ರೈತರ ಟ್ರ್ಯಾಕ್ಟರ್ ರ‍್ಯಾಲಿ ನಿಲ್ಲಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Update: 2021-01-20 18:49 GMT

ಹೊಸದಿಲ್ಲಿ: ಗಣರಾಜ್ಯೋತ್ಸವ ದಿನದಂದು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಲು ಯೋಜಿಸಿರುವ ಟ್ರ್ಯಾಕ್ಟರ್ ರ್ಯಾಲಿ ಕುರಿತಂತೆ ಆದೇಶ ನೀಡುವುದಿಲ್ಲ. ಈ ವಿಚಾರಗಳ ಕುರಿತು ಪೊಲೀಸರೇ ನಿರ್ಧರಿಸಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಇಂದು ಹೇಳಿದೆ.

3 ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತಂತೆ ಕೇಂದ್ರ ಸರಕಾರ ಹಾಗೂ ರೈತರ ನಡುವೆ ಈ ತನಕ ನಡೆದಿರುವ ಮಾತುಕತಗಳೆಲ್ಲವೂ ವಿಫಲವಾಗಿದ್ದು, ಸಾವಿರಾರು ರೈತರು ಜ.26ರಂದು ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಉದ್ದೇಶಿಸಿದ್ದಾರೆ.

“ಯಾವುದೇ ರ್ಯಾಲಿ ಅಥವಾ ಮೆರವಣಿಗೆಯನ್ನು ಅನುಮತಿಸಲು ಅಥವಾ ಅನುಮತಿ ನೀಡದೇ ಇರುವುದು ಅನುಚಿತ ಎಂದು ನಾವು ನೋಡುತ್ತೇವೆ. ಇದು ಪೊಲೀಸರ ವಿಷಯವಾಗಿದೆ. ಪೊಲೀಸರು ಇದನ್ನು ನಿರ್ಧರಿಸುತ್ತಾರೆ. ನಾವು ಈ ಕುರಿತು ಆದೇಶ ನೀಡುವುದಿಲ್ಲ'' ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ತಿಳಿಸಿದೆ.

ಗಣರಾಜ್ಯೋತ್ಸವ ದಿನದಂದು ರೈತರು ನಡೆಸಲು  ಉದ್ದೇಶಿಸಿರುವ ರ್ಯಾಲಿಗೆ ತಡೆ ನೀಡಿ ಆದೇಶ ನೀಡುವಂತೆ ಕೇಂದ್ರ ಸರಕಾರವು ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿತ್ತು. ಮನವಿಯನ್ನು ಆಲಿಸಿದ ನ್ಯಾಯಾಲಯವು ಅರ್ಜಿಯನ್ನು ಹಿಂಪಡೆಯಲು ಕೇಂದ್ರಕ್ಕೆ ಅನುಮತಿ ನೀಡಿತು. ದಿಲ್ಲಿ ಪೊಲೀಸರಿಗೆ ಹೊಣೆಗಾರಿಕೆ ನೀಡಿತು.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಜನವರಿ 26ರಂದು ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್ ರ್ಯಾಲಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರಕಾರ ಬುಧವಾರ ಹಿಂದೆ ತೆಗೆದುಕೊಂಡಿದೆ.

ಇದು ಕಾನೂನು ಹಾಗೂ ಸುವ್ಯವಸ್ಥೆಗೆ ಸಂಬಧಿಸಿದ ವಿಷಯ ಹಾಗೂ ಪ್ರಥಮ ಅಧಿಕಾರವಾಗಿ ಕಾರ್ಯ ನಿರ್ವಹಿಸುವುದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ದಿನಗಳ ಬಳಿಕ ಕೇಂದ್ರ ಸರಕಾರ ತನ್ನ ಮನವಿಯನ್ನು ಹಿಂಪಡೆದಿದೆ.

ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಅಡ್ಡಿ ಉಂಟಾಗುವುದರಿಂದ ಪ್ರಸ್ತಾವಿತ ರೈತರ ಟ್ರಾಕ್ಟರ್ ರ್ಯಾಲಿ ಅಥವಾ ರೈತರ ಇತರ ಯಾವುದೇ ರೀತಿಯ ಪ್ರತಿಭಟನೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಕೇಂದ್ರ ಸರಕಾರ ದಿಲ್ಲಿ ಪೊಲೀಸರ ಮೂಲಕ ಸಲ್ಲಿಸಿದ್ದ ಮನವಿಯ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ, ‘‘ಟ್ರಾಕ್ಟರ್ ರ್ಯಾಲಿಗೆ ಸಂಬಂಧಿಸಿ ನಾವು ಯಾವುದೇ ನಿರ್ದೇಶನ ನೀಡುವುದಿಲ್ಲ. ಇದು ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಷಯ. ಅರ್ಜಿ ಹಿಂದೆ ತೆಗೆದುಕೊಳ್ಳಲು ಅವಕಾಶ ನೀಡುತ್ತೇವೆ ಹೇಳಿತ್ತು.

‘‘ನಿಮಗೆ ಅಧಿಕಾರ ಇದೆ. ನೀವು ಅದನ್ನು ನಿಭಾಯಿಸಬೇಕು. ನಿಮಗೆ ಆದೇಶ ನೀಡುವ ಅಧಿಕಾರ ಇದೆ. ನೀವು ಅದನ್ನು ಮಾಡಿ. ಇದು ನ್ಯಾಯಾಲಯ ಆದೇಶ ಜಾರಿಗೊಳಿಸುವುದಕ್ಕೆ ಸಂಬಂಧಿಸಿದ್ದಲ್ಲ’’ ಎಂದು ಅದು ತಿಳಿಸಿತ್ತು.

ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ವಿ. ಬಾಲಸುಬ್ರಹ್ಮಣೀಯನ್ ಅವರನ್ನು ಕೂಡ ಒಳಗೊಂಡ ನ್ಯಾಯಪೀಠ ಸೋಮವಾರ, ದಿಲ್ಲಿಯನ್ನು ಯಾರು ಪ್ರವೇಶಿಸಬೇಕು ಎಂಬುದನ್ನು ನಿರ್ಧರಿಸಲು ಪೊಲೀಸರು ಪ್ರಥಮ ಪ್ರಾಧಿಕಾರ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News