ಸಹೋದರಿ ನೀಡಿದ ಔಷಧ ಸುಶಾಂತ್ ಆತ್ಮಹತ್ಯೆಗೆ ಕಾರಣ !

Update: 2020-11-03 18:02 GMT

ಮುಂಬೈ, ನ. 3: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಆತನ ಸಹೋದರಿಯರಾದ ಪ್ರಿಯಾಂಕಾ ಸಿಂಗ್, ಮೀತು ಸಿಂಗ್ ಹಾಗೂ ದಿಲ್ಲಿ ಮೂಲದ ಹೃದ್ರೋಗ ತಜ್ಞ ಡಾ. ತರುಣ್ ಕುಮಾರ್ ಕಾರಣ ಎಂಬ ನಟಿ ರಿಯಾ ಚಕ್ರವರ್ತಿ ಅವರ ಆರೋಪದ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳುವುದು ನಮ್ಮ ಶಾಸನ ಬದ್ಧ ಕರ್ತವ್ಯವಾಗಿತ್ತು ಎಂದು ಪೊಲೀಸರು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮುಂಬೈ ಪೊಲೀಸರು ಸಲ್ಲಿಸಿದ ಅಫಿಡವಿಟ್‌ನಲ್ಲಿ, ರೋಗಿಯನ್ನು ಭೌತಿಕವಾಗಿ ಯಾವುದೇ ಪರೀಕ್ಷೆ ನಡೆಸದೆ ಎನ್‌ಡಿಪಿಎಸ್ ಕಾಯ್ದೆ ಉಲ್ಲಂಘಿಸಿ ಮನಸ್ಸಿನ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಒಳಗೊಂಡ ಔಷಧದ ಶಿಫಾರಸನ್ನು ಪ್ರಿಯಾಂಕ ತನ್ನ ಸಹೋದರ ಸುಶಾಂತ್‌ಗೆ ಕಳುಹಿಸಿದ್ದರು ಎಂದು ಹೇಳಲಾಗಿದೆ.

ಈ ಅಂಶ ಉಳ್ಳ ಔಷಧ ಸೇವನೆ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ರಿಯಾ ಚಕ್ರವರ್ತಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ತಿಳಿಸಲಾಗಿದೆ. ರಿಯಾ ಚಕ್ರವರ್ತಿಯ ಮಾಹಿತಿ ಅರಿವಿನ ಅಪರಾಧ ನಡೆದಿರುವುದನ್ನು ಬಹಿರಂಗಗೊಳಿಸಿದೆ ಹಾಗೂ ತನಿಖೆಯ ಅಗತ್ಯವನ್ನು ಒತ್ತಿ ಹೇಳಿದೆ ಎಂದು ಪ್ರಥಮ ಮಾಹಿತಿ ವರದಿ ದಾಖಲಿಸಿರುವುದನ್ನು ಸಮರ್ಥಿಸಿಕೊಂಡಿರುವ ಹಿರಿಯ ಇನ್ಸ್‌ಪೆಕ್ಟರ್ ನಿಖಿಲ್ ಕಾಪ್ಸೆ ಹೇಳಿದ್ದಾರೆ. ತನ್ನ ಸಹೋದರನ ವೈದ್ಯಕೀಯ ಶಿಫಾರಸನ್ನು ತಿರುಚಿದ ಆರೋಪಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್ ಅನ್ನು ರದ್ದುಪಡಿಸುವಂತೆ ಕೋರಿ ಪ್ರಿಯಾಂಕಾ ಸಿಂಗ್ ಹಾಗೂ ಮೀತು ಸಿಂಗ್ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿದೆ. ರಿಯಾ ಚಕ್ರವರ್ತಿ ದೂರು ದಾಖಲಿಸಿದ ಬಳಿಕ ಈ ಇಬ್ಬರು ಸಹೋದರಿಯ ವಿರುದ್ಧ ಸೆಪ್ಟಂಬರ್‌ನಲ್ಲಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News