ಭಟ್ಕಳ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರನ್ನು ಸ್ವಾಗತಿಸಿದ ಕಾಂಗ್ರೆಸ್ ಮುಖಂಡರು
ಭಟ್ಕಳ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ರನ್ನು ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಂಸುದ್ದೀನ್ ವೃತ್ತದಲ್ಲಿ ಸ್ವಾಗತ ನೀಡಲಾಯಿತು.
ಉ.ಕ. ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ಬಲವರ್ಧನೆಗಾಗಿ ಪ್ರವಾಸ ಕೈಗೊಂಡಿರುವ ಡಿ.ಕೆ.ಶಿವಕುಮಾರ್ ಶುಕ್ರವಾರ ಸಂಜೆ ಕಾರವಾರ ತಲುಪಿ, ಅಲ್ಲಿಂದ ಶನಿವಾರ ಬೆಳಗ್ಗೆ ಸಿರ್ಸಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಸಭೆಯನ್ನು ನಡೆಸಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಪಡಿಸುವ ಬಗ್ಗೆ ಅವರು ಕಾರ್ಯಕರ್ತರಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಸಿರ್ಸಿಯ ಕಾರ್ಯಕ್ರಮ ಮುಗಿಸಿ ಶನಿವಾರ ಸಂಜೆ ಭಟ್ಕಳ ತಲುಪಿದ ಅವರನ್ನು ತಂಝೀಮ್ ಮುಖಂಡರು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಸೇರಿದಂತೆ ನೂರಾರು ಮುಖಂಡರು ಕಾರ್ಯಕರ್ತರು ಆದರದಿಂದ ಬರಮಾಡಿಕೊಂಡರು, ಈ ಸಂದರ್ಭದಲ್ಲಿ ಭಟ್ಕಳದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಸೈಯ್ಯದ್ ಪರ್ವೇಜ್, ಪುರಸಭೆ ಅಧ್ಯಕ್ಷ ಕಾಸಿಮ್ಜಿ ಪರ್ವೇಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯ್ಕ, ಮುಖಂಡರಾದ ನಾರಾಯಣ ನಾಯ್ಕ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕೇವಲ ಮೂರು ನಿಮಿಷಗಳ ಕಾಲ ಭಟ್ಕಳದಲ್ಲಿದ್ದ ಡಿ.ಕೆ.ಶಿವಕುಮಾರ್ ಪೊಲೀಸ್ ಬಂದೋಬಸ್ತಿನಲ್ಲಿ ಕುಂದಾಪುರಕ್ಕೆ ಪ್ರಯಾಣಿಸಿದರು.