“ಆರೋಗ್ಯ ಕಾರ್ಯಕರ್ತ ಮೃತಪಟ್ಟಿದ್ದು ಕೋವಿಡ್ ಲಸಿಕೆ ಪಡೆದಿದ್ದರಿಂದಲ್ಲ”
Update: 2021-01-18 17:25 GMT
ಹೊಸದಿಲ್ಲಿ, ಜ. 18: ಕೊರೋನ ಲಸಿಕೆ ತೆಗೆದುಕೊಂಡ ದಿನದ ಬಳಿಕ 46 ವರ್ಷದ ಆರೋಗ್ಯ ಕಾರ್ಯಕರ್ತ ಸಾವನ್ನಪ್ಪಿದ್ದಾರೆ ಎಂದು ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳು ಸುದ್ದಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.
ಆರೋಗ್ಯ ಕಾರ್ಯಕರ್ತ ಮಹಿಪಾಲ ಸಾವಿಗೆ ಹೃದ್ರೋಗ ಕಾರಣ. ಮೃತಪಟ್ಟ ಮಹಿಪಾಲ್ ಅವರ ಹೃದಯ ಊದಿಕೊಂಡಿರುವುದು ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಿಂದ ಅವರ ಹೃದಯದಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದು ಬಂದಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಮಿಲಿಂದ್ ಚಂದ್ರ ಗರ್ಗ್ ತಿಳಿಸಿದ್ದಾರೆ. ಮಹಿಪಾಲ್ ಅವರು ಹೃದ್ರೋಗದಿಂದ ಬಳಲುತ್ತಿರುವಂತೆ ಕಾಣುತ್ತಿದೆ. ‘‘ಮಹಿಪಾಲ್ ಅವರ ಸಾವು ಹೃದ್ರೋಗದಿಂದ ಸಂಭವಿಸಿದೆ. ಕೊರೋನ ಲಸಿಕೆಗೂ ಅವರ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂದು ಮರಣೋತ್ತರ ಪರೀಕ್ಷೆ ನಡೆಸಿದ್ದ ಮೂವರು ವೈದ್ಯರ ತಂಡ ಹೇಳಿದೆ’’ ಎಂದು ಡಾ. ಮಿಲಿಂದ್ ಚಂದ್ರ ತಿಳಿಸಿದ್ದಾರೆ.