ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ ಕಡಿತ ಆದೇಶವನ್ನು ಹಿಂಪಡೆದ ಕೇಂದ್ರ ಸರಕಾರ

Update: 2021-04-01 04:32 GMT

ಹೊಸದಿಲ್ಲಿ: ಬುಧವಾರ ಸಂಜೆ ಘೋಷಿಸಿದ್ದ ಸಣ್ಣ ಉಳಿತಾಯಗಳ  ಯೋಜನೆಗಳ ಮೇಲಿನ ಬಡ್ಡಿದರಗಳ ಮೇಲಿನ ಭಾರೀ ಕಡಿತಯನ್ನು ಕೇಂದ್ರ ಸರಕಾರ ಇಂದು ಹಿಂದಕ್ಕೆ ಪಡೆದಿದೆ. 

ಕಣ್ತಪ್ಪಿನಿಂದ ಹೊರಡಿಸಲಾಗಿರುವ ಆದೇಶವನ್ನು ಹಿಂತೆಗೆದುಕೊಳ್ಳುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಅಥವಾ ಎನ್‍ ಎಸ್ ಸಿ ಹಾಗೂ ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ಯೋಜನೆಗಳಲ್ಲಿನ ಮೇಲಿನ ಬಡ್ಡಿ ಕಡಿತವು ಲಕ್ಷಾಂತರ  ಮಧ್ಯಮ ವರ್ಗದ ಠೇವಣಿದಾರರಿಗೆ ನೋವುಂಟು ಮಾಡಿತ್ತು.

ಭಾರತ ಸರಕಾರದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು 2020-21ರ ಕೊನೆಯ ತ್ರೈಮಾಸಿಕದಲ್ಲಿ ಅಸ್ತಿತ್ವದಲ್ಲಿದ್ದ ಅಂದರೆ 2021ರ ಹೊತ್ತಿಗೆ ಇದ್ದ ದರಗಳಲ್ಲಿ ಮುಂದುವರಿಯುತ್ತದೆ. ಕಣ್ತಪ್ಪಿನಿಂದ ಹೊರಡಿಸಲಾಗಿರುವ ಆದೇಶಗಳನ್ನು ಹಿಂಪಡೆಯಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ಪಶ್ಚಿಮಬಂಗಾಳ ಹಾಗೂ ಅಸ್ಸಾಂ ವಿಧಾನಸಭೆಗೆ ಎರಡನೇ ಹಂತದ ಚುನಾವಣೆ ಇಂದು ನಡೆಯುತ್ತಿರುವಾಗಲೇ ಸಣ್ನ ಉಳಿತಾಯಗಳ ಮೇಲಿನ ಬಡ್ಡಿ ದರ ಕಡಿತ ಆದೇಶವನ್ನು ಹಿಂಪಡೆದಿರುವ ಕೇಂದ್ರ ಸರಕಾರ ಯೂ-ಟರ್ನ್ ಪಡೆದಿದೆ.

ಬುಧವಾರ ಸಂಜೆ ಹಣಕಾಸು ವರ್ಷದ ಕೊನೆಯ ದಿನದಂದು ಸರಕಾರವು 2021-22ರ ಮೊದಲ ತ್ರೈಮಾಸಿಕದಲ್ಲಿ  ಬಡ್ಡಿದರಗಳಲ್ಲಿ ಭಾರೀ ಕಡಿತ ಘೋಷಿಸಿತ್ತು. ಪಿಪಿಎಫ್ ಮೇಲಿನ ಬಡ್ಡಿದರವನ್ನು ಶೇ.7.1ರಿಂದ ಶೇ.6.4ಕ್ಕೆ ಇಳಿಸಲಾಗಿತ್ತು. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು(ಎನ್ ಎಸ್ ಸಿ)ಯಲ್ಲಿ ಶೇ.6.8ರಿಂದ ಶೇ.5.9ಕ್ಕೆ ಇಳಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News