ಉಡುಪಿ: ನ.29ರಂದು ಹಾಸ್ಯ ಭಾಷಣಗಾರ್ತಿ ಸಂಧ್ಯಾ ಶೆಣೈಗೆ 60ರ ಅಭಿನಂದನೆ
ಉಡುಪಿ, ನ. 28: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಹಕಾರದಲ್ಲಿ ರವಿವಾರ ಸಂಜೆ 4:45ರಿಂದ ಉಡುಪಿಯ ಎಂಜಿಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ಹಾಸ್ಯ ಭಾಷಣಕಾರರಾದ ಸಂಧ್ಯಾ ಶೆಣೈ ಅವರಿಗೆ 60ವರ್ಷ ಪೂರ್ಣಗೊಂಡ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಸಭಾಧ್ಯಕ್ಷತೆಯನ್ನು ಯಕ್ಷಗಾನ ಅಕಾಡಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ವಹಿಸಲಿದ್ದಾರೆ. ಅತಿಥಿಗಳಾಗಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕರಾದ ಪ್ರೊ. ವರದೇಶ್ ಹಿರೇಗಂಗೆ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ ಹಾಗೂ ಅಧ್ಯಕ್ಷ ಪ್ರೊ.ಶಂಕರ್ ಉಪಸ್ಥಿತರಿರುವರು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಇದೇ ಸಂದರ್ಭದಲ್ಲಿ ಸಂದ್ಯಾ ಶೆಣೈ ಅವರ ಲಲಿತ ಪ್ರಬಂಧ ಪುಸ್ತಕ ‘ಮುಸ್ಸಂಜೆಯಲ್ಲೊಂದು ಮುಂಜಾವು’ ಬಿಡುಗಡೆಗೊಳ್ಳಲಿದೆ. ತುಳುಕೂಟ, ಸುಹಾಸಂ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ರಂಗಭೂಮಿ, ನಡುಮನೆ ಮುಂತಾದ ಸಂಘಟನೆಗಳಲ್ಲಿ ಇವರು ಸಕ್ರಿಯ ಸದಸ್ಯರಾಗಿದ್ದು, ನಡುಮನೆ ಸಾಹಿತ್ಯ ಸಂವಾದ ವೇದಿಕೆ ಹಾಗೂ ಸುಹಾಸಂ ಸಂಘಟನೆಯ ಮೂಲಕ ಇವರ ಹಾಸ್ಯಪ್ರಜ್ಞೆ ಹಾಗೂ ನಗಿಸುವ ಕಲೆ ಬೆಳಕಿಗೆ ಬಂದಿತ್ತು.