ಪ್ರತಿಭಟನೆ ಮುಂದುವರಿಯಲಿದೆ: ಸಂಯುಕ್ತ ಕಿಸಾನ್ ಮೋರ್ಚಾ
Update: 2021-01-26 16:21 GMT
ಹೊಸದಿಲ್ಲಿ,ಜ.26: ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾದ ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್ಯಾಲಿಯನ್ನು ರದ್ದುಪಡಿಸಿರುವುದಾಗಿ ವಿವಿಧ ರೈತ ಸಂಘಟನೆಗಳು ಮಂಗಳವಾರ ಘೋಷಿಸಿವೆ ಹಾಗೂ ರೈತರು ದಿಲ್ಲಿಯ ಗಡಿಯಲ್ಲಿರುವ ಪ್ರತಿಭಟನಾ ಸ್ಥಳಗಳಿಗೆ ವಾಪಾಸಾಗುವಂತೆ ಸೂಚನೆ ನೀಡಿವೆ. ಕೇಂದ್ರ ದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಶಾಂತಿಯುತವಾಗಿ ಮುಂದುವರಿಯಲಿದೆ ಹಾಗೂ ಮುಂದಿನ ನಡೆಗಳ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ರವಿವಾರ ಸಂಜೆಯ ವೇಳೆಗೆ ರೈತರು ಗುಂಪುಗುಂಪಾಗಿ ಸಿಂಘು, ಟಿಕ್ರಿ ಹಾಗೂ ಘಾಜಿಪುರ ಗಡಿಗಳಲ್ಲಿರುವ ತಮ್ಮ ಪ್ರತಿಭಟನಾ ಸ್ಥಳಗಳಿಗೆ ವಾಪಾಸಾಗುತ್ತಿರುವುದು ಕಂಡುಬಂತು. ಆದರೆ ಸಾವಿರಾರು ರೈತರು ಇನ್ನೂ ಕೂಡಾ ಹೊಸದಿಲ್ಲಿಯಲ್ಲೇ ಉಳಿದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.