ಆರೋಪಿಗಳನ್ನು ಬಂಧಿಸಿ ದೇಶದಿಂದ ಹೊರಗಟ್ಟಿ: ಐವನ್ ಡಿಸೋಜ

Update: 2020-11-28 07:33 GMT

ಮಂಗಳೂರು, ನ. 28: ನಗರದ ಬಿಜೈ ಸಮೀಪದ ಅಪಾರ್ಟ್‌ಮೆಂಟ್‌ವೊಂದರ ಗೋಡೆ ಮೇಲೆ ಉಗ್ರ ಸಂಘಟನೆಯ ಪರ ಬರಹ ಬರೆದಿರುವ ದುಷ್ಕರ್ಮಿಗಳನ್ನು ತಕ್ಷಣ ಪತ್ತೆ ಹಚ್ಚಿ, ದೇಶದ್ರೋಹದ ಪ್ರಕರಣ ದಾಖಲಿಸಿ ದೇಶದಿಂದ ಹೊರಗಟ್ಟಬೇಕು ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದ್ದಾರೆ.

ಉಗ್ರಗಾಮಿ ಸಂಘಟನೆ ಪರ ಗೋಡೆ ಬರಹವನ್ನು ವಿರೋಧಿಸಿ ಯುವ ಇಂಟಕ್ ವತಿಯಿಂದ ನಗರದ ಮಿನಿ ವಿಧಾನ ಸೌಧದ ಎದುರು ಇಂದು ಆಯೋಜಿಸಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಇದು ದೇಶದ ಭದ್ರತೆಗೆ ಸವಾಲಿನ ಪ್ರಕರಣವಾಗಿದೆ. ದೇಶದ ಸುರಕ್ಷತೆಗೆ ದೇಶದ ಸೈನಿಕರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಆದರೆ, ಈ ರೀತಿ ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡಲು ಮುಂದಾಗುವ ದುಷ್ಟಶಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕಾಗಿದೆ. ಅಷ್ಟು ಬರಹವನ್ನು ಬರೆಯಲು ಸಾಕಷ್ಟು ಸಮಯ ಬೇಕು. ನಗರದ ಹೃದಯ ಭಾಗದಲ್ಲಿ ಇಷ್ಟೊಂದು ಧೈರ್ಯದಲ್ಲಿ ಈ ಕೃತ್ಯ ನಡೆದಿರುವುದನ್ನು ಕಂಡಾಗ ಜಿಲ್ಲೆಯ ಪೊಲೀಸ್ ವೈಫಲ್ಯವನ್ನು ಇದು ಎತ್ತಿ ತೋರಿಸುತ್ತಿದೆ. ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಯಾವುದೇ ಮೃದು ಧೋರಣೆ ತಾಳದೆ ಆರೋಪಿಗಳನ್ನು ನಗರದಲ್ಲಿ ಮೆರವಣಿಗೆ ನಡೆಸಬೇಕು ಎಂದು ಐವನ್ ಒತ್ತಾಯಿಸಿದರು.

ನ್ಯಾಯವಾದಿ ದಿನಕರ ಶೆಟ್ಟಿ ಮಾತನಾಡಿ, ನಗರದ ಪ್ರತಿಯೊಂದು ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾ ಇದೆ. ಹಾಗಿದ್ದರೂ ಆರೋಪಿಗಳನ್ನು ಇನ್ನೂ ಪತ್ತೆಹಚ್ಚಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ಪೊಲೀಸರ ಬಗ್ಗೆ ಅನುಮಾನ ಹುಟ್ಟಿಸುತ್ತಿದೆ. ಈ ಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ದೇಶದ್ರೋಹದ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಇಂಟಕ್ ಮುಖಂಡರಾದ ಮನೋಹರ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಸುನೀಲ್ ಶೆಟ್ಟಿ, ಹರೀಶ್, ಪುನೀತ್ ಮೊದಲಾದವರು ಭಾಗವಹಿಸಿದ್ದರು. ಪ್ರತಿಭಟನಾಕಾರರು ಆರಂಭದಲ್ಲಿ ಜಿಲ್ಲೆಯಲ್ಲಿ ಶಾಂತಿ ಕದಡುವ ದುಷ್ಕರ್ಮಿಗಳಿಗೆ ಧಿಕ್ಕಾರ ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News