ಸೂರಿಲ್ಲದ ತಾಯಂದಿರಿಗೆ ಮನೆ ಕಟ್ಟಿಕೊಡುವ ‘ಉಮ್ಮಗೊರು ಅಗ’ ವಿಶಿಷ್ಟ ಯೋಜನೆ

Update: 2021-01-13 18:26 GMT

ಮಂಗಳೂರು, ಜ.13: ವಿಭಿನ್ನ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಅಸಹಾಯಕರ ಪಾಲಿಗೆ ಆಶಾಕಿರಣವಾಗಿರುವ ಉದ್ಯಮಿ, ಸಮಾಜ ಸೇವಕ, ಸಂಘಟಕ ಅಬ್ದುಲ್ ರವೂಫ್ ಪುತ್ತಿಗೆ ನೇತೃತ್ವದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಇದೀಗ ‘ಉಮ್ಮಗೊರು ಅಗ’ ಎಂಬ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ವಿಧವೆಯರು, ವಿಚ್ಛೇಧಿತರು, ಅಂಗವಿಕಲರು, ಆರ್ಥಿಕವಾಗಿ ಹಿಂದುಳಿದ ಮತ್ತು ಸಣ್ಣ ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿರುವ, ಮನೆಯಿದ್ದೂ ಸೋರುವ, ಕುಸಿಯುವ ಹಂತದಲ್ಲಿರುವ ಮನೆಯನ್ನು ಪುನರ್ ನಿರ್ಮಿಸುವ ಅಥವಾ ನಾದುರಸ್ತಿಯಲ್ಲಿರುವ ಮನೆಯನ್ನು ದುರಸ್ತಿಗೊಳಿಸುವ, ಮನೆಯೇ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವ ಯೊಜನೆ ಇದಾಗಿದೆ.

ಕೊರೋನ-ಲಾಕ್‌ಡೌನ್ ಸಂದರ್ಭ ಅಬ್ದುಲ್ ರವೂಫ್ ಪುತ್ತಿಗೆಯವರು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಆಹಾರ ಧಾನ್ಯಗಳ ಕಿಟ್ ವಿತರಿಸುತ್ತಿದ್ದ ವೇಳೆ ಮನೆಯೇ ಇಲ್ಲದ, ಇದ್ದರೂ ಕೂಡ ಕುಸಿಯುವ ಹಂತದಲ್ಲಿರುವುದನ್ನು ಕಣ್ಣಾರೆ ಕಂಡು ಮರುಗಿದ್ದರು. ಹೊಸ ಮನೆ ಕಟ್ಟಿಕೊಡುವುದರ ಜೊತೆಗೆ ನಾದುರಸ್ತಿಯಲ್ಲಿರುವ ಮನೆಗೂ ಕಾಯಕಲ್ಪ ನೀಡಬೇಕು ಎಂದು ಆಶಿಸಿ, ‘ನಂಡೆ ಪೆಂಙಳ್’ ಯೋಜನೆಯಂತೆ ‘ಉಮ್ಮಗೊರು ಅಗ’ ಯೋಜನೆಯನ್ನು ರೂಪಿಸಲು ನಿರ್ಧರಿಸಿದರು. ಫಲವಾಗಿ 2020ರ ಸೆಪ್ಟಂಬರ್‌ನಿಂದ ‘ಉಮ್ಮಗೊರು ಅಗ’ ಯೋಜನೆಯು ಕಾರ್ಯಗತಗೊಂಡಿದೆ.

ಆರ್ಥಿಕವಾಗಿ ಹಿಂದುಳಿದ ಮನೆಯ ಯಜಮಾನಿಯನ್ನು ವಿಧವೆ, ಅನಾಥೆ, ನಿರ್ಗತಿಕಳು ಎಂದು ಕರೆಯದೆ ಅವರನ್ನು ನಮ್ಮ ‘ತಾಯಿ’ ಎಂದು ಭಾವಿಸಿ ಮನೆ ಕಟ್ಟಿಕೊಡುವುದು ‘ಉಮ್ಮಗೊರು ಅಗ’ ಯೋಜನೆಯ ಕಲ್ಪನೆಯಾಗಿದ್ದು, ಈಗಾಗಲೇ ಈ ಯೋಜನೆಗೆ ಹಲವರು ಸಾಥ್ ನೀಡಿದ್ದಾರೆ.

ಓರ್ವ ದಾನಿಯು ತನ್ನ ಮಗಳ ವಿವಾಹ ಸರಳಗೊಳಿಸಿ ‘ನಂಡೆ ಪೆಂಙಳ್’ ಮತ್ತು ‘ಉಮ್ಮಗೊರು ಅಗ’ ಯೊಜನೆಗೆ ಸಹಕರಿಸಿದ್ದಾರೆ. ಮತ್ತೊರ್ವ ಉದ್ಯಮಿ ಕೂಡ ಸಹಕರಿಸಿದ್ದಾರೆ. ಇಬ್ಬರು ಸಹೋದರರು ಅಗಲಿದ ತಮ್ಮ ತಾಯಿಯ ಹೆಸರಿನಲ್ಲಿ ಸಹಾಯ ಮಾಡಿದ್ದಾರೆ. ಮಂಗಳೂರಿನ ಖ್ಯಾತ ವೈದ್ಯರು ಮತ್ತು ಉದ್ಯಮಿಯೊಬ್ಬರು ತಮ್ಮ ತಾಯಿಯ ಹೆಸರಿನಲ್ಲಿ ಸಹಾಯ ಮಾಡಿದ್ದು, ಅದೇ ರೀತಿ ಹಲವಾರು ದಾನಿಗಳು ‘ನಂಡೆ ಪೆಂಙಳ್’ ಮತ್ತು ‘ಉಮ್ಮಗೊರು ಅಗ’ ಯೋಜನೆಗೆ ಸಹಕರಿಸಿದ್ದಾರೆ ಎಂದು ‘ಉಮ್ಮಗೊರು ಅಗ ಯೋಜನೆ’ಯ ಪ್ರಧಾನ ಕಾರ್ಯದರ್ಶಿ ರಫೀಕ್ ಮಾಸ್ಟರ್ ತಿಳಿಸಿದ್ದಾರೆ.

''ಹೊಸ ಮನೆ ನಿರ್ಮಿಸಿ ಕೊಡುವುದಕ್ಕಿಂತಲೂ ಹಳೆಯ ಮನೆಯನ್ನು ದುರಸ್ತಿ ಮಾಡುವುದಕ್ಕೆ ಆದ್ಯತೆ ನೀಡಬೇಕಿದೆ. ಹಳೆಯ ಮನೆ ಕುಸಿದು ಭಾರೀ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುವುದು ಅನಿವಾರ್ಯ. ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ನಾನಾ ಕಡೆ 1,500ಕ್ಕೂ ಅಧಿಕ ನಾದುರಸ್ತಿಯಲ್ಲಿರುವ ಮನೆಗಳನ್ನು ಕಾಣಬಹುದಾಗಿದೆ. ‘ಉಮ್ಮಗೊರು ಅಗ’ ಯೋಜನೆಯಡಿ ವರ್ಷಂಪ್ರತಿ 100 ಮನೆಗಳ ದುರಸ್ತಿ ಅಥವಾ ಮನೆ ನಿರ್ಮಿಸಿಕೊಡುವ ಉದ್ದೇಶವಿದೆ. ಈಗಾಗಲೇ ನೆಲ್ಯಾಡಿ ಕೋಲ್ಪೆಯಲ್ಲಿ ಮೊದಲ ಮನೆ ನಿರ್ಮಿಸಿ ಫಲಾನುಭವಿಗೆ ಹಸ್ತಾಂತರಿಸಿದ್ದೇವೆ. ಇನ್ನೂ ಕೆಲವು ಮನೆಗಳ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಸಾಕಷ್ಟು ಅರ್ಜಿಗಳು ಬಂದಿದ್ದು, ಪರಿಶೀಲನೆ ನಡೆಯುತ್ತಿವೆ. ಈ ಅರ್ಜಿಗಳ ವಿಲೇವಾರಿಯಾದ ನಂತರ ಮತ್ತೆ ಅರ್ಜಿ ಕರೆಯಲಾಗುವುದು. ಟಿಆರ್‌ಎಫ್ ಕೈಗೆತ್ತಿಕೊಂಡ ಈ ಯೋಜನೆಯನ್ನು ಆಂದೋಲನದ ರೂಪದಲ್ಲಿ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕಿದೆ''.

-ಅಬ್ದುರ್ರವೂಫ್ ಪುತ್ತಿಗೆ, ಸ್ಥಾಪಕಾಧ್ಯಕ್ಷರು, ಟಿಆರ್‌ಎಫ್
ಕೋಶಾಧಿಕಾರಿ, ‘ಉಮ್ಮಗೊರು ಅಗ’ ಯೋಜನೆ

''2020ರ ಸೆಪ್ಟಂಬರ್‌ನಲ್ಲಿ ಆರಂಭಿಸಲಾದ ಈ ಯೋಜನೆಯಡಿ ಈಗಾಗಲೇ ಒಂದು ಮನೆಯನ್ನು ನಿರ್ಮಿಸಿಕೊಡಲಾಗಿದೆ. ಇನ್ನೂ 5 ಮನೆಗಳು ನಿರ್ಮಾಣ ಹಂತದಲ್ಲಿದೆ. ಇನ್ನಷ್ಟು ಮನೆಗಳು ನಿರ್ಮಾಣ ಆಗಬೇಕಿದೆ. ದಾನಿಗಳು, ಜಮಾಅತರು, ಸಂಘ ಸಂಸ್ಥೆಗಳ ಮುಖಂಡರು ಉದಾರ ಮನಸ್ಸು ಮಾಡಿ, ನಮ್ಮೆಂದಿಗೆ ಕೈ ಜೋಡಿಸಬೇಕು''. -ಮುಸ್ತಫ ಇಂಜಿನಿಯರ್ ಅಡ್ಡೂರು ದೆಮ್ಮಲೆ, ಅಧ್ಯಕ್ಷರು, ಉಮ್ಮಗೊರು ಅಗ ಯೋಜನೆ

ತಾಯಿಯ ಹೆಸರಲ್ಲೂ ಮನೆ

ಸಾಮಾನ್ಯವಾಗಿ ಬಹುತೇಕರು ಬಾಲ್ಯದಲ್ಲಿ ಬಡತನವನ್ನು ಕಂಡವರು. ಸಣ್ಣ ಮನೆಗಳಲ್ಲಿ ಬದುಕಿದವರು. ಸಾಕಿ ದೊಡ್ಡವರನ್ನಾಗಿಸಲು ಅವರ ಹೆತ್ತವರು ಪಟ್ಟ ಕಷ್ಟ ಹೇಳತೀರದು. ಈಗ ದೇವನು ಶ್ರೀಮಂತಿಕೆಯನ್ನು ಕೊಟ್ಟಿದ್ದು, ಒಳ್ಳೆಯ ಮನೆಯನ್ನು ಕಟ್ಟಿಸಿಕೊಂಡಿದ್ದರೂ, ತಾಯಿ ಮನೆಯಲ್ಲಿಲ್ಲ. ಹಾಗಾಗಿ ಪ್ರೀತಿಯ ತಾಯಿಯ ಹೆಸರಿನಲ್ಲಿ ದಾನದ ಸಂಕಲ್ಪದೊಂದಿಗೆ ಮನೆಯೊಂದನ್ನು ಕಟ್ಟಿಕೊಡಲು ಉಳ್ಳವರು ಮನಸ್ಸು ಮಾಡಬೇಕಿದೆ. ಅಂದರೆ ‘ಆಯಿಷಾ ಉಮ್ಮಗೊರು ಅಗ’, ‘ಫಾತಿಮಾ ಉಮ್ಮಗೊರು ಅಗ’, ‘ರುಖಿಯಾ ಉಮ್ಮಗೊರು ಅಗ’... ಅಥವಾ ನಮ್ಮಿಂದಿಗಿರುವ ತಾಯಿ ಹೆಸರಿನಲ್ಲೂ ಮನೆ ಕಟ್ಟಿಸಿಕೊಟ್ಟು ಆ ಮನೆಗೆ ನಮ್ಮ ತಾಯಿಯ ಹೆಸರನ್ನೂ ಇಡುವ ಅವಕಾಶವನ್ನು ಟಿಆರ್‌ಎಫ್ ಕಲ್ಪಿಸಿದೆ. ‘ಉಮ್ಮಗೊರು ಅಗ’ ಯೊಜನೆಯಡಿ ಸಹಕರಿಸಲು ಬಯಸುವ ದಾನಿಗಳು ಮೊಸಂ: 9844773906, 9448039410ನ್ನು ಸಂಪರ್ಕಿಸಬಹುದು.

‘ಉಮ್ಮಗೊರು ಅಗ’ ಯೋಜನೆಯ ಗೌರವಾಧ್ಯಕ್ಷರಾಗಿ ಹಾಜಿ ಎಸ್.ಎಂ.ರಶೀದ್, ಮುಖ್ಯ ಸಲಹೆಗಾರರಾಗಿ ಮನ್ಸೂರ್ ಅಹ್ಮದ್ ಆಝಾದ್, ಅಸ್ಗರ್ ಹಾಜಿ ಡೆಕ್ಕನ್ ಪ್ಲಾಸ್ಟ್, ಅಧ್ಯಕ್ಷರಾಗಿ ಮುಸ್ತಫ ಇಂಜಿನಿಯರ್ ಅಡ್ಡೂರು ದೆಮ್ಮಲೆ, ಉಪಾಧ್ಯಕ್ಷರಾಗಿ ಮುಸ್ತಫ ಕಿಂಗ್ಸ್ ಗ್ರಾನೈಟ್, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಮಾಸ್ಟರ್, ಕೋಶಾಧಿಕಾರಿಯಾಗಿ ಅಬ್ದುರ್ರವೂಫ್ ಪುತ್ತಿಗೆ , ಕಾರ್ಯದರ್ಶಿಯಾಗಿ ಎಸ್.ಎಂ.ಮುಸ್ತಫ ಭಾರತ್, ಸದಸ್ಯರಾಗಿ ಎಸ್.ಎಫ್.ಇಸಾಕ್ ಹಾಜಿ, ಹಾರಿಸ್ ಮರೈನ್, ಸಿದ್ದೀಕ್ ಚಾರ್ಮಾಡಿ, ಹನೀಫ್ ಕದ್ರಿ, ರಿಯಾಝ್ ಆಲಂ ಸೂರಲ್ಪಾಡಿ, ನವಾಝ್ ಜೆಪ್ಪು, ರಿಯಾಝ್ ಕಣ್ಣೂರು, ನೌಷಾದ್ ಹಾಜಿ ಸೂರಲ್ಪಾಡಿ, ಅಬ್ದುಲ್ ಹಮೀದ್ ಕಣ್ಣೂರು ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News