ಕದ್ರಿಯ ಜೋಗಿ ಮಠಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಭೇಟಿ

Update: 2021-02-21 15:56 GMT

ಮಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರವಿವಾರ ಸಂಜೆ ನಾಥ ಪಂಥದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿರುವ ನಗರದ ಕದ್ರಿಯ ಜೋಗಿ ಮಠಕ್ಕೆ ಖಾಸಗಿ ಭೇಟಿ ನೀಡಿದರು.

ಜೋಗಿ ಮಠದಲ್ಲಿ ಬಾಲಾಲಯದಲ್ಲಿರುವ ಶ್ರೀ ಕಾಲಭೈರವ ಸ್ವಾಮಿಗೆ ಪೂಜೆ ಸಲ್ಲಿಸಿದ ಯೋಗಿ ಆದಿತ್ಯನಾಥ ಅವರು, ಮಠದ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿದರು. ಮಠದ ಆವರಣದಲ್ಲಿ ನಿರ್ಮಿಸಿರುವ ಸಭಾಭವನ ಮತ್ತು ಅನ್ನಛತ್ರವನ್ನು ಯೋಗಿ ಆದಿತ್ಯನಾಥ ಅವರು ಈ ಸಂದರ್ಭ ಉದ್ಘಾಟಿಸಿದರು.
ಆದಿತ್ಯನಾಥ ಅವರ ಭೇಟಿ ಬಗ್ಗೆ ಮಾಹಿತಿ ನೀಡಿದ ಶಾಸಕ ಡಿ. ವೇದವ್ಯಾಸ ಕಾಮತ್, ಯೋಗಿ ಆದಿತ್ಯನಾಥ ಅವರು ಕಾಸರಗೋಡಿನಲ್ಲಿ ಬಿಜೆಪಿ ಕಾರ್ಯಕ್ರಮಕ್ಕೆ ಆಗಮಿಸಿದವರು ಜೋಗಿ ಮಠಕ್ಕೂ ಭೇಟಿ ನೀಡಿದ್ದಾರೆ. ಮಠದ ಜೀರ್ಣೋದ್ಧಾರ ಕಾರ್ಯ ಬಗ್ಗೆ ಮಾಹಿತಿ ಪಡೆದು, ಮಾರ್ಗದರ್ಶನ ನೀಡಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಗ್ಗೆ ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಜತೆ ಮಾತುಕತೆ ನಡೆಸಿದರು ಎಂದರು.

ಮಾಜಿ ಸಚಿವ ನಾಗರಾಜ ಶೆಟ್ಟಿ, ಕಾರ್ಪೋರೇಟರ್‌ಗಳಾದ ಶಕೀಲಾ ಕಾವ, ಮನೋಹರ ಶೆಟ್ಟಿ, ಪ್ರಮುಖರಾದ ಅಜಯ್ ಕುಮಾರ್, ವಾಸುದೇವ ಕಾಮತ್, ಎಚ್.ಕೆ. ಪುರುಷೋತ್ತಮ, ಕಿರಣ್ ಕುಮಾರ್ ಉಪಸ್ಥಿತರಿದ್ದರು.
ಜೋಗಿ ಮಠಕ್ಕೆ ಖಾಸಗಿ ಭೇಟಿಯಾದ ಕಾರಣ ಪಾಸ್ ಇದ್ದವರನ್ನು ಮಾತ್ರ ಮಠದ ಆವರಣಕ್ಕೆ ಬಿಡಲಾಗಿತ್ತು. ಪೊಲೀಸರು ಬಿಗು ಬಂದೋಬಸ್ತ್ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News