ದ.ಕ.ಜಿಲ್ಲೆ: ಅಲ್ಪಸಂಖ್ಯಾತ ಸಮುದಾಯದ 7,259 ಮಂದಿಯ ವಿದ್ಯಾರ್ಥಿ ವೇತನ ಬಾಕಿ

Update: 2020-12-21 07:23 GMT

2019-20ನೇ ಶೈಕ್ಷಣಿಕ ವರ್ಷ

ಮಂಗಳೂರು, ಡಿ.21: ಕೊರೋನ ಹಿನ್ನೆಲೆಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂಬ ಅಸಮಾಧಾನದ ಮಧ್ಯೆ ಅಲ್ಪಸಂಖ್ಯಾತ ಸಮುದಾ ಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ನಿಟ್ಟಿನಲ್ಲಿ ರಾಜ್ಯ ಸರಕಾರ ನೀಡುತ್ತಿರುವ ವಿದ್ಯಾರ್ಥಿ ವೇತನವೂ ಸರಿಯಾಗಿ ಪಾವತಿಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಇದು ವಿದ್ಯಾರ್ಥಿಗಳ ಒಟ್ಟು ಶೈಕ್ಷಣಿಕ ಸಾಧನೆಯ ಮೇಲೆ ಪ್ರತಿಕೂಲ ಪರಿಣಾಮ ಬೀಳಲಿದೆ ಎಂಬ ಮಾತು ವ್ಯಕ್ತವಾಗುತ್ತಿದೆ.

2019-20ನೆ ಸಾಲಿನಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಗೂ ಮೆರಿಟ್ ಕಮ್ ಮೀನ್ ಸಹಿತ ದ.ಕ.ಜಿಲ್ಲೆಯ 37,722 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 28,667 ವಿದ್ಯಾರ್ಥಿಗಳಿಗೆ 17,39,39,667 ಕೋ.ರೂ. ವಿದ್ಯಾರ್ಥಿ ವೇತನ ಪಾವತಿಸಲಾಗಿದೆ. ಉಳಿದಂತೆ 7,259 ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ ಪಾವತಿ ಯಾಗಲು ಬಾಕಿ ಇದ್ದು, ಹಣ ಜಮೆಯಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಅಥವಾ ಪೋಷಕರು ಬ್ಯಾಂಕ್‌ಗಳಿಗೆ ಅಲೆದಾಡುವುದು ಸಾಮಾನ್ಯವಾಗಿದೆ.

2020-21ನೆ ಶೈಕ್ಷಣಿಕ ವರ್ಷದಲ್ಲಿ ಶಾಲಾ ತರಗತಿ ಆರಂಭವಾಗದಿದ್ದರೂ ಕೂಡ ಆನ್‌ಲೈನ್ ತರಗತಿ ನಡೆಯುತ್ತಿದೆ. ಕೊರೋನ ಹಾವಳಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೀಡಾದ ಪೋಷಕರು ಆನ್‌ಲೈನ್ ಮೂಲಕ ಕಲಿಯುವ ತಮ್ಮ ಮಕ್ಕಳ ಅಡ್ಮಿಶನ್ ಫೀಸ್ (ಪ್ರವೇಶ ಶುಲ್ಕ) ಕಟ್ಟಲು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಶಿಕ್ಷಣ ಸಂಸ್ಥೆಗಳು ಕೂಡಾ ಅಡ್ಮಿಶನ್ ಫೀಸ್ ಏಕಾಏಕಿ ಹೆಚ್ಚಿಸಿ ಒಂದೇ ಕಂತಿನಲ್ಲಿ ಎಲ್ಲಾ ಶುಲ್ಕವನ್ನು ಕಟ್ಟಲು ಒತ್ತಾಯಿಸುವ ಮೂಲಕ ಪೋಷಕರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರೆಸಲು ಸ್ಕಾಲರ್‌ಶಿಪ್‌ಗೆ ಅವಲಂಬಿತರಾಗಿದ್ದಾರೆ. ಆದರೆ ಸ್ಕಾಲರ್‌ಶಿಪ್ ಸಮರ್ಪಕವಾಗಿ ವಿತರಣೆಯಾಗದ ಕಾರಣ ಬಹುತೇಕ ವಿದ್ಯಾಥಿಗರ್ಳು ಆತಂಕ ಕ್ಕೊಳಗಾಗಿದ್ದಾರೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಿ ಮೆಟ್ರಿಕ್, ಪೋಸ್ಟ್ ಮೆಟ್ರಿಕ್, ವಿದ್ಯಾಸಿರಿ, ಅರಿವು ಸಾಲ ಇತ್ಯಾದಿ ಸ್ಕಾಲರ್‌ಶಿಪ್ ಯೋಜನೆಯನ್ನು ಸರಕಾರ ಪ್ರಕಟಿಸಿದೆ. ಆದರೆ ಕೆಲವು ವರ್ಷಗಳಿಂದ ಬಹುತೇಕ ವಿದ್ಯಾರ್ಥಿಗಳ ಅರ್ಜಿಯನ್ನು ಇಲಾಖೆಯು ಕ್ಷುಲ್ಲಕ ಕಾರಣಗಳನ್ನು ನೀಡಿ ವಿಲೇವಾರಿ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಕೆಲವರಿಗೆ ಸ್ಕಾಲರ್‌ಶಿಪ್ ಮಂಜೂರಾದರೂ ತಮ್ಮ ಖಾತೆಗಳಿಗೆ ಹಣ ವರ್ಗಾವಣೆಯಾಗದ ಕಾರಣ ಅಲ್ಪ ಸಂಖ್ಯಾತರ ಇಲಾಖೆಯ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿದ್ಯಾರ್ಥಿ ವೇತನಕ್ಕಾಗಿ ಪ್ರಸಕ್ತ ಸಾಲಿನಲ್ಲಿ 270 ಕೋ. ರೂ ಅನುದಾನ ನಿಗದಿಗೊಳಿಸಿತ್ತು. ಆದರೆ ಈಗ ರಾಜ್ಯ ಸರಕಾರ ತನ್ನ ಪಾಲಿನ ಅನುದಾನ ಬಿಡುಗಡೆಗೊಳಿಸದಿರುವ ಕಾರಣ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್ ದೊರಕದೆ ಅಸಹಾಯಕರಾಗಿದ್ದಾರೆ.

ಫೆಲೋಶಿಪ್ ಕಡಿತ

ಈ ಮಧ್ಯೆ ರಾಜ್ಯ ಸರಕಾರವು ಪಿಎಚ್‌ಡಿ ಮತ್ತು ಎಂಫಿಲ್ ಫೆಲೋಶಿಪ್‌ನ್ನೂ ಕೂಡ ಕಡಿತಗೊಳಿಸಿದೆ. 2016-17ರಿಂದ ಜಾರಿಯಲ್ಲಿರುವ ಈ ಯೋಜನೆಯ ಪ್ರಕಾರ ಪಿಎಚ್‌ಡಿ (3 ವರ್ಷ) ಮತ್ತು ಎಂಫಿಲ್ (2 ವರ್ಷ) ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಮಾಸಿಕ 25,000 ರೂ.ವನ್ನು ನೀಡುತ್ತಿತ್ತು. ಅಲ್ಲದೆ ನಿರ್ವಹಣಾ ವೆಚ್ಚವಾಗಿ ವರ್ಷಕ್ಕೊಂದು ಬಾರಿ 10 ಸಾವಿರ ರೂ. ನೀಡುತ್ತಿತ್ತು. ಆದರೆ ರಾಜ್ಯ ಸರಕಾರ ದಿಢೀರ್ ಆದೇಶ ಹೊರಡಿಸಿ ಮಾಸಿಕ ಪ್ರೊತ್ಸಾಹ ಧನವನ್ನು 8,333 ರೂ.ಗೆ ಇಳಿಸಿದೆ. ಅಂದರೆ ವರ್ಷಕ್ಕೆ ಕೇವಲ 1 ಲಕ್ಷ ರೂ. ಮಾತ್ರ ನೀಡುವುದಾಗಿ ತಿಳಿಸಿದೆ. ಅಲ್ಲದೆ ವಾರ್ಷಿಕ ನಿರ್ವಹಣಾ ವೆಚ್ಚವನ್ನು ಕೂಡ ಹಿಂತೆಗೆದಿದೆ. ಇದರಿಂದ ರಾಜ್ಯದ ಸುಮಾರು 300ರಷ್ಟು ಅಲ್ಪಸಂಖ್ಯಾತ ಸಮುದಾಯದ ಸಂಶೋಧನಾ ವಿದ್ಯಾರ್ಥಿಗಳು ಸಮಸ್ಯೆಗೊಳಗಾಗಿದ್ದಾರೆ. ದ.ಕ.ಜಿಲ್ಲೆಯಲ್ಲೇ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 23 ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗಿದೆ ಎಂದು ತಿಳಿದು ಬಂದಿದೆ.

ನಾನು ದೇರಳಕಟ್ಟೆಯ ಯೆನೆಪೊಯ ವಿವಿಯಲ್ಲಿ 2018-19ನೆ ಸಾಲಿನಿಂದ ಪಿಎಚ್‌ಡಿ ಮಾಡುತ್ತಿದ್ದೇನೆ. ಮೊದಲ ವರ್ಷ ನನ್ನ ಫೆಲೋಶಿಪ್ ಮೊತ್ತ ಸಂಪೂರ್ಣವಾಗಿ ಬಂದಿದೆ. ಆದರೆ 2019-20ನೇ ಸಾಲಿನ ಮೊತ್ತ ಇನ್ನೂ ಬಂದಿಲ್ಲ. ಅಲ್ಲದೆ ಆ ಮೊತ್ತವನ್ನೂ ಕಡಿತಗೊಳಿಸಿರುವ ಬಗ್ಗೆ ಅಧಿಕೃತ ಮಾಹಿತಿಯ ಸುತ್ತೋಲೆ ಬಂದಿದೆ. ಫೆಲೋಶಿಪ್ ಮೊತ್ತ ಕಡಿತಕ್ಕೆ ಕಾರಣ ಏನೂ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಇದರಿಂದ ನನ್ನಂತಹ ಸಂಶೋಧನಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಈ ಮಧ್ಯೆ ಮೂರು ವರ್ಷದೊಳಗೆ ಸಂಶೋಧನಾ ಪ್ರಬಂಧ ಮಂಡಿಸದಿದ್ದರೆ ಶೇ.12ರ ಬಡ್ಡಿದರದಲ್ಲಿ ಫೆಲೋಶಿಪ್ ಮೊತ್ತವನ್ನು ಮರಳಿಸಬೇಕು ಎಂಬ ಎಚ್ಚರಿಕೆಯೂ ಬಂದಿದೆ. ಇದು ಕೂಡ ಅನ್ಯಾಯವಾಗಿದೆ. ಸಂಬಂಧಪಟ್ಟವರು ಮಧ್ಯಪ್ರವೇಶಿಸಬೇಕಿದೆ.

- ಖತೀಜಾ ಮುಹ್ಸೀನಾ, ಸಂಶೋಧನಾ ವಿದ್ಯಾರ್ಥಿನಿ, ಉಪ್ಪಿನಂಗಡಿ

ವಿದ್ಯಾರ್ಥಿ ವೇತನ ಪಾವತಿಯಲ್ಲಿ ಸ್ವಲ್ಪ ವಿಳಂಬವಾಗಿದೆ. ಇದರಿಂದ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಯನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾ ಗಿದೆ. ಈಗಾಗಲೆ ಅರ್ಜಿ ಸಲ್ಲಿಸಿದವರ ಪೈಕಿ ಶೇ.80ರಷ್ಟು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಪಾವತಿಯಾಗಿದೆ. ಇನ್ನುಳಿದವರಿಗೆ ಹಂತ ಹಂತವಾಗಿ ಪಾವತಿಯಾಗಲಿದೆ. 2016-17ರಿಂದ ಈವರೆಗೆ ಪಿಎಚ್‌ಡಿ, ಎಂಪಿಲ್ ಮಾಡುವ 38 ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಲಾಗಿದೆ.

- ಖಾದರ್ ಶಾ, ಪ್ರಭಾರ ಅಧಿಕಾರಿ, ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ರಾಜ್ಯ ಬಿಜೆಪಿ ಸರಕಾರವು ಅಲ್ಪಸಂಖ್ಯಾತರ ಸಮುದಾಯದ ಬಗ್ಗೆ ತನಗಿರುವ ಧೋರಣೆ ಏನೆಂಬುದನ್ನು ಅನುದಾನ ಕಡಿತಗೊಳಿಸುವ ಮೂಲಕ ವ್ಯಕ್ತಪಡಿಸಿದೆ. ಅನುದಾನ ಕಡಿತಕ್ಕೆ ಕೊರೋನ ನೆಪಮಾತ್ರ. ಸರಕಾರ ಉದ್ದೇಶಪೂರ್ವಕವಾಗಿ ಅನುದಾನ ಕಡಿತಗೊಳಿಸಿದೆ. ಅದರಲ್ಲೂ ಫೆಲೋಶಿಪ್ ಮೊತ್ತ ಕಡಿತಗೊಳಿಸಿರುವುದು ಖಂಡನೀಯ. ಇತರ ಯಾವುದೇ ಇಲಾಖೆಯ ಅನುದಾನವನ್ನು ಕಡಿತಗೊಳಿಸದ ರಾಜ್ಯ ಸರಕಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅನುದಾನ ಕಡಿತಗೊಳಿಸಿರುವುದು ಪ್ರಶ್ನಾರ್ಹ.

-ಮುನೀರ್ ಕಾಟಿಪಳ್ಳ ರಾಜ್ಯ ಕಾರ್ಯದರ್ಶಿ, ಚಿಂತಕರ ಚಾವಡಿ

ರಾಜ್ಯ ಬಿಜೆಪಿ ಸರಕಾರವು ಅಲ್ಪಸಂ ಖ್ಯಾತ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದೆ. ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಿ ಪ್ರೋತ್ಸಾಹಿಸಬೇಕಿದ್ದ ಸರಕಾರ ಉದ್ದೇಶ ಪೂರ್ವಕವಾಗಿ ಮಲತಾಯಿ ಧೋರಣೆ ತಾಳುತ್ತಿದೆ. ಇದು ಖಂಡನೀಯ. ಈಗಾಗಲೆ ನಾವು ಈ ನಿಟ್ಟಿನಲ್ಲಿ ಹೋರಾಟ ಆರಂಭಿಸಿದ್ದು, ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಕಟಿಬದ್ಧರಾಗಿದ್ದೇವೆ.

- ಇಮ್ರಾನ್ ಪಿ.ಜೆ., ರಾಜ್ಯ ಸಮಿತಿ ಸದಸ್ಯ, ಸಿಎಫ್‌ಐ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News