ಗಣರಾಜ್ಯೋತ್ಸವದ ದಿನ ದಿಲ್ಲಿಯಲ್ಲಿ ಹಿಂಸಾಚಾರ ಪ್ರಕರಣ: ಮತ್ತೆ ಮೂವರ ಬಂಧನ
Update: 2021-02-13 18:47 GMT
ಹೊಸದಿಲ್ಲಿ, ಫೆ. 13: ಗಣರಾಜ್ಯೋತ್ಸವದ ದಿನ ಉತ್ತರ ದಿಲ್ಲಿಯ ಬುರಾರಿಯಲ್ಲಿ ನಡೆದ ರೈತರ ಟ್ರಾಕ್ಟರ್ ರ್ಯಾಲಿ ಸಂದರ್ಭ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿ ಮತ್ತೆ ಮೂರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಆರೋಪಿಗಳನ್ನು ದಿಲ್ಲಿ ಹರಿ ನಗರದ ನಿವಾಸಿಗಳಾದ ಸುಖ್ಮಿತ್ ಸಿಂಗ್, ಗುರುದೀಪ್ ಸಿಂಗ್ ಹಾಗೂ ಲಿಬಸಾಪುರದ ನಿವಾಸಿ ಹರ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬುರಾರಿ ಹಿಂಸಾಚಾರಕ್ಕೆ ಸಂಬಂಧಿಸಿ ಈ ಹಿಂದೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಗಣರಾಜ್ಯೋತ್ಸವದ ದಿನ ಬುರಾರಿ ಪ್ರದೇಶದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಉತ್ತರ ಜಿಲ್ಲೆಯ ವಿಶೇಷ ತನಿಖಾ ತಂಡ (ಎಸ್ಐಟಿ) ಇವರನ್ನು ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹಿಂಸಾಚಾರದ ಸಂದರ್ಭ ಅವರು ಬಳಸಿದ ಮೊಬೈಲ್ ಫೋನ್ ಹಾಗೂ ಮೋಟಾರ್ ಬೈಕ್ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.