ಚೆನ್ನೈ- ಢಾಕಾ ಜೋಡಿಯದ್ದು 'ಲವ್ ಜಿಹಾದ್' ಅಲ್ಲ: ಎನ್ಐಎ
ಹೊಸದಿಲ್ಲಿ : ಚೆನ್ನೈ ಮೂಲದ ಉದ್ಯಮಿಯ ಪುತ್ರಿಯೊಬ್ಬರು ಇಸ್ಲಾಂಗೆ ಮತಾಂತರಗೊಂಡು ಬಾಂಗ್ಲಾದೇಶದ ರಾಜಕಾರಣಿಯ ಮಗನನ್ನು ವಿವಾಹವಾಗಿರುವುದು ಲವ್ ಜಿಹಾದ್ ಪ್ರಕರಣವಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸ್ಪಷ್ಟಪಡಿಸಿದೆ.
ಲಂಡನ್ನಲ್ಲಿ ಜತೆಗೆ ಓದುತ್ತಿದ್ದ ಈ ಯುವತಿ ಹಾಗೂ ಬಾಂಗ್ಲಾದೇಶದ ರಾಜಕಾರಣಿಯ ಪುತ್ರನ ವಿವಾಹವನ್ನು ಲವ್ಜಿಹಾದ್ ಪ್ರಕರಣ ಎಂದು ಹಿಂದುತ್ವ ಸಂಘಟನೆಗಳು ದೂರಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಭಾರತೀಯ ಯುವತಿಯನ್ನು ವಾಟ್ಸ್ಆ್ಯಪ್ ಮೂಲಕ ವಿಚಾರಣೆಗೆ ಗುರಿಪಡಿಸಿತ್ತು.
ಈ ಅಂತರ್ ಧರ್ಮೀಯ ವಿವಾಹ ’ಲವ್ ಜಿಹಾದ್’ ಎನ್ನಲು ಯಾವುದೇ ಪುರಾವೆ ತನಿಖೆ ವೇಳೆ ಎನ್ಐಎಗೆ ಸಿಕ್ಕಿಲ್ಲ. ಪತಿಯ ಜತೆಗೆ ತಾನು ಸಂತೋಷದಿಂದ ಇದ್ದು, ಸ್ವ-ಇಚ್ಛೆಯಿಂದ ಇಸ್ಲಾಂಗೆ ಮತಾಂತರ ಹೊಂದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಗಿ ಉನ್ನತ ಮೂಲಗಳು ಹೇಳಿವೆ.
ಬಾಂಗ್ಲಾದೇಶದ ಮಾಜಿ ಸಂಸದ ಹಾಗೂ ಬಿಎನ್ಪಿ ನಾಯಕರೊಬ್ಬರ ಪುತ್ರ ತಮ್ಮ ಪುತ್ರಿಯನ್ನು ಲಂಡನ್ನಲ್ಲಿ ಅಪಹರಿಸಿದ್ದಾಗಿ ಚೆನ್ನೈ ಮೂಲದ ಉದ್ಯಮಿ ದೂರು ನೀಡಿದ್ದರು. ಆಕೆಯನ್ನು ಬಲವಂತದಿಂದ ಬಾಂಗ್ಲಾದೇಶಕ್ಕೆ ಒಯ್ದು ಇಸ್ಲಾಂಗೆ ಮಾತಾಂತರಿಸಲಾಗಿದೆ ಎಂದು ಆಪಾದಿಸಿದ್ದರು. ಯುವತಿ ಬಾಂಗ್ಲಾದೇಶದ ರಾಜಕಾರಣಿಯ ಪುತ್ರನ ಜತೆ ಲಂಡನ್ನಲ್ಲಿ ಅಧ್ಯಯನ ಮಾಡುತ್ತಿದ್ದರು.
ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ತಮಿಳುನಾಡು ಪೊಲೀಸರು ಎನ್ಐಎಗೆ ಮನವಿ ಮಾಡಿಕೊಂಡಿದ್ದರು. ಪೋಷಕರ ಹೇಳಿಕೆ ದಾಖಲಿಸಿಕೊಂಡ ಬಳಿಕ ವಾಟ್ಸ್ಆ್ಯಪ್ ಮೂಲಕ ಯುವತಿಯನ್ನು ಎನ್ಐಎ ಅಧಿಕಾರಿಗಳು ಪ್ರಶ್ನಿಸಿದ್ದರು.