ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಶೇ.40ರಷ್ಟು ಆರೋಗ್ಯ ಪಾಲನಾ ಸಿಬ್ಬಂದಿಯ ಹಿಂದೇಟು

Update: 2021-02-06 18:06 GMT

ಹೊಸದಿಲ್ಲಿ, ಫೆ.6:ಕೊರೋನ ವೈರಸ್ ವಿರುದ್ಧ ಲಸಿಕೆ ಹಾಕಿಸಿಕೊಂಡ ನಂತರ ಸಾವನ್ನಪ್ಪಿದವರ ಪ್ರಕರಣಗಳು ಹೆಚ್ಚುತ್ತಿವೆಯೆಂಬ ವರದಿಗಳು ಹಾಗೂ ಈ ಲಸಿಕೆಗಳ ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಕುರಿತ ಆತಂಕಗಳು ಸೃಷ್ಟಿಯಾಗಿರುವುದು, ಗಣನೀಯ ಸಂಖ್ಯೆಯ ಆರೋಗ್ಯಪಾಲನಾ ಕಾರ್ಯಕರ್ತರು ಲಸಿಕೆಯನ್ನು ಪಡೆದುಕೊಳ್ಳಲು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣವೆಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

 ದೇಶದ ಶೇ.20ರಿಂದ ಶೇ.40ರಷ್ಟು ವೈದ್ಯರು ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.

ಫೆಬ್ರವರಿ 2ರವರೆಗೆ ಸುಮಾರು 2500 ಮಂದಿ ವೈದ್ಯರಿಗೆ ಲಸಿಕೆಯನ್ನು ಹಾಕಲಾಗಿದೆ ಹಾಗೂ ಅವರಲ್ಲಿ ಶೇ.70ರಷ್ಟು ಮಂದಿಗೆ ಜ್ವರ ಹಾಗೂ ದೇಹದಲ್ಲಿ ಲಘುವಾದ ನೋವಿನಂತಹ ಅಡ್ಡಪರಿಣಾಮಗಳು ಕಂಡುಬಂದಿವೆ ಎಂದು ಹೈದರಾಬಾದ್‌ನ ಯಶೋದಾ ಆಸ್ಪತ್ರೆ ಸಮೂಹದ ವೈದ್ಯಕೀಯ ಸೇವೆಗಳ ನಿರ್ದೇಶಕ ಡಾ. ಲಿಂಗಯ್ಯ ಅಮಿದಯಾಲಾ ಹೇಳಿದ್ದಾರೆ.

‘‘ಆದರೂ, ಹೈದರಾಬಾದ್‌ನಲ್ಲಿ ಲಸಿಕೆ ಅಭಿಯಾನ ನಡೆದಿರುವ ಮೂರು ಆಸ್ಪತ್ರೆಗಳ ಪೈಕಿ ಎಲ್ಲಿಯೂ ಗಂಭೀರವಾದ ಅಡ್ಡಪರಿಣಾಮಗಳಾಗಿರುವುದು ವರದಿಯಾಗಿಲ್ಲವೆಂದು ಡಾ. ಅಮಿದಯಾಲಾ ತಿಳಿಸಿದ್ದಾರೆ.

ಜನವರಿ 25ರಂದು ದೇಶಾದ್ಯಂತ ಲಸಿಕೆ ಅಭಿಯಾನ ಆರಂಭಗೊಂಡಾಗ ಯುವ ವೃತ್ತಿಪರ ವೈದ್ಯರಲ್ಲಿ ಬಹಳಷ್ಟು ಆತಂಕ ಮನೆ ಮಾಡಿತ್ತು ಎಂದವರು ಹೇಳಿದರು.

ಆದರೆ, ಹಿರಿಯ ವೈದ್ಯರು ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಮೇಲ್ಪಂಕ್ತಿಯಾದಾಗ, ಕಿರಿಯ ವೈದ್ಯರುಗಳು ಅವರನ್ನು ಅನುಸರಿಸಿದರು ಹಾಗೂ ಲಸಿಕೆಯನ್ನು ಹಾಕಿಸಿಕೊಂಡರು ಎಂದರು.

ವೈದ್ಯಕೀಯ ಪಾಲನಾ ಕ್ಷೇತ್ರದ ವೃತ್ತಿಪರರು ಲಸಿಕೆಯ ಅಲ್ಪಕಾಲಿಕ ಹಾಗೂ ದೀರ್ಘಕಾಲಿಕ ಅಡ್ಡಪರಿಣಾಮಗಳ ಬಗ್ಗೆ ಆತಂಕಗೊಂಡಿದ್ದಾರೆಂದು ಹೇಳಿದರು.

ಪ್ರತಿ ದಿನವೂ ಶೇ.50ರಿಂದ ಶೇ.60ರಷ್ಟು ಆರೋಗ್ಯಪಾಲನಾ ಕಾರ್ಯಕರ್ತರು ಮಾತ್ವರೇ ಲಸಿಕೆಯನ್ನು ಹಾಕಿಸಿಕೊಳ್ಳಲು ದಿಲ್ಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಯ ಸಂಶೋಧನಾ ಹಾಗೂ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷೆ ಡಾ. ನಿರ್ಮಲ್ಯಾ ಮೋಹಪಾತ್ರ ಹೇಳುತ್ತಾರೆ.

ಸರಕಾರಿ ಆಸ್ಪತ್ರೆಗಳಿಗೆ ಹೋಲಿಸಿದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸುವ ಆರೋಗ್ಯಪಾಲನಾ ಸಿಬ್ಬಂದಿಗಳ ಸಂಖ್ಯೆ ಅಧಿಕವಾಗಿದೆ ಎಂದವರು ಹೇಳುತ್ತಾರೆ.

ಲಸಿಕೆ ಹಾಕಿಸಿಕೊಳ್ಳದೆ ಇದ್ದಲ್ಲಿ ತಮ್ಮ ಭಡ್ತಿ ಮತ್ತಿತರ ಸರಕಾರಿ ಸೌಲಭ್ಯಗಳನ್ನು ತಡೆಹಿಡಿಯುವ ಸಾಧ್ಯತೆಯ ಬಗ್ಗೆ ಸರಕಾರಿ ಆಸ್ಪತ್ರೆಗಳ ಆರೋಗ್ಯಪಾಲನಾ ಸಿಬ್ಬಂದಿ ಆತಂಕಗೊಂಡಿದ್ದಾರೆ. ಈ ಎಲ್ಲಾ ವದಂತಿಗಳು ಲಸಿಕೆ ಅಭಿಯಾನಕ್ಕೆ ಪ್ರಯೋಜನಕರವಾಗಿದೆ ಎಂದು ನಿರ್ಮಲಾ ಹೇಳುತ್ತಾರೆ.

ಈವರೆಗೆ 16 ಮಂದಿ ಆರೋಗ್ಯಪಾಲನಾ ಕಾರ್ಯಕರ್ತರು ಲಸಿಕೆ ಹಾಕಿಸಿಕೊಂಡ ಮೊದಲ ದಿನದಿಂದ ಹಿಡಿದು 10 ದಿನಗಳ ನಡುವೆ ಸಾವನ್ನಪ್ಪಿರುವುದು ವರದಿಯಾಗಿವೆ. ಆದರೆ ಈ ಸಾವುಗಳಿಗೂ ಕೊರೋನ ಲಸಿಕೆ ಹಾಕಿಸಿಕೊಂಡಿರುವುದಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸರಕಾರ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News