ಜ.27ರಂದು ಉಡುಪಿಗೆ ರೈತ, ಕೂಲಿ, ಕಾರ್ಮಿಕರ ಜಾಥಾ
ಉಡುಪಿ, ಜ.23: ಕೇಂದ್ರ, ರಾಜ್ಯ ಸರಕಾರದ ರೈತ, ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಜನಜಾಗೃತಿಗಾಗಿ ಶಿವಮೊಗ್ಗ, ಉತ್ತರಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾದ್ಯಂತ ರೈತ, ಕೂಲಿ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳೆ, ದಲಿತ ಹಾಗೂ ಆದಿವಾಸಿ ಸಂಘಟನೆಗಳ ನೆತೃತ್ವದಲ್ಲಿ ವಾಹನ ಜಾಥಾ ಹೋರಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದಾದ್ಯಂತ ನಡೆಯುತ್ತಿರುವ ಏಳು ಜಾಥಗಳ ಪೈಕಿ ಒಂದು ಜಾಥವು ಜ.24ರಂದು ಶಿವಮೊಗ್ಗ, 25ಮತ್ತು 26ರಂದು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿ, ಜ.27 ಮತ್ತು 28ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದೆ. ಬೈಂದೂರು, ಕುಂದಾಪುರ, ಬ್ರಹ್ಮಾವರ ಮತ್ತು ಉಡುಪಿ ಇತ್ಯಾದಿ ಪ್ರಮುಖ ಕೇಂದ್ರ ಸ್ಥಳಗಳಲ್ಲಿ ಸಾರ್ವಜನಿಕ ಪ್ರಚಾರ ಸಭೆ ಏರ್ಪಡಿಸ ಲಾಗುತ್ತದೆ. 29ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಬಳಿಕ ಮಂಗಳೂರು ನಗರದಲ್ಲಿ ಸಮಾರೋಪ ಸಮಾರಂಭ, ಸಾರ್ವಜನಿಕ ಪ್ರತಿಭಟನಾ ಸಭೆ ಜರಗಲಿದೆ.
6 ದಿನಗಳ ಕಾಲ ನಾಲ್ಕೂ ಜಿಲ್ಲೆಯಾದ್ಯಂತ ನಡೆಯಲಿರುವ ಜಾಥಾ ದುದ್ದಕ್ಕೂ ಒಂದು ಲಕ್ಷ ಕರಪತ್ರ ವಿತರಣೆ, ಸಾಹಿತ್ಯ, ಪುಸ್ತಕ ಮಾರಾಟ, ಹಾಡುಗಾರರ ತಂಡವೂ ಸೇರಿದಂತೆ ಕೃಷಿ ಕೂಲಿಕಾರರ ಸಂಘಟನೆಯ ರಾಜ್ಯ ಮುಖಂಡ ವೆಂಕಟೇಶ್ ಕೋಣಿ ನಾಯಕತ್ವದಲ್ಲಿ ಒಟ್ಟು 10 ಮಂದಿ ತಂಡ ಜಾಥಾದಲ್ಲಿರುತ್ತದೆ. ಶಿವಮೊಗ್ಗ ಜಿಲ್ಲೆಯ ಮುಖಂಡರಾದ ನಾರಾಯಣ, ಉತ್ತರ ಕನ್ನಡ ಜಿಲ್ಲೆಯ ಶಾಂತಾರಾಮ ನಾಯಕ, ಯಮುನಾ ಗಾಂವ್ಕರ್, ಉಡುಪಿ ಜಿಲ್ಲೆಯ ಸುರೇಶ್ ಕಲಾಗರ್, ಬಾಲಕೃಷ್ಣ ಶೆಟ್ಟಿ, ದ.ಕ. ಜಿಲ್ಲೆ ವಸಂತ ಆಚಾರಿ, ಮುನೀರ್ ಕಾಟಿಪಳ್ಳ, ಯಾದವ ಶೆಟ್ಟಿ ಮೊದಲಾದವರು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.