ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ‘ಮಾನವರತ್ನ’ ಪ್ರಶಸ್ತಿಗೆ ರಾಜಶೇಖರ್,‘ಸೇವಾ ರತ್ನ’ಕ್ಕೆ ಇಸ್ಮಾಈಲ್ ತೋನ್ಸೆ ಆಯ್ಕೆ

Update: 2021-01-04 08:57 GMT

ಉಡುಪಿ, ಜ. 4: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಮಾನವೀಯ ಮೌಲ್ಯಗಳಿಗಾಗಿ ಹೋರಾಡುವ ಉಡುಪಿ ಜಿಲ್ಲೆಯ ವ್ಯಕ್ತಿಗೆ ‘ಮಾನವರತ್ನ’ ಹಾಗೂ ಸಮಾಜ ಸೇವಾರಂಗದಲ್ಲಿ ಅಪೂರ್ವ ಸಾಧನೆ ಮಾಡಿದವರಿಗೆ ‘ಸೇವಾ ರತ್ನ’ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಅದರಂತೆ 2020-21ನೆ ಸಾಲಿನ ಮಾನವ ರತ್ನ ಪ್ರಶಸ್ತಿಗೆ ಹಿರಿಯ ಚಿಂತಕ ಜಿ. ರಾಜಶೇಖರ್ ಹಾಗೂ ಸೇವಾರತ್ನ ಪ್ರಶಸ್ತಿಗೆ ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಇಸ್ಮಾಈಲ್ ತೋನ್ಸೆ ಆಯ್ಕೆಯಾಗಿದ್ದಾರೆ.

         ಮುಹಮ್ಮದ್ ಇಸ್ಮಾಈಲ್ -   ರಾಜಶೇಖರ್

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಈ ವಿಷಯ ಪ್ರಕಟಿಸಿದರು. ಈ ಎರಡೂ ಪ್ರಶಸ್ತಿಯು ಪ್ರಶಸ್ತಿ ಮತ್ತು ತಲಾ 25000 ರೂ. ನಗದು ಒಳಗೊಂಡಿದೆ. ಜ.9ರಂದು ಸಂಜೆ 6.15ಕ್ಕೆ ಉಡುಪಿ ಅಂಬಾಗಿಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿರುವ ವಿವಿಧ ಸಮುದಾಯಗಳ ಸ್ನೇಹ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಸಮಾವೇಶದಲ್ಲಿ ಜಿಲ್ಲೆಯ 9 ಮಂದಿ ಹಿರಿಯ ಸಾಧಕರುಗಳಾದ ಕ್ರೈಸ್ತ ಧರ್ಮ ಗುರು, ಸಾಮಾಜಿಕ ಹೋರಾಟಗಾರ ಫಾ.ವಿಲಿಯಮ್ ಮಾರ್ಟಿಸ್, ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಮಲ್ಪೆಯ ಮತ್ಸೋದ್ಯಮಿ ಸಾಧು ಸಾಲಿಯಾನ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ್‌ದಾಸ್ ಬನ್ನಂಜೆ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಥಮ ಅಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಉಡುಪಿ ಆಶಾನಿಲಯ ವಿಶೇಷ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಶಶಿಕಲಾ ಬೆಂಜಮಿನ್ ಕೋಟ್ಯಾನ್, ಕಾರ್ಕಳದ ಸಮಾಜ ಸೇವಕಿ ಆಯಿಶಾ ಕಾರ್ಕಳ, ಕೋಡಿ-ಕುಂದಾಪುರದ ಸಮಾಜ ಸೇವಕಿ ಲಕ್ಷ್ಮೀಬಾಯಿ ಪೂಜಾರಿ ಅವರನ್ನು ಸನ್ಮಾನಿಸಲಾಗುವುದು.

ಸಮಾರಂಭವನ್ನು ಪದ್ಮಶ್ರೀ ಹರೇಕಳ ಹಾಜಬ್ಬ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ವಾರ್ತಾಭಾರತಿ ಕನ್ನಡ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ವಹಿಸಲಿರುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಚಂದ್ರ ಪೂಜಾರಿ ಮುಖ್ಯ ಭಾಷಣ ಮಾಡಲಿರುವರು. ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಪ್ರಸ್ತಾವನೆ ಹಾಗೂ ಅಭಿನಂದನಾ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಜಿಪಂ ಅಧ್ಯಕ್ಷ ರಾಜು ಪೂಜಾರಿ ಬೈಂದೂರು, ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ ಶೆಣೈ ಭಾಗವಹಿಸಲಿದ್ದಾರೆ.

ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಹಾಜಿ ಅಬ್ದುಲ್ಲಾ ನಾವುಂದ, ಖಾಸಿಮ್ ಬಾರ್ಕೂರು, ಎಂ.ಪಿ.ಮೊದಿನಬ್ಬ ಹಾಗೂ ಅಶ್ಫಾಕ್ ಅಹ್ಮದ್ ಕಾರ್ಕಳ ಅತಿಥಿಗಳಾಗಿರುವರು ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಕೋಶಾಧಿಕಾರಿ ಇಕ್ಬಾಲ್ ಎಸ್.ಕಟಪಾಡಿ, ಕಾರ್ಯಕ್ರಮದ ಸಂಚಾಲಕ ವಿ.ಎಸ್.ಉಮರ್, ಪತ್ರಿಕಾ ಕಾರ್ಯದರ್ಶಿ ಸಲಾಹುದ್ದೀನ್ ಅಬ್ದುಲ್ಲಾ, ಜಿಲ್ಲಾ ಸಮಿತಿ ಸದಸ್ಯ ಇದ್ರೀಸ್ ಹೂಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News