ಕರ್ನಾಟಕಕ್ಕೆ 267 ರನ್‌ಗಳ ಭರ್ಜರಿ ಜಯ

Update: 2021-02-23 04:51 GMT

ಬೆಂಗಳೂರು: ಕರ್ನಾಟಕ ತಂಡ ಇಲ್ಲಿ ನಡೆದ ವಿಜಯ್ ಹಝಾರೆ ಟ್ರೋಫಿ ‘ಸಿ’ ಗುಂಪಿನ ಪಂದ್ಯದಲ್ಲಿ ಬಿಹಾರ ವಿರುದ್ಧ 267 ರನ್‌ಗಳ ಭರ್ಜರಿ ಜಯ ಗಳಿಸಿದೆ.

 ಜಸ್ಟ್ ಕ್ರಿಕೆಟ್ ಅಕಾಡಮಿ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 355 ರನ್‌ಗಳ ಕಠಿಣ ಸವಾಲನ್ನು ಪಡೆದ ಬಿಹಾರ ತಂಡ ಪ್ರಸಿದ್ಧ್ ಕೃಷ್ಣ(17ಕ್ಕೆ 4), ಅಭಿಮನ್ಯು ಮಿಥುನ್(7ಕ್ಕೆ 2), ಶ್ರೇಯಸ್ ಗೋಪಾಲ್(22ಕ್ಕೆ 2), ಜಗದೀಶ್ ಸುಚಿತ್(14ಕ್ಕೆ 1) ದಾಳಿಗೆ ಸಿಲುಕಿ 27.2 ಓವರ್‌ಗಳಲ್ಲಿ 87 ರನ್‌ಗಳಿಗೆ ಆಲೌಟಾಗಿದೆ.

ಆರಂಭಿಕ ಬ್ಯಾಟ್ಸ್‌ಮನ್ ಎಸ್.ಗನಿ(37) ಬಿಹಾರ ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಉಳಿದಂತೆ ತಂಡದ ಇತರ ಆಟಗಾರರಿಂದ ದೊಡ್ಡ ಕೊಡುಗೆ ಸಿಗಲಿಲ್ಲ. ನಾಯಕ ಅಶುತೋಷ್ ಅಮನ್ (11) ಮತ್ತು ಅನುಜ್ ರಾಜ್(10) ಎರಡಂಕೆಯ ಸ್ಕೋರ್ ದಾಖಲಿಸಿದರು. ನಾಲ್ವರು ಆಟಗಾರರು ಸೊನ್ನೆ ಸುತ್ತಿದರು. ನಾಲ್ಕು ಮಂದಿ ಒಂದಂಕಿಯ ಸ್ಕೋರ್ ಗಳಿಸಿದರು.

 ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ ತಂಡದ ಪರ ನಾಯಕ ಆರ್. ಸಮರ್ಥ್ ಔಟಾಗದೆ ದಾಖಲಿಸಿದ 158 ರನ್(144ಎ, 15ಬೌ,1ಸಿ) ಮತ್ತು ದೇವದತ್ತ ಪಡಿಕ್ಕಲ್ 97 ರನ್(98ಎ, 8ಬೌ, 2ಸಿ) , ಸಿದ್ಧಾರ್ಥ್ 76 ರನ್(55ಎ, 5ಬೌ, 4ಸಿ) ನೆರವಿನಲ್ಲಿ ಕರ್ನಾಟಕ ತಂಡ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 354 ರನ್ ಗಳಿಸಿತ್ತು.

 ಸಮರ್ಥ್ ಮತ್ತು ಪಡಿಕ್ಕಲ್ ಮೊದಲ ವಿಕೆಟ್‌ಗೆ 29.3 ಓವರ್‌ಗಳಲ್ಲಿ 153 ರನ್‌ಗಳ ಜೊತೆಯಾಟ ನೀಡಿದರು. ಪಡಿಕ್ಕಲ್ 3 ರನ್‌ನಿಂದ ಶತಕ ವಂಚಿತಗೊಂಡರು. ಬಳಿಕ ಎರಡನೇ ವಿಕೆಟ್‌ಗೆ ಸಿದ್ಧಾರ್ಥ್ ಮತ್ತು ಸಮರ್ಥ್ 171 ರನ್‌ಗಳ ಜೊತೆಯಾಟ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News