ಮಾರ್ಚ್ 9ರವರೆಗೆ ಮುಂಬೈ ಪೊಲೀಸ್ ಕಸ್ಟಡಿಗೆ ರವಿ ಪೂಜಾರಿ
ಮುಂಬೈ, ಫೆ.23: ಬೆಂಗಳೂರಿನ ಜೈಲಿನಲ್ಲಿ ಬಂಧನಲ್ಲಿದ್ದ ಕುಖ್ಯಾತ ಕ್ರಿಮಿನಲ್ ರವಿ ಪೂಜಾರಿಯನ್ನು ಮುಂಬೈಯಲ್ಲಿ ನಡೆದಿದ್ದ ಗುಂಡು ಹಾರಾಟ ಪ್ರಕರಣದ ವಿಚಾರಣೆಗೆ ಫೆ.23ರಂದು ಮುಂಬೈಗೆ ಕರೆತರಲಾಗಿದ್ದು ಮಾರ್ಚ್ 9ರವರೆಗೆ ಮುಂಬೈ ಪೊಲೀಸ್ ಕಸ್ಟಡಿಗೆ ವಿಧಿಸಿ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಸೆರೆಸಿಕ್ಕ ರವಿಪೂಜಾರಿಯನ್ನು ಬೆಂಗಳೂರಿನ ಜೈಲಿನಲ್ಲಿ ಇರಿಸಲಾಗಿತ್ತು. 2016ರ ಅಕ್ಟೋಬರ್ 21ರಂದು ಮುಂಬೈಯ ವಿಲೆ ಪಾರ್ಲೆ ಪ್ರದೇಶದಲ್ಲಿ ನಡೆದಿದ್ದ ಗುಂಡು ಹಾರಾಟ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಪೂಜಾರಿಯನ್ನು ಮುಂಬೈ ಪೊಲೀಸರ ತಂಡ ಮುಂಬೈಗೆ ಕರೆದೊಯ್ದಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಂಬೈ ಪೊಲೀಸರ ತಂಡ ಮುಂಬೈಯ ವಿಶೇಷ ನ್ಯಾಯಾಲಯದೆದುರು ರವಿ ಪೂಜಾರಿಯನ್ನು ಮಂಗಳವಾರ ಹಾಜರುಪಡಿಸಿದಾಗ ಪೂಜಾರಿಗೆ ಮಾರ್ಚ್ 9ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿ ವಿಶೇಷ ನ್ಯಾಯಾಧೀಶ ಡಿಇ ಕೊಥಾಲಿಕರ್ ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಪೂಜಾರಿಯ 7 ಸಹಚರರು ಈಗಾಗಲೇ ಜೈಲಿನಲ್ಲಿದ್ದಾರೆ.