ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡುವ ಆರೋಪ ಸುಳ್ಳು : ಡಿಕೆಶಿ

Update: 2021-02-27 14:26 GMT

ಬೈಂದೂರು, ಫೆ. 27: ಮೈಸೂರು ಮಹಾನಗರ ಪಾಲಿಕೆಯ ಅಧ್ಯಕ್ಷ ಸ್ಥಾನದ ಆಯ್ಕೆಯ ವಿಷಯದಲ್ಲಿ ಕಾಂಗ್ರೆಸ್‌ನೊಳಗೆ ಭಿನ್ನಮತವಿದ್ದು, ಈ ವಿಚಾರದಲ್ಲಿ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಸುಳ್ಳು. ಯಾರು ಕೂಡಾ ಯಾರನ್ನೂ ಟಾರ್ಗೆಟ್ ಮಾಡಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟ ಪಡಿಸಿದ್ದಾರೆ.

ಶನಿವಾರ ಅಪರಾಹ್ನ ಬೈಂದೂರಿನಲ್ಲಿ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಹೆಜಮಾಡಿಯಿಂದ ಬೈಂದೂರುವರೆಗಿನ ಜನಧ್ವನಿ ಪಾದಯಾತ್ರೆಯ ಸಮಾರೋಪ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತಿದ್ದರು.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್‌ನವರು ನಮಗೆ ಮೇಯರ್ ಸ್ಥಾನವನ್ನು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಜೆಡಿಎಸ್  ಪಕ್ಷದವರೇ ನಾಮಪತ್ರ ಸಲ್ಲಿಸಿದ್ದಾರೆ. ನಾವು ನಮ್ಮ ಪಕ್ಷದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ಪ್ರಯತ್ನ ಮಾಡಿದೆವು. ಆದರೆ ಒಳಗಡೆ ಅವರು ತೀರ್ಮಾನ ಮಾಡಿಕೊಂಡಿದ್ದಾರೆ ಎಂದು ಡಿಕೆಶಿ ವಿವರಿಸಿದರು.

ಈ ಬಗ್ಗೆ ನಾನು ವರದಿ ತರಿಸಿಕೊಳ್ಳುತ್ತೇನೆ. ಈ ವಿಚಾರದಲ್ಲಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಸುಳ್ಳು. ಈ ವಿಚಾರದಲ್ಲಿ ಯಾರ ಹೆಸರಿಗೂ, ಗೌರವಕ್ಕೂ ಧಕ್ಕೆ ಬಾರದಂತೆ ನಾನು ನೋಡಿಕೊಳ್ಳುತ್ತೇನೆ. ಯಾರನ್ನು ಕಟ್ಟಿ ಹಾಕೋದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಅವರು ಹೇಳಿದರು.

ತನ್ವೀರ್ ಸೇಠ್ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ನಾಯಕರ ಬಗ್ಗೆ ಯಾರು ಸಹ ಅವಹೇಳನಕಾರಿ ಹೇಳಿಕೆ ಕೊಡುವಂತಿಲ್ಲ. ಈ ಬಗ್ಗೆ ಪಕ್ಷದ ನಿಲುವು ಸ್ಪಷ್ಟವಾಗಿದೆ. ತನ್ವೀರ್ ಸೇಠ್ ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ತನ್ವೀರ್ ಸೇಠ್ಗೆ ಸೋಮವಾರ ನನ್ನನ್ನು ಭೇಟಿಯಾಗಲು ತಿಳಿಸಿದ್ದೇನೆ ಎಂದರು.

ಪರೇಶ್ ಮೇಸ್ತ ತನಿಖೆ ಏನಾಯಿತು?: ಕಳೆದ ಚುನಾವಣೆಯ ಸಂದರ್ಭದಲ್ಲಿ ಕರಾವಳಿಯಲ್ಲಿ ಭಾರೀ ವಿವಾದ ಎಬ್ಬಿಸಿದ ಭಟ್ಕಳದ ಪರೇಶ್ ಮೇಸ್ತ ನಿಗೂಢ ಸಾವಿನ ಪ್ರಕರಣದ ಸಿಬಿಐ ತನಿಖೆ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಪರೇಶ್ ಮೇಸ್ತ ಸಾವಿಗೆ ನ್ಯಾಯ ದೊರಕಿಸಿಕೊಡಲು ನಾವು ಸಿಬಿಐ ತನಿಖೆಗೆ ಕೊಟ್ಟಿದ್ದೆವು. ಈಗ ಬಿಜೆಪಿ ಸರಕಾರ ಇದೆ. ಬಿಜೆಪಿಯವರಿಗೆ ತನಿಖೆ ಮಾಡಲು ಏನು ಕಷ್ಟ ಎಂದು ಖಾರವಾಗಿ ಪ್ರಶ್ನಿಸಿದ ಡಿಕೆ ಶಿವಕುಮಾರ್, ಪರೇಶ್ ಮೇಸ್ತ ಸಾವಿನ ಸತ್ಯಾಸತ್ಯತೆ ಏನು ಎಂದು ಜನರಿಗೆ ಗೊತ್ತಾಗಬೇಕು ಎಂದರು.

ಸಿಬಿಐ ತನಿಖೆ ಹಳ್ಳ ಹಿಡಿದಿರುವುದನ್ನು ಗಮನಿಸಿದರೆ ಬಿಜೆಪಿಯವರೇ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನೋದು ಸ್ಪಷ್ಟ. ಉಳಿದದ್ದೆಲ್ಲವನ್ನು ತುರ್ತಾಗಿ ಮಾಡುವ ಬಿಜೆಪಿ ಈ ಪ್ರಕರಣವನ್ನು ಯಾಕೆ ಮುಚ್ಚಿ ಹಾಕುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಬಿಜೆಪಿ ನನ್ನ ಮೇಲೆ ಸಿಬಿಐ ತನಿಖೆ ತುರ್ತಾಗಿ ಮಾಡಿದೆ. ಅಧಿಕಾರ ದುರುಪಯೋಗ ಮಾಡಿಕೊಂಡು ನನಗೂ ತೊಂದರೆ ಕೊಟ್ಟಿದೆ. ಆದರೆ ಮೇಸ್ತ ಪ್ರಕರಣದಲ್ಲಿ ಯಾಕೆ ಈ ವಿಳಂಬ ಧೋರಣೆ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ಪಂಚಮ ಸಾಲಿ ಹೋರಾಟ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ಮತ್ತು ಮಠದ ವಿಚಾರವನ್ನು ಈಗ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕರ ಜೊತೆ ಮಾತನಾಡಿದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News