ತೊಕ್ಕೊಟ್ಟು ಬೀಫ್ ಸ್ಟಾಲ್‌ಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ನಾಗರಾಜನ ಬಂಧನ

Update: 2021-01-16 08:34 GMT
ಆರೋಪಿ ನಾಗರಾಜ

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್

ಮಂಗಳೂರು, ಜ.16: ಕಳೆದ ವಾರ ತೊಕ್ಕೊಟ್ಟುವಿನಲ್ಲಿ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ತೊಕ್ಕೊಟ್ಟು ಒಳಪೇಟೆ ನಿವಾಸಿ ನಾಗರಾಜ (37) ಬಂಧಿತ ಆರೋಪಿ. ಈತ ಬಾಡಿಗೆ ಮನೆ ಮಾಡಿಕೊಂಡಿದ್ದು, ತಾಯಿ ಜೊತೆ ವಾಸವಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.

ಆರೋಪಿ ನಾಗರಾಜ ತೊಕ್ಕೊಟ್ಟಿನ ಇದೇ ಬೀಫ್ ಸ್ಟಾಲ್‌ನಿಂದ ಹಲವು ಬಾರಿ ಮಾಂಸ ಖರೀದಿಸಿ ತನ್ನ ಸ್ನೇಹಿತನ ಮನೆಯಲ್ಲಿ ಅಡುಗೆ ಮಾಡಿ ಸೇವಿಸಿದ್ದ. ಈ ಹಿಂದೆ ಮಾಂಸದಂಗಡಿ ಮಾಲಕರಲ್ಲಿ ನಿಗದಿತ ಬೆಲೆಗಿಂತ ಅಧಿಕ ಮಾಂಸ ನೀಡುವಂತೆ ಒತ್ತಾಯಿಸಿದ್ದನು. ಈ ವೇಳೆ ಹಣ ಕೊಟ್ಟಷ್ಟೇ ಮಾಂಸ ನೀಡುವುದು, ಹೆಚ್ಚುವರಿ ನೀಡಲಾಗದು ಎಂದು ಅಂಗಡಿಯಾತ ಹೇಳಿದ್ದಾನೆ. ಇದರಿಂದ ಕೋಪಗೊಂಡು ಆರೋಪಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದವರು ತಿಳಸಿದರು.

ಆರೋಪಿಯು ಅದೇದಿನ ಸೀಮೆಎಣ್ಣೆ ಹಾಗೂ ಬೆಂಕಿ ಪೊಟ್ಟಣ ಖರೀದಿಸಿದ್ದನು. ಜ.9ರಂದು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಮಾಂಸದಂಗಡಿ ಬಳಿ ತೆರಳಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಘಟನೆಯ ಬಗ್ಗೆ ತನ್ನ ತಾಯಿಯ ಬಳಿಯು ಈ ಬಗ್ಗೆ ಹೇಳಿಕೊಂಡಿದ್ದಾನೆ. ಕುಡಿದ ನಶೆಯಲ್ಲಿ ಸುಳ್ಳು ಹೇಳಿದ್ದಾನೆಂದು ಅಂದುಕೊಂಡ ತಾಯಿ ಸುಮ್ಮನೆ ಮಲಗಲು ಹೇಳಿದ್ದಾರೆ. ಬೆಳಗ್ಗೆ ಘಟನೆ ಬೆಳಕಿಗೆ ಬಂದ ಮೇಲೆ ತಾಯಿಗೆ ನೈಜಾಂಶ ತಿಳಿದುಬಂದಿತ್ತು ಎಂದು ಪೊಲೀಸ್ ಆಯುಕ್ತರು ಹೇಳಿದರು.

ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಲು ವಿಶೇಷ ತಂಡ ರಚಿಸಿದ್ದರು. ಮಾಂಸದಂಗಡಿ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾ ಫೂಟೇಜ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಯಿತು. ಆರೋಪಿಯೇ ಕೃತ್ಯ ನಡೆಸಿರುವುದು ಸಿಸಿಟಿವಿ ಫೂಟೇಜ್‌ನಲ್ಲಿ ಖಚಿತವಾಗಿದೆ. ಪೂರಕ ದಾಖಲೆಗಳ ಸಂಗ್ರಹದ ಬಳಿಕವೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಈತನ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಕೃತ್ಯ ನಡೆಸಿರುವುದನ್ನು ವಿಚಾರಣೆಯ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. ತನಿಖೆ ಮುಂದುವರಿದಿದೆ ಎಂದು ಆಯುಕ್ತರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News