ನಟಿ ತಾಪ್ಸಿ, ನಿರ್ದೇಶಕ ಅನುರಾಗ್‌ ಕಶ್ಯಪ್‌ ನಿವಾಸದ ಮೇಲೆ ಐಟಿ ದಾಳಿ: ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ

Update: 2021-03-03 13:58 GMT

ಹೊಸದಿಲ್ಲಿ: ಬಾಲಿವುಡ್‌ ನ ಖ್ಯಾತ ನಟಿ ತಾಪ್ಸಿ ಪನ್ನು ಹಾಗೂ ನಿರ್ದೇಶಕ ಅನುರಾಗ್‌ ಕಶ್ಯಪ್‌ ರವರ ನಿವಾಸಕ್ಕೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆಯ ಆರೋಪದಲ್ಲಿ ಇಬ್ಬರ ನಿವಾಸಗಳಿಗೆ ದಾಳಿ ನಡೆಸಲಾಗಿತ್ತು. ಈ ಕುರಿತಾದಂತೆ ಇದೀಗ ಸಾಮಾಜಿಕ ತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

"ಸರಕಾರದ ಕೈಗೊಂಬೆಯಂತೆ ವರ್ತಿಸದೇ, ಸರಕಾರದ ದುರಾಡಳಿತದ ವಿರುದ್ಧ ನ್ಯಾಯವಾಗಿ ಧ್ವನಿಯೆತ್ತುತ್ತಿರುವ ಈ ಇಬ್ಬರ ವಿರುದ್ಧ ಐಟಿ ರೈಡ್‌ ಷಡ್ಯಂತ್ರ ನಡೆಸಲಾಗುತ್ತಿದೆ" ಎಂದು ಬಳಕೆದಾರರೋರ್ವರು ಕಾಮೆಂಟ್‌ ಮಾಡಿದ್ದಾರೆ. "ಇದೇ ಕಾರಣದಿಂದಾಗಿ ಶಾರೂಖ್‌ ಖಾನ್‌, ಸಲ್ಮಾನ್‌ ಖಾನ್‌ ಮತ್ತು ಅಮಿತಾಭ್‌ ಬಚ್ಚನ್‌ ರಂತವರು ಸರಕಾರದ ವಿರುದ್ಧ ಮಾತನಾಡುವುದಿಲ್ಲ" ಎಂದು ಇನ್ನೋರ್ವ ಬಳಕೆದಾರರು ಟ್ವೀಟ್‌ ಮಾಡಿದ್ದಾರೆ.

ಈ ಹಿಂದೆ ಖ್ಯಾತ ಅಂತಾರಾಷ್ಟ್ರೀಯ ಪಾಪ್‌ ಗಾಯಕಿ ರಿಹಾನ್ನಾ ರೈತರ ಪ್ರತಿಭಟನೆಯ ವೇಳೆ ಟ್ವೀಟ್‌ ಮಾಡಿದ್ದ ಸಂದರ್ಭದಲ್ಲಿ  ತಾಪ್ಸಿ ಅವರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದು, ಈ ಟ್ವೀಟ್‌ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿತ್ತು. "ಒಂದು ಟ್ವೀಟ್‌ ನಿಮ್ಮ ಒಗ್ಗಟ್ಟನ್ನು ಕೆರಳಿಸುತ್ತದೆ. ಒಂದು ಜೋಕ್‌ ನಿಮ್ಮ ನಂಬಿಕೆಯನ್ನು ಕೆರಳಿಸುತ್ತದೆ. ಒಂದು ಪ್ರದರ್ಶನವು ನಿಮ್ಮ ಧಾರ್ಮಿಕ ನಂಬಿಕೆಯನ್ನು ಕೆರಳಿಸುತ್ತದೆ. ನಿಮ್ಮ ಮೌಲ್ಯ ವ್ಯವಸ್ಥೆಯನ್ನು ನೀವು ಮೊದಲು ಬಲಪಡಿಸಿಕೊಳ್ಳಬೇಕೇ ಹೊರತು ಇನ್ನೊಬ್ಬರಿಗೆ ಪ್ರೊಪೊಗಾಂಡಾ ಟೀಚರ್‌ ಆಗದಿರಿ" ಎಂದು ಟ್ವೀಟ್‌ ಮಾಡಿದ್ದರು.

ಇನ್ನು ಅನುರಾಗ್‌ ಕಶ್ಯಪ್‌ ಕೂಡಾ ಸರಕಾರದ ಜನ ವಿರೋಧಿ ನೀತಿಗಳ ಕುರಿತಾದಂತೆ ಬಹಿರಂಗವಾಗಿ ಧ್ವನಿಯೆತ್ತುತ್ತಿದ್ದರು. ಈ ಕಾರಣಗಳಿಂದಾಗಿಯೇ ಅವರ ವಿರುದ್ಧ ಐಟಿ ರೈಡ್‌ ಮಾಡಿಸಲಾಗಿದೆ ಎಂದು ಸಾಮಾಜಿಕ ತಾಣದಾದ್ಯಂತ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News