾವುದೇ ಭಾಗದಿಂದ ಕರೆಸಿ ಬೆಂಡೆತ್ತುತ್ತೇವೆ ಎಂದಂತಿದೆ ಎಂದು ಹೇಳಿತು.

ಬಿಸ್ವಾಸ್‌ಗೆ ಇ-ಮೇಲ್ ಮೂಲಕ ಪ್ರಶ್ನೆಗಳನ್ನು ಕಳುಹಿಸುವಂತೆ ಅಥವಾ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ ಪೀಠವು,ವಿಚಾರಣೆಗೆ ಸಹಕರಿಸುವಂತೆ ಬಿಸ್ವಾಸ್ ಅವರಿಗೆ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News