ಬಾಂಗ್ಲಾದೇಶದಲ್ಲಿ ಮೋದಿ ಆಗಮನಕ್ಕೆ ವಿರೋಧಿಸಿ ಪ್ರತಿಭಟನೆ

Update: 2021-03-26 15:28 GMT

ಢಾಕಾ (ಬಾಂಗ್ಲಾದೇಶ), ಮಾ. 26: ಬಾಂಗ್ಲಾದೇಶದ ಸುವರ್ಣ ಮಹೋತ್ಸವ ಹಾಗೂ ದೇಶದ ಸ್ಥಾಪಕ, ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ತಂದೆ ಶೇಕ್ ಮುಜಿಬುರ್ ರೆಹ್ಮಾನ್ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಆಗಮಿಸಿರುವುದನ್ನು ವಿರೋಧಿಸಿ ಶುಕ್ರವಾರ ನಡೆದ ಪ್ರತಿಭಟನೆ ಸಂದರ್ಭ ಚಿತ್‌ಗಾಂಗ್‌ನಲ್ಲಿ ಪೊಲೀಸರು ಹಾರಿಸಿದ ರಬ್ಬರ್ ಗುಂಡಿಗೆ ಕನಿಷ್ಠ ನಾಲ್ವರು ಪ್ರತಿಭಟನಕಾರರು ಸಾವನ್ನಪ್ಪಿದ್ದಾರೆ.

ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದಾಗ ಪ್ರತಿಭಟನಾಕಾರರನ್ನು ಚದುರಿಸಲು ನಾವು ರಬ್ಬರ್ ಗುಂಡು ಹಾಗೂ ಅಶ್ರುವಾಯ ಸೆಲ್‌ಗಳನ್ನು ಪ್ರಯೋಗಿಸಬೇಕಾಯಿತು ಎಂದು ಪೊಲೀಸ್ ಅಧಿಕಾರಿ ರಫೀಕ್‌ಉಲ್ ಇಸ್ಲಾಂ ಹೇಳಿದ್ದಾರೆ. ಗುಂಡಿನಿಂದ ಗಾಯಗೊಂಡ 8 ಮಂದಿಯನ್ನು ನಗರದ ಆಸ್ಪತ್ರೆಗೆ ತರಲಾಗಿತ್ತು. ಅವರಲ್ಲಿ 4 ಮಂದಿ ಸಾವನ್ನಪ್ಪಿದರು ಎಂದು ಚಿತ್‌ಗಾಂಗ್‌ನ ಇನ್ನೋರ್ವ ಪೊಲೀಸ್ ಅಧಿಕಾರಿ ಮುಹಮ್ಮದ್ ಅಲಾವುದ್ದೀನ್ ತಿಳಿಸಿದ್ದಾರೆ.

 ನರೇಂದ್ರ ಮೋದಿ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಲು ಹೆಫಝತ್-ಎ-ಇಸ್ಲಾಂನ ಸಾವಿರಾರು ಕಾರ್ಯಕರ್ತರು ಶುಕ್ರವಾರದ ಪ್ರಾರ್ಥನೆ ಮುಗಿಸಿ ಚಿತ್‌ಗಾಂಗ್‌ನಲ್ಲಿ ಸೇರಿದ್ದರು. ಇನ್ನೊಂದೆಡೆ ಪೊಲೀಸರು ತಡೆ ಬೇಲಿಗಳನ್ನು ಹಾಕಿದ್ದರು ಹಾಗೂ ರಸ್ತೆ ತಡೆದಿದ್ದರು. ಪ್ರತಿಭಟನಾಕಾರರು ತಡೆಬೇಲಿಯನ್ನು ಕಿತ್ತು ಹಾಕಲು ಪ್ರಯತ್ನಿಸಿದರು. ಇದರಿಂದಾಗಿ ಪೊಲೀಸರೊದಿಗೆ ಘರ್ಷಣೆ ಏರ್ಪಟ್ಟಿತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೇಲ್, ರಬ್ಬರ್ ಗುಂಡು ಹಾಗೂ ಲಾಠಿ ಪ್ರಯೋಗ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಶುಕ್ರವಾರದ ಪ್ರಾರ್ಥನೆ ಬಳಿಕ ಢಾಕಾ ಬೈತುಲ್ ಮುಕರ್ರಮ್ ಮಸೀದಿಯ ಉತ್ತರದ ಗೇಟ್‌ನಿಂದ ರ್ಯಾಲಿ ಆರಂಭಿಸಲು ಪ್ರತಿಭಟನಾಕಾರರು ಯೋಜಿಸಿದ್ದರು. ಆದರೆ, ಪೊಲೀಸರು ರ್ಯಾಲಿ ನಡೆಸಲು ಅವಕಾಶ ನೀಡಲಿಲ್ಲ. ಇದರಿಂದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆಯಿತು.

ಕೆಲವು ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲೆಸೆದರು. ಪೊಲೀಸರು ಪ್ರತಿಕಾರವಾಗಿ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಆಕ್ರೋಶಿತರಾದ ಪ್ರತಿಭಟನಾಕಾರರು ಹಲವು ವಾಹನಗಳಿಗೆ ಬೆಂಕಿ ಹಚ್ಚಿದರು. ಸುಮಾರು ಎರಡು ಗಂಟೆಗಳ ಬಳಿಕ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಸಫಲರಾದರು. ನರೇಂದ್ರ ಮೋದಿ ಭೇಟಿ ವಿರೋಧಿಸಿ ಢಾಕಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಗುರುವಾರ ನಡೆದ ಪ್ರತಿಭಟನೆ ಸಂದರ್ಭ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ ಇಬ್ಬರು ಪತ್ರಕರ್ತರು, ಸರಕಾರ ಪರ ಬಾಂಗ್ಲಾದೇಶ ಛಾತ್ರ ಲೀಗ್ (ಬಿಸಿಎಲ್)ನ ಇಬ್ಬರು ಕಾರ್ಯಕರ್ತರು ಕೂಡ ಒಳಗೊಂಡಿದ್ದಾರೆ. ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳತ್ತ ಕಲ್ಲು ತೂರಾಟ ನಡೆಸಿರುವುದರಿಂದ ಕನಿಷ್ಠ ನಾಲ್ವರು ಪೊಲೀಸರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ‘‘ಸುಮಾರು 200 ಪ್ರತಿಭಟನಾಕಾರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ನಾವು ಅಶ್ರುವಾಯು ಶೆಲ್ ಹಾಗೂ ರಬ್ಬರ್ ಗುಂಡುಗಳನ್ನು ಪ್ರಯೋಗಿಸಬೇಕಾಯಿತು. ಹಿಂಸಾಚಾರಕ್ಕೆ ಸಂಬಂಧಿಸಿ 33 ಮಂದಿ ಪ್ರತಿಭಟನಾಕಾರರನ್ನು ಬಂಧಿಸಿದ್ದೇವೆ’’ ಎಂದು ಪೊಲೀಸ್ ಅಧಿಕಾರಿ ನೂರುಲ್ ಇಸ್ಲಾಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News