ಬಂಟ್ವಾಳ : ರಸ್ತೆಯುದ್ದಕ್ಕೂ ಘನತ್ಯಾಜ್ಯವನ್ನು ಚೆಲ್ಲುತ್ತಾ ಹೋಗುತ್ತಿರುವ ತ್ಯಾಜ್ಯ ವಿಲೇವಾರಿ ವಾಹನ

Update: 2021-02-27 14:36 GMT

ಬಂಟ್ವಾಳ : ಸಜೀಪನಡು ಕಂಚಿನಡ್ಕ ಪದವಿನಲ್ಲಿ ಪರಿಸರ ಹಾಗೂ ವಾಯುಮಾಲಿನ್ಯ ಇಲಾಖೆ ವಿಧಿಸಿರುವ ನಿಬಂಧನೆಗಳಿಗೆ ವಿರುದ್ಧವಾಗಿ ಘನತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬಂಟ್ವಾಳ ಪುರಸಭೆಯ ಕ್ರಮವನ್ನು ಖಂಡಿಸಿರುವ ಆಲ್ ಇಂಡಿಯಾ ಮುಸ್ಲಿಂ ಡೆವೆಲಪ್ಮೆಂಟ್ ಫೋರಂ ರಾಜ್ಯ ಕಾರ್ಯಾಧ್ಯಕ್ಷ ಎಸ್. ಅಬೂಬಕ್ಕರ್  ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದದ್ದೇ ಆದಲ್ಲಿ ಹೋರಾಟವನ್ನು ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಜೀಪನಡು ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಪರಿಸರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲಾ ನಿಬಂಧನೆಗಳನ್ನು ಧಿಕ್ಕರಿಸಿ ಊರ ನಾಗರಿಕರ ವಿರೋಧದ ನಡುವೆಯೂ ಅಧಿಕಾರ ಬಲ ಹಾಗೂ ಪೊಲೀಸ್ ಬಲ ಪ್ರಯೋಗವನ್ನು ಬಳಸಿ ಬಂಟ್ವಾಳ ಪುರಸಭೆಯ ಘನತ್ಯಾಜ್ಯವನ್ನು ತಂದು ಸುರಿಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಹಾಗೂ ಬಂಟ್ವಾಳ ಹಾಗೂ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರುಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯನ್ನು ಕರೆದು ಉದ್ಧೇಶಿತ ಕಂಚಿನಡ್ಕ ಪದವಿನಲ್ಲಿ ಘನತ್ಯಾಜ್ಯ ಘಟಕದಲ್ಲಿ ಒಣ ಕಸವನ್ನು ಮಾತ್ರ ಹಾಕಬೇಕೆಂದು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಗಳಿಗೆ ತಾಕೀತು ಮಾಡಲಾಗಿತ್ತು. ಇದೀಗ ಇವೆಲ್ಲವನ್ನು ಧಿಕ್ಕರಿಸಿ ಕಳೆದ ಎರಡು, ಮೂರು ತಿಂಗಳಿನಿಂದ ಕೊಳೆತು ನಾರುತ್ತಿ ರುವ ಘನತ್ಯಾಜ್ಯವನ್ನು ಕಂಚಿನಡ್ಕ ಪದವಿನಲ್ಲಿ ಸುರಿಯುತ್ತಿದ್ದಾರೆ, ಇದೀಗ ಘನತ್ಯಾಜ್ಯ ವಿಲೇವಾರಿಯ ವಾಹನದಲ್ಲಿ ಬರುವ ಕೊಳೆತು ನಾರುತ್ತಿರುವ ಘನತ್ಯಾಜ್ಯವನ್ನು ಸಜೀಪನಡುವಿನಿಂದ ಕಂಚಿನಡ್ಕ ಪದವಿಗೆ ಹೋಗುವ ರಸ್ತೆಯುದ್ದಕ್ಕೂ ಚೆಲ್ಲಿಕೊಂಡು ಹೋಗುತ್ತಿದ್ದು ಸಾರ್ವಜನಿಕರಿಗೆ ನಡೆದಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬಂಟ್ವಾಳ ಪುರಸಭೆಯ ಅಧಿಕಾರಿಗಳ ಈ ಬೇಜವಾಬ್ದಾರಿತನದಿಂದ ಊರಿನ ರಸ್ತೆಯುದ್ದಕ್ಕೂ ಘನತ್ಯಾಜ್ಯದ ವಾಸನೆಯಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ನಡೆದಾಡಲು ಕಷ್ಟಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬಂಟ್ವಾಳ ಪುರಸಭೆ ತಕ್ಷಣ ಸ್ಪಂದಿಸಿ ಸಮಸ್ಯೆ ಯನ್ನು ಬಗೆಹರಿಸುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News