ಬಾಂಗ್ಲಾದಲ್ಲಿ ನಡೆದ ಭಾರತ ವಿರೋಧಿ ರ್ಯಾಲಿ ಕೊಲ್ಕತ್ತಾದಲ್ಲಿ ನಡೆದಿದ್ದು ಎಂದ ಮಧು ಕೀಶ್ವರ್ ವಿರುದ್ಧ ಕೇಸ್
ಕೋಲ್ಕತ್ತಾ : ಬಾಂಗ್ಲಾದೇಶದಲ್ಲಿ ನಡೆದ ಇಸ್ಲಾಮಿಕ್ ರ್ಯಾಲಿಯ ವೀಡಿಯೋ ಒಂದನ್ನು ಪೋಸ್ಟ್ ಮಾಡಿ ಅದು ಕೋಲ್ಕತ್ತಾದಲ್ಲಿ ನಡೆದ ರ್ಯಾಲಿ ಎಂದು ಟ್ವೀಟ್ ಮಾಡಿದ್ದ ದಿಲ್ಲಿ ಮೂಲದ ಶಿಕ್ಷಣ ತಜ್ಞೆ ಹಾಗೂ ಹೋರಾಟಗಾರ್ತಿ ಮಧು ಪೂರ್ಣಿಮಾ ಕೀಶ್ವರ್ ಅವರ ವಿರುದ್ಧ ಕೋಲ್ಕತ್ತಾ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
ಸಾವಿರಾರು ಮುಸ್ಲಿಮರು ಮೆರವಣಿಗೆಯಲ್ಲಿ ಸಾಗುತ್ತಿರುವುದು ಹಾಗೂ ಹಿನ್ನೆಲೆಯಲ್ಲಿ ಯಾವುದೋ ಹಾಡು ಕೂಡ ಕೇಳಿಸುತ್ತಿರುವ ವೀಡಿಯೋವನ್ನು ಅವರು ಪೋಸ್ಟ್ ಮಾಡಿದ್ದರು. ಆ ಹಾಡಿನ ಪದಗಳು ಬಂಗಾಳಿ ಭಾಷೆಯಲ್ಲಿದ್ದವು ಹಾಗೂ ಅವುಗಳು ಬಾಂಗ್ಲಾದೇಶವನ್ನು ಉಲ್ಲೇಖಿಸುತ್ತಿದ್ದವು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಲವರ ಕೈಯ್ಯಲ್ಲಿ ಬಾಂಗ್ಲಾದೇಶದ ಧ್ವಜಗಳಿದ್ದವು. ``ಹಿಂದುಸ್ತಾನಕ್ಕೆ (ಭಾರತ) ತನ್ನ ಸ್ಥಾನ ದೊರೆಯುವುದಿಲ್ಲ ಏಕೆಂದರೆ ಅದು ಇಸ್ಲಾಂ ವಿರುದ್ಧದ ನಿಲುವು ತಳೆದಿದೆ,'' ಎಂದು ಹಾಡಿನ ಒಂದು ಸಾಲಿನಲ್ಲಿ ಹೇಳಲಾಗಿದೆ. ಈ ಕುರಿತು ಟ್ವೀಟ್ ಮಾಡಿದ ಕೀಶ್ವರ್ ``ಕೋಲ್ಕತ್ತಾದಲ್ಲಿ'' ಎಂದು ಬರೆದಿದ್ದಾರೆ.
ಈ ಪೋಸ್ಟ್ ಅನ್ನು 2,000ಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದರಲ್ಲದೆ 4,000ಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದರು.
ಇದೊಂದು ನಕಲಿ ಟ್ವೀಟ್ ಎಂದು #ಫೇಕ್ನ್ಯೂಸ್ಅಲರ್ಟ್ ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ಕೋಲ್ಕತ್ತಾ ಪೊಲೀಸರು ಟ್ವೀಟ್ ಮಾಡಿದ್ದಾರೆ.