ಭಟ್ಕಳ: ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದಲ್ಲಿ 'ಇವೆಂಟ್ ಮ್ಯಾನೇಜ್‌ಮೆಂಟ್' ಕಾರ್ಯಾಗಾರ

Update: 2021-02-13 14:48 GMT

ಭಟ್ಕಳ: “ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಈ ಯುಗದಲ್ಲಿ ಇವೆಂಟ್ ಮ್ಯಾನೇಜ್‌ಮೆಂಟ್ ಒಂದು ಬೆಳವಣಿಗೆ ಕಾಣುತ್ತಿರುವ ಉದ್ಯಮವಾಗಿದ್ದು, ಇಂದು ಭಾರತ ಮತ್ತು ವಿಶ್ವದಲ್ಲಿ ಲಕ್ಷಾಂತರ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತಿದೆ”. ಎಂದು ಶಿಕ್ಷಕ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್‌ನ ತರಬೇತುದಾರರಾದ ಶ್ರೀಧರ ಶೇಟ್ ಹೇಳಿದರು. 

ನಗರದ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದಲ್ಲಿ, ಭಟ್ಕಳ ರೋರ‍್ಯಾಕ್ಟ್ ಕ್ಲಬ್ ಆಯೋಜಿಸಿದ ಇವೆಂಟ್ ಮ್ಯಾನೇಜ್‌ಮೆಂಟ್ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಸೂಕ್ತ ಯೋಜನೆ, ಸಂವಹನ-ಕೌಶಲ್ಯ, ಚುರುಕು ಆಲೋಚನೆ ಮತ್ತು ಸೂಕ್ತ ನಿರ್ವಹಣೆಯಂತಹ ಕೌಶಲ್ಯವನ್ನು ವಿದ್ಯಾರ್ಥಿ ಜೀವನದಲ್ಲಿ ಅಭಿವೃದ್ಧಿಪಡಿಸಿಕೊಂಡರೆ ಇವೆಂಟ್ ಮ್ಯಾನೇಜ್‌ಮೆಂಟ್‌ನಂತಹ ಕಾರ್ಯವನ್ನು ಸುಲಭವಾಗಿ ನಿರ್ವಹಿಸಬಹುದಾಗಿದ್ದು, ಈ ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಉತ್ತಮ ಅವಕಾಶಗಳಿವೆ” ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 
        
ಕಾಲೇಜಿನ ಪ್ರಾಂಶುಪಾಲರಾದ ಶ್ರೀನಾಥ ಪೈ ಪ್ರಾಸ್ತಾವಿಕ ಮಾತನಾಡಿದರು. ರೋಟಾರಿಯನ್‌ಗಳಾದ ಮನೀಷಾ ಮೇಸ್ತಾ ಸ್ವಾಗತಿಸಿದರು. ಪ್ರತೀಕ್ಷಾ ಕಡ್ಲೆ ನಿರೂಪಿಸಿದರು. ಉಪಾಧ್ಯಕ್ಷೆಯಾದ ಶ್ವೇತಾ ವಂದಿಸಿದರು. ಕ್ಲಬ್ ಸಂಯೋಜಕರಾದ ದೇವೇಂದ್ರ ಕಿಣಿ, ಅಧ್ಯಕ್ಷೆ ನಾಗಶ್ರೀ ನಾಯ್ಕ್, ಕಾರ್ಯದರ್ಶಿ ಪ್ರೇಮಾನಂದ ನಾಯ್ಕ್ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News