ರೈತರು ಮತ್ತೊಮ್ಮೆ ದಿಲ್ಲಿ ಪ್ರವೇಶಿಸಿ ಬ್ಯಾರಿಕೇಡ್ ಗಳನ್ನು ಉಲ್ಲಂಘಿಸಬೇಕಾಬಹುದು: ರಾಕೇಶ್ ಟಿಕಾಯತ್

Update: 2021-03-24 16:42 GMT

ಜೈಪುರ, ಮಾ. 24: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧದ ಚಳವಳಿ ವಿಭಜನೆಯಾಗಲಾರದು. ರೈತರು ಮತ್ತೆ ದಿಲ್ಲಿ ಪ್ರವೇಶಿಸಿ ತಡೆಬೇಲಿಗಳನ್ನು ಉಲ್ಲಂಘಿಸಬೇಕಾಗಬಹುದು ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ಅಧ್ಯಕ್ಷ ರಾಕೇಶ್ ಟಿಕಾಯತ್ ಮಂಗಳವಾರ ಹೇಳಿದ್ದಾರೆ.

‘‘ಅವರು (ಕೇಂದ್ರ ಸರಕಾರ) ನಮ್ಮನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸಲು ಪ್ರಯತ್ನಿಸಿದರು. ಆದರೆ, ಸಫಲರಾಗಲಿಲ್ಲ. ನಾವು ದಿಲ್ಲಿ ಪ್ರವೇಶಿಸಬೇಕಿದೆ ಹಾಗೂ ತಡೆಬೇಲಿಗಳನ್ನು ಉಲ್ಲಂಘಿಸಬೇಕಿದೆ’’ ಎಂದು ಜೈಪುರದಲ್ಲಿ ರೈತ ಪ್ರತಿಭಟನಕಾರರನ್ನು ಉದ್ದೇಶಿಸಿ ಅವರು ಹೇಳಿದರು.

ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ‘‘ರೈತರು ಎಲ್ಲಿ ಬೇಕಾದರೂ ಬೆಳೆಯನ್ನು ಮಾರಬಹುದು ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ವಿಧಾನ ಸಭೆ, ಜಿಲ್ಲಾಧಿಕಾರಿ ಕಚೇರಿ ಹಾಗೂ ಸಂಸತ್ತಿನಲ್ಲಿ ಬೆಳೆಯನ್ನು ಮಾರಿ ಅವರ ಹೇಳಿಕೆಯನ್ನು ಸಾಬೀತುಗೊಳಿಸಲಿದ್ದೇವೆ. ಸಂಸತ್ತಿಗಿಂತ ಉತ್ತಮವಾದ ಮಂಡಿ ಬೇರೆ ಇಲ್ಲ’’ ಎಂದರು.

ರವಿವಾರ ಶಿವಮೊಗ್ಗದಲ್ಲಿ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ್ದ ರಾಕೇಶ್ ಟಿಕಾಯತ್, ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದಂತೆ ಇಲ್ಲಿ ಕೂಡ ಪ್ರತಿಭಟನೆ ನಡೆಸುವಂತೆ ಸಲಹೆ ನೀಡಿದ್ದರು.

‘‘ಈ ಹೋರಾಟ ದೀರ್ಘ ಕಾಲ ಮುಂದುವರಿಯಲಿದೆ. ಕರಾಳ ಕಾಯ್ದೆಗಳನ್ನು ಹಿಂಪಡೆಯುವ ವರೆಗೆ ಹಾಗೂ ಕನಿಷ್ಠ ಬೆಂಬಲ ಬೆಲೆಯ ಕಾಯ್ದೆ ಜಾರಿಗೆ ತರುವ ವರೆಗೆ ಪ್ರತಿ ನಗರಗಳಲ್ಲಿ ನಾವು ಇಂತಹ ಪ್ರತಿಭಟನೆಗಳನ್ನು ನಡೆಸುವ ಅಗತ್ಯ ಇದೆ. ಕರ್ನಾಟಕದಲ್ಲಿ ಕೂಡ ನಾವು ಪ್ರತಿಭಟನೆ ನಡೆಸಬೇಕಿದೆ’’ ಎಂದು ರಾಕೇಶ್ ಟಿಕಾಯತ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News