ದೇಶಕ್ಕೆ ಬಿಜೆಪಿ ಆಡಳಿತದಿಂದ ಆಗಿರುವ ನೋವಿಗೆ ಹೋಲಿಸಿದರೆ ನನ್ನ ನೋವು ಏನೂ ಅಲ್ಲ : ಮಮತಾ ಬ್ಯಾನರ್ಜಿ

Update: 2021-03-31 04:22 GMT

ನಂದಿಗ್ರಾಮ (ಪಶ್ಚಿಮ ಬಂಗಾಳ): ನಂದಿಗ್ರಾಮ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆ ಬಯಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ತಮ್ಮ ಪ್ರಚಾರ ಅಭಿಯಾನವನ್ನು ಭರ್ಜರಿಯಾಗಿ ಮುಗಿಸಿದರು. ರಾಷ್ಟ್ರಗೀತೆ ಹಾಡುವ ವೇಳೆ ವ್ಹೀಲ್‌ಚೇರ್‌ನಿಂದ ಎದ್ದುನಿಂತು ಗೌರವ ಸೂಚಿಸಿ ಗಮನ ಸೆಳೆದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಮಾಜಿ ಸಹವರ್ತಿ ಸುವೇಂಧು ಅಧಿಕಾರಿ ನಡುವಿನ ಹೋರಾಟದಿಂದಾಗಿ ನಂದಿಗ್ರಾಮ ಕ್ಷೇತ್ರ ರಾಷ್ಟ್ರದ ಗಮನ ಸೆಳೆದಿದೆ. ಈ ಕ್ಷೇತ್ರದಲ್ಲಿ ಗುರುವಾರ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಮುಕ್ತಾಯವಾಯಿತು.

ನಾಮಪತ್ರ ಸಲ್ಲಿಕೆ ದಿನ ಕಾಲಿಗೆ ತೀವ್ರ ಗಾಯವಾಗಿದ್ದ ಮಮತಾ ಬ್ಯಾನರ್ಜಿ ವ್ಹೀಲ್‌ಚೇರ್‌ನಲ್ಲಿ ಕುಳಿತೇ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದರು. ತಮ್ಮ ಪ್ರತಿ ಪ್ರಚಾರ ಭಾಷಣದಲ್ಲಿ, "ದೇಶಕ್ಕೆ ಬಿಜೆಪಿ ಆಡಳಿತದಿಂದ ಆಗಿರುವ ನೋವಿಗೆ ಹೋಲಿಸಿದರೆ ನನ್ನ ನೋವು ಏನೂ ಅಲ್ಲ" ಎಂದು ಒತ್ತಿ ಹೇಳಿದ್ದರು.

ಅವರು ರಾಷ್ಟ್ರಗೀತೆ ವೇಳೆ ವ್ಹೀಲ್‌ಚೇರ್‌ನಿಂದ ಎದ್ದು ನಿಲ್ಲುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದನ್ನು ಮಾಸ್ಟರ್‌ಸ್ಟ್ರೋಕ್ ಎಂದು ಬಣ್ಣಿಸಲಾಗಿದೆ.

ಹತ್ತು ವರ್ಷದ ಹಿಂದೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣವಾಗಿದ್ದ ನಂದಿಗ್ರಾಮ, 35 ವರ್ಷಗಳ ಎಡರಂಗ ಸರ್ಕಾರದ ಆಡಳಿತವನ್ನು ಕೊನೆಗೊಳಿಸಿತ್ತು. ಈ ಬಾರಿಯ ಚುನಾವಣೆ ಹೋರಾಟ ಅವರ ವೃತ್ತಿಜೀವನದಲ್ಲೇ ಕಠಿಣ ಹೋರಾಟ ಎಂದು ವಿಶ್ಲೇಷಿಸಲಾಗುತ್ತಿದೆ. ಸುವೇಂಧು ಅಧಿಕಾರಿಗೆ ನಂದಿಗ್ರಾಮವನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು.

ಎಡರಂಗ ಸರ್ಕಾರ ಭೂಮಿಸ್ವಾಧೀನಪಡಿಸಿಕೊಂಡಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ತಳಮಟ್ಟದ ಸಂಘಟನೆ ಮಾಡಿದ್ದ ಸುವೇಂಧು ಅಧಿಕಾರಿ ತೀರಾ ಇತ್ತೀಚಿನವರೆಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಿಕಟವರ್ತಿಯಾಗಿದ್ದರು. ಇತ್ತೀಚೆಗೆ ಬಿಜೆಪಿ ಸೇರುವ ಮೂಲಕ ದೀದಿ ವಿರುದ್ಧ ಸಮರ ಸಾರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News