ಈ ನವವಧುವಿನ ಹೃದಯಾಘಾತಕ್ಕೆ ಕಾರಣ ಏನು ಗೊತ್ತೇ ?

Update: 2021-03-07 03:49 GMT

ಭುವನೇಶ್ವರ : ನವವಧುವನ್ನು ವರನ ಮನೆಗೆ ಬೀಳ್ಕೊಡುವ ’ಬಿದಾಯಿ’ ಸಮಾರಂಭದಲ್ಲಿ ಅತಿಯಾಗಿ ಅತ್ತ ಕಾರಣದಿಂದ ಹೃದಯಾಘಾತಕ್ಕೆ ಒಳಗಾಗಿ ನವವಧು ಮೃತಪಟ್ಟ ಘಟನೆ ಒಡಿಶಾದ ಸೋನೇಪುರ ಜಿಲ್ಲೆಯಿಂದ ವರದಿಯಾಗಿದೆ.

ಜುಲುಂದಾ ಗ್ರಾಮದ ಗುಪ್ತೇಶ್ವರಿ ಸಾಹು ಅಲಿಯಾಸ್ ರೋಸಿ ಮೃತಪಟ್ಟ ಮಹಿಳೆ. ಬಾಲಂಗೀರ್ ಜಿಲ್ಲೆಯ ತೆತೆಲ್‌ಗಾಂವ್ ಗ್ರಾಮದ ಬಿಸಿಕೇಶನ್ ರೊಂದಿಗೆ ಈಕೆಯ ವಿವಾಹವಾಗಿತ್ತು.

ವಿವಾಹ ವಿಧಿವಿಧಾನ ಮುಗಿದ ಬಳಿಕ ’ಬಿದಾಯಿ’ ಸಮಾರಂಭದಲ್ಲಿ ಪತಿಯ ಮನೆಗೆ ನವವಧುವನ್ನು ಕಳುಹಿಸಿಕೊಡಲು ಪೋಷಕರು ಸಜ್ಜಾಗುತ್ತಿದ್ದರೆ ರೋಸಿ ನಿರಂತರವಾಗಿ ಅಳುತ್ತಲೇ ಇದ್ದಳು. ಕೊನೆಗೆ ಪ್ರಜ್ಞೆ ಕಳೆದುಕೊಂಡು ನೆಲದ ಮೇಲೆ ಬಿದ್ದಳು. ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆಕೆಯ ಮುಖಕ್ಕೆ ನೀರು ಸಿಂಪಡಿಸಿ ಆಕೆಯನ್ನು ಉಪಚರಿಸಿದರೂ ಪ್ರಯೋಜನವಾಗಲಿಲ್ಲ.

ಎಲ್ಲ ಪ್ರಯತ್ನಗಳು ವಿಫಲವಾದಾಗ ದುಂಗುರಿಪಾಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಯ್ಯಲಾಯಿತು. ಆದರೆ ಆ ವೇಳೆಗೆ ನವವಧು ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಯಿತು.

ರೋಸಿಯ ತಂದೆ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದರಿಂದ ಆಘಾತಕ್ಕೊಳಗಾಗಿದ್ದ ಆಕೆಯ ವಿವಾಹವನ್ನು ಸೋದರಮಾವನ ಕುಟುಂಬದವರು ಹಾಗೂ ಕೆಲ ಸಾಮಾಜಿಕ ಕಾರ್ಯಕರ್ತರು ಆಯೋಜಿಸಿದ್ದರು ಎಂದು ಜುಲುಂದಾ ಗ್ರಾಮದ ನಿವಾಸಿರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News