×
Ad

ಜಮ್ಮು ಕಾಶ್ಮೀರ: ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ; ಬಿಎಸ್‌ಎಫ್ ಅಧಿಕಾರಿ ಸಾವು

Update: 2020-12-01 23:16 IST

ಜಮ್ಮು, ಡಿ. 1: ಜಮ್ಮು ಹಾಗೂ ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಮಂಗಳವಾರ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪರಿಣಾಮ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಓರ್ವ ಸಬ್ ಇನ್ಸ್‌ಪೆಕ್ಟರ್ ಮೃತಪಟ್ಟಿದ್ದಾರೆ.

ಭಾರತದ ಭೂ ಪ್ರದೇಶದ ವಿವಿಧ ಭಾಗಗಳಲ್ಲಿ ನವೆಂಬರ್‌ನಲ್ಲಿ ಪಾಕಿಸ್ತಾನ ಸೇನೆ ಹಲವು ಬಾರಿ ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ 9 ಭದ್ರತಾ ಸಿಬ್ಬಂದಿ ಸಹಿತ 15 ಮಂದಿ ಮೃತಪಟ್ಟಿದ್ದರು. ‘‘ಗಡಿ ನಿಯಂತ್ರಣ ರೇಖೆಯ ರಾಜೌರಿ ವಲಯದಲ್ಲಿ ಪಾಕಿಸ್ತಾನ ಸೇನೆ ಮತ್ತೊಮ್ಮೆ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತು ಇದರಿಂದ ಬಿಎಸ್‌ಎಫ್‌ನ ಸಬ್ ಇನ್ಸ್‌ಪೆಕ್ಟರ್ ಪಾವೋಟಿನಸ್ ಗುಯೆಟೆ ಮೃತಪಟ್ಟರು’’ ಎಂದು ಬಿಎಸ್‌ಎಫ್‌ನ ಹೇಳಿಕೆ ತಿಳಿಸಿದೆ.

ಸಬ್ ಇನ್ಸ್‌ಪೆಕ್ಟರ್ ಪಾವೋಟಿನಸ್ ಗುಯೆಟೆ ಅವರಿಗೆ ಗೌರವ ಸಲ್ಲಿಸಿರುವ ಬಿಎಸ್‌ಎಫ್‌ನ ಜಮ್ಮು ಮುಂಚೂಣಿಯ ಐಜಿ ಎನ್.ಎಸ್. ಜಮ್ವಾಲ್, ಗುಯೆಟೆ ಅವರು ಗಡಿಯ ಪ್ರಾಮಾಣಿಕ ಹಾಗೂ ಪರಾಕ್ರಮಿ ಯೋಧ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News