ಸಚಿವರಿಗೆ ಕರೆಮಾಡಿ ಅರ್ನಬ್ ಆರೋಗ್ಯ ವಿಚಾರಿಸಿದ ಮಹಾರಾಷ್ಟ್ರ ರಾಜ್ಯಪಾಲ
ಮುಂಬೈ, ನ.9: ಬಂಧನದಲ್ಲಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಆರೋಗ್ಯಸ್ಥಿತಿ ಹಾಗೂ ಅವರಿಗೆ ಒದಗಿಸಿರುವ ಭದ್ರತಾ ವ್ಯವಸ್ಥೆಯ ಕುರಿತು ಮಹಾರಾಷ್ಟ್ರ ರಾಜ್ಯಪಾಲ ಭಗತ್ಸಿಂಗ್ ಕೋಶ್ಯಾರಿ ತೀವ್ರ ಆತಂಕ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
ಸೋಮವಾರ ರಾಜ್ಯದ ಗೃಹ ಸಚಿವ ಅನಿಲ್ ದೇಶ್ಮುಖ್ಗೆ ಕರೆ ಮಾಡಿದ ರಾಜ್ಯಪಾಲರು ಅರ್ನಬ್ ಆರೋಗ್ಯದ ಬಗ್ಗೆ ವಿಚಾರಿಸಿದರು. ಅರ್ನಬ್ರನ್ನು ಭೇಟಿಯಾಗಿ ಮಾತನಾಡಲು ಕುಟುಂಬದ ಸದಸ್ಯರಿಗೆ ಅವಕಾಶ ಮಾಡಿಕೊಡುವಂತೆ ಗೃಹ ಸಚಿವರಿಗೆ ಸಲಹೆ ಮಾಡಿದರು ಎಂದು ರಾಜ್ಯಪಾಲರ ಕಚೇರಿ ಹೊರಡಿಸಿದ ಹೇಳಿಕೆ ತಿಳಿಸಿದೆ. ಅರ್ನಬ್ರನ್ನು ಬಂಧಿಸಿದ ರೀತಿಯ ಬಗ್ಗೆಯೂ ರಾಜ್ಯಪಾಲರು ಕಳವಳ ಸೂಚಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ನನ್ನ ಜೀವಕ್ಕೆ ಅಪಾಯವಿದ್ದು ನನ್ನನ್ನು ಥಳಿಸಲಾಗಿದೆ. ವಕೀಲರೊಂದಿಗೆ ಮಾತನಾಡಲು ಅಥವಾ ಕುಟುಂಬದ ಸದಸ್ಯರು ನನ್ನನ್ನು ಭೇಟಿ ಮಾಡಲೂ ಅವಕಾಶ ನೀಡುತ್ತಿಲ್ಲ.
ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡುವುದನ್ನು ತಿರಸ್ಕರಿಸಿದ್ದರೂ ಅವರು ಅನಗತ್ಯವಾಗಿ ಕಾನೂನು ಪ್ರಕ್ರಿಯೆ ವಿಳಂಬಿಸಿ ನನ್ನನ್ನು ಕಂಬಿಗಳ ಹಿಂದೆಯೇ ಇರುವಂತೆ ತಂತ್ರ ಹೂಡುತ್ತಿದ್ದಾರೆ ಎಂದು ರವಿವಾರ ಅರ್ನಬ್ ಹೇಳಿಕೆ ನೀಡಿದ್ದರು.