ಈ ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನಿನಡಿ ಪ್ರಥಮ ಪ್ರಕರಣ ದಾಖಲು
Update: 2020-11-29 14:47 GMT
ಲಕ್ನೊ, ನ.29: ರಾಜ್ಯದಲ್ಲಿ ಹೊಸದಾಗಿ ಜಾರಿಗೆ ಬಂದಿರುವ ಬಲವಂತದ ಮತಾಂತರ ನಿಷೇಧ ಕಾನೂನಿನಡಿ ಉತ್ತರಪ್ರದೇಶ ಪೊಲೀಸರು ಶನಿವಾರ ಪ್ರಥಮ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಡಿಯೊರೇನಿಯಾ ಪೊಲೀಸ್ ಠಾಣೆಯಲ್ಲಿ ಶನಿವಾರ ಹಿಂದು ಮಹಿಳೆಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಸ್ಲಿಂ ಯುವಕ ತನ್ನ ಪುತ್ರಿಯನ್ನು ಅಪಹರಿಸಿದ್ದು ಅವಳನ್ನು ಬಲವಂತವಾಗಿ ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದಾನೆ. ಇದನ್ನು ವಿರೋಧಿಸಿದ ತಮಗೆ ಜೀವಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಯುವಕನ ವಿರುದ್ದ ಅಪಹರಣ, ಜೀವಬೆದರಿಕೆ ಮತ್ತು ಬಲವಂತದ ಮತಾಂತರ ನಡೆಸಿದ ಪ್ರಕರಣ ದಾಖಲಾಗಿದ್ದು ಆತ ತಲೆಮರೆಸಿಕೊಂಡಿದ್ದಾನೆ ಎಂದು ಬರೇಲಿ ಗ್ರಾಮೀಣ ಪೊಲೀಸ್ ಅಧೀಕ್ಷಕ ಸಂಸಾರ್ ಸಿಂಗ್ ಹೇಳಿದ್ದಾರೆ.
ಬಲವಂತದ ಮತಾಂತರ ನಿಷೇಧಿಸಿದ ಉತ್ತರಪ್ರದೇಶ ಸರಕಾರದ ಸುಗ್ರೀವಾಜ್ಞೆಗೆ ಶನಿವಾರ ರಾಜ್ಯಪಾಲರು ಅಂಗೀಕಾರ ನೀಡಿದ್ದಾರೆ.