ಡಾ. ಬಿ.ಎಂ. ಹೆಗ್ಡೆಗೆ ಪದ್ಮವಿಭೂಷಣ ಕಿರೀಟ

Update: 2021-01-25 17:35 GMT

ಮಂಗಳೂರು, ಜ.25: ನಾಡಿನ ಹೆಸರಾಂತ ವೈದ್ಯ ಬೆಳ್ಳೆ ಮೋನಪ್ಪ ಹೆಗ್ಡೆ (ಡಾ.ಬಿ.ಎಂ. ಹೆಗ್ಡೆ) ರಾಷ್ಟ್ರೀಯ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣಕ್ಕೆ ಆಯ್ಕೆಯಾಗಿದ್ದಾರೆ.

ಹೃದ್ರೋಗ ತಜ್ಞರು, ವೈದ್ಯರಾಗಿ, ಅಧ್ಯಾಪಕರಾಗಿ, ಪರೀಕ್ಷಕರಾಗಿ, ಸಂಶೋಧಕರಾಗಿ, ಬರಹಗಾರರಾಗಿ, ಲೇಖಕರಾಗಿ, ಶಿಕ್ಷಣ ತಜ್ಞರಾಗಿ, ಉಪಕುಲಪತಿಗಳಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಸೇವೆ ಸಲ್ಲಿಸಿದ್ದಕ್ಕೆ ಹಲವು ಪ್ರಶಸ್ತಿಗಳು ಹೆಗ್ಡೆ ಅವರನ್ನು ಹುಡುಕಿಕೊಂಡು ಬಂದಿವೆ. 2010ರಲ್ಲಿ ರಾಷ್ಟ್ರೀಯ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಭೂಷಣ ಲಭಿಸಿತ್ತು. ಈ ಬಾರಿ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿರುವುದು ಅವರ ಸೇವೆ ಸಂದ ಫಲವಾಗಿದೆ.

ಡಾ.ಬಿ.ಎಂ. ಹೆಗ್ಡೆ 1938ರ ಆಗಸ್ಟ್ 18 ರಂದು ಉಡುಪಿಯ ಬೆಳ್ಳೆ ಗ್ರಾಮದಲ್ಲಿ ಜನಿಸಿದರು. ಉಡುಪಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಹಿರಿಯಡ್ಕದ ಬೋರ್ಡ್ ಹೈಸ್ಕೂಲ್‌ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿ, ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಪೂರೈಸಿ, ಮದ್ರಾಸ್ ವಿಶ್ವವಿದ್ಯಾನಿಲಯದಿಂದ ವೈದ್ಯ (ಎಂಬಿಬಿಎಸ್) ಪದವಿಯನ್ನು 1960ರಲ್ಲಿ ಪಡೆದರು.

ಲಕ್ನೋ ವಿಶ್ವವಿದ್ಯಾಲಯದಲ್ಲಿ ಎಂ.ಡಿ. ಪದವಿ ಪಡೆದ ಹೆಗ್ಡೆಯವರು, ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಿದರು. ಅಲ್ಲಿರುವ ಎಲ್ಲ ರಾಯಲ್ ಕಾಲೇಜುಗಳ ಫೆಲೋ ಆದ ಪ್ರಪ್ರಥಮ ಕನ್ನಡಿಗ ಹಾಗೂ ಭಾರತೀಯನೆನಿಸಿಕೊಂಡರು.

ಪ್ರೊ. ಬೆರ್ನಾರ್ಡ್ ಲೋವ್ನ್‌ನಂತಹ ನೋಬೆಲ್ ಪಾರಿತೋಷಕ ಪುರಸ್ಕೃತ ವೈದ್ಯರ ಜೊತೆ ಕೆಲಸ ಮಾಡಿದ ಹೆಗ್ಡೆಯವರು ಲಂಡನ್ನಿನ ಕಾಲೇಜುಗಳ ಎಂಆರ್‌ಸಿಪಿ ಪರೀಕ್ಷಕರಾಗಿ ಆಯ್ಕೆಯಾದ ಪ್ರಥಮ ಭಾರತೀಯರಾಗಿರುವರು. ಸ್ನಾತಕ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪರೀಕ್ಷಕರಾಗಿ ದಕ್ಷಿಣ ಅಮೆರಿಕ ಒಂದನ್ನು ಬಿಟ್ಟು ಜಗತ್ತಿನ ಉಳಿದ ಎಲ್ಲ ಖಂಡಗಳ ಪ್ರಮುಖ ವಿ.ವಿ.ಗಳಿಗೆ ತೆರಳಿದ ಸಾಧನೆ ಬಿ.ಎಂ. ಹೆಗ್ಡೆ ಅವರಲ್ಲಿ ಹೆಸರಲ್ಲಿದೆ.

1982ರಿಂದ ಲಂಡನ್ ವಿವಿಯ ಶಾಶ್ವತ ಸಂದರ್ಶನ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಗಣ್ಯರು, ಕಸ್ತೂರಬಾ ವೈದ್ಯಕೀಯ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ, ಪ್ರಾಚಾರ್ಯರಾಗಿ, ಡೀನ್ ಆಗಿ ಕೊನೆಗೆ ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಯ (ಮಾಹೆ) ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ಈಗ ಮಂಗಳೂರಿನಲ್ಲಿ ಸಂತೃಪ್ತಿಯ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ.

ಡಾ.ಬಿ.ಎಂ.ಹೆಗ್ಡೆಯವರು ಆಸ್ತಿಕರು. ಭಾರತೀಯ ವಿದ್ಯಾಭವನದೊಡನೆ ನಿಕಟ ಸಂಪರ್ಕ ಹೊಂದಿರುವ ಡಾ.ಬಿ.ಎಂ.ಹೆಗ್ಡೆ ಆಯುರ್ವೇದದ ಸತ್ವವನ್ನು ಮನಗಂಡು ಲಂಡನ್ನಿನ ಥೇಮ್ಸ್ ವ್ಯಾಲಿ ವಿ.ವಿಯ ಆಶ್ರಯದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಆರಂಭವಾಗಲು ಕಾರಣರಾಗಿದ್ದಾರೆ.

ಡಾ.ಬಿ.ಎಂ.ಹೆಗ್ಡೆ ಯಾವುದೇ ರೀತಿಯ ಸಂಕೋಚವಿಲ್ಲದೆ ವೈದ್ಯಕೀಯ ರಂಗದಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸಬಲ್ಲ ಸತ್ಯಪ್ರಿಯ ನಿಷ್ಠೂರವಾದಿಗಳು. ಆಧುನಿಕ ವೈದ್ಯಕೀಯದಲ್ಲಿರುವ ಅನಗತ್ಯ ತಪಾಸಣೆಗಳ, ಅನಗತ್ಯ ಔಷಧಗಳ ಹಾಗೂ ಅನಗತ್ಯ ಚಿಕಿತ್ಸೆಗಳ ಬಗ್ಗೆ ಉಗ್ರವಾಗಿ ಖಂಡಿಸುವ ಪ್ರವೃತ್ತಿ ರಕ್ತಗತವಾಗಿ ಬಂದಿದೆ. ಹಾಗಾಗಿ ಇವರಿಗೆ ಸಾಕಷ್ಟು ಹಿತಶತ್ರುಗಳಿರುವರು. ಅನೇಕ ವೈದ್ಯಕೀಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಗಣ್ಯರು ಅಂತಾರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕಗಳ (ಭಾರತ, ಬ್ರಿಟನ್, ಅಮೆರಿಕ, ಜರ್ಮನಿ, ಕುವೈತ್, ಚೈನಾ) ಸಂಪಾದಕ ಮಡಳಿಯಲ್ಲಿ ಹಾಗೂ ಸಲಹಾಮಂಡಳಿಯಲ್ಲಿರುವರು ಹಾಗೂ ಪ್ರತಿಷ್ಠಿತ ಬ್ರಿಟಿಶ್ ಮೆಡಿಕಲ್ ಜರ್ನಲ್ (ಬಿ.ಎಂ.ಜೆ) ‘ರೆಫ್ರಿ’ಯಾಗಿಯೂ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಡಾ.ಬಿ.ಎಂ.ಹೆಗ್ಡೆ ಅವರು ಭಾಷಣಕಾರರು. ಇದುವರೆಗೆ ಚಿನ್ನದ ಪದಕಗಳನ್ನು ಒಳಗೊಂಡ 80 ಜಾಗತಿಕ ದತ್ತಿ ಭಾಷಣಗಳನ್ನು ನೀಡಿದ್ದಾರೆ. ಆಕಾಶವಾಣಿ, ದೂರದರ್ಶನ, ಜೀ ಟಿವಿ ಲಂಡನ್, ಬಿಬಿಸಿ ಮುಂತಾದ ವಾಹಿನಿಗಳ ಮೂಲಕ ಆರೋಗ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇಂಗ್ಲಿಷ್‌ನಲ್ಲಿ ಹಾಗೂ ಕನ್ನಡದಲ್ಲಿ 30ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದಿರುವುದು ಇವರ ಸಾಹಿತ್ಯ ಪ್ರೀತಿಯನ್ನು ತೋರಿಸುತ್ತದೆ.

ಹಲವು ಪ್ರಶಸ್ತಿ: ಡಾ.ಬಿ.ಎಂ. ಹೆಗ್ಡೆ ಅವರ ಸೇವೆಗೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವರು ಎಂದಿಗೂ ಪ್ರಶಸ್ತಿಯ ಬೆನ್ನು ಹತ್ತಿ ಹೋದವರಲ್ಲ. 1997ರಲ್ಲಿ ಕರ್ನಾಟಕ ರಾಜ್ಯೋತ್ಸವರ ಪ್ರಶಸ್ತಿ ಲಭಿಸಿದೆ. ವೈದ್ಯ ಲೋಕದ ಅತ್ಯುನ್ನತ ‘ಡಾ.ಬಿ.ಸಿ.ರಾಯ್’ (ಅತ್ಯುತ್ತಮ ಶಿಕ್ಷಕ) ಪ್ರಶಸ್ತಿಯನ್ನು 1999ರಲ್ಲಿ ಪಡೆದ ಹೆಗ್ಡೆಯವರಿಗೆ ಭಾರತ ಸರ್ಕಾರವು 2010ರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. ಮಣಿಪಾಲ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳಾದ ಹೆಗ್ಡೆಯವರು ಪ್ರಸ್ತುತ ಭಾರತೀಯ ವಿದ್ಯಾಭವನ ಮಂಗಳೂರು ಘಟಕದ ಮುಖ್ಯಸ್ಥರಾಗಿದ್ದಾರೆ.

''ಪ್ರಶಸ್ತಿ ಬಂದಿರುವುದಕ್ಕೆ ದೇವರಿಗೆ ಹಾಗೂ ದೇಶಕ್ಕೆ ಆಭಾರಿಯಾಗಿದ್ದೇನೆ. 2010ರಲ್ಲಿ ಪದ್ಮಭೂಷಣ ಪ್ರಶಸ್ತಿ ಬಂದಾಗಲೇ ಪದ್ಮವಿಭೂಷಣ ಪ್ರಶಸ್ತಿಯನ್ನು ನಿರೀಕ್ಷಿಸಿದ್ದೆ. ಕೊನೆಗೂ ಮನದಾಸೆ ಈಡೇರಿದೆ''.

- ಡಾ.ಬಿ.ಎಂ. ಹೆಗ್ಡೆ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News