ಸಬ್ಸಿಡಿ ಆಹಾರಧಾನ್ಯ ಪೂರೈಕೆಗಾಗಿ ಕ್ರಮಗಳನ್ನು ರೂಪಿಸಲು ಕೇಂದ್ರಕ್ಕೆ ನೀತಿ ಆಯೋಗ ಶಿಫಾರಸು

Update: 2021-04-01 17:44 GMT

ಹೊಸದಿಲ್ಲಿ,ಎ.1: ಕೇಂದ್ರ ಸರಕಾರದ ಆರ್ಥಿಕ ಸಂಪನ್ಮೂಲಗಳನ್ನು‘‘ಚಿವುಟದೆಯೇ’’ ಅಗತ್ಯವಿರುವವರಿಗೆ ಕಡಿಮೆ ದರದಲ್ಲಿ ಆಹಾರಧಾನ್ಯಗಳ ಪೂರೈಕೆಯನ್ನು ಖಾತರಿಪಡಿಸುವುದಕ್ಕಾಗಿ ಕೈಗೊಳ್ಳಬಹುದಾದಂತಹ ವಿವಿಧ ಕ್ರಮಗಳನ್ನು ಜಾರಿಗೆ ತರಲು ನೀತಿ ಆಯೋಗವು ಗುರುವಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.

 ಜನಸಂಖ್ಯಾ ಏರಿಕೆಯ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಸಬ್ಸಿಡಿ ದರದಲ್ಲಿ ಆಹಾರಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಸಚಿವಾಲಯವು ಈ ಬಗ್ಗೆ ನೀತಿ ಆಯೋಗದ ಸಲಹೆಯನ್ನು ಕೋರಿತ್ತು.

 ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಜನಸಂಖ್ಯೆಯು ಹೆಚ್ಚುತ್ತಿರುವುದರಿಂದ ಆಹಾರಧಾನ್ಯಗಳ ವಿತರಣೆ ಹೆಚ್ಚಿಸುವಂತೆ ರಾಜ್ಯಗಳಿಗೆ ಬೇಡಿಕೆ ಸಲ್ಲಿಸುತ್ತಿರುವುದಾಗಿ ಆಹಾರ ಸಚಿವಾಲಯ ತನಗೆ ತಿಳಿಸಿದೆಯೆಂದು ನೀತಿ ಆಯೋಗ ಹೇಳಿದೆ.

‘‘ ಆಹಾರ ಸಬ್ಸಿಡಿಯು ಅತ್ಯಂತ ಕ್ಷಿಪ್ರ ದರದಲ್ಲಿ ಹೆಚ್ಚುತ್ತಿದೆ ಎಂದು ಸಚಿವಾಲಯವು ಕಳವಳ ವ್ಯಕ್ತಪಡಿಸಿತ್ತು. ಹೀಗಾಗಿ ಭರಿಸಲು ಸಾಧ್ಯವಾಗಬಹುದಾದಂತಹ ಆಹಾರ ಸಬ್ಸಿಡಿಯನ್ನು ಉಳಿಸಿಕೊಳ್ಳಬೇಕಾಗಿದೆ. ಆದರೆ ಅದು ನಮ್ಮ ಆರ್ಥಿಕ ಸಂಪನ್ಮೂಲಗಳನ್ನು ಚಿವುಟುವಂತಿರಬಾರದು’’ ಎಂದು ನೀತಿ ಆಯೋಗದ ಸದಸ್ಯ (ಕೃಷಿ) ರಮೇಶ್ ಅಭಿಪ್ರಾಯಿಸಿದ್ದಾರೆ.

2013ರಲ್ಲಿ ಅಂಗೀಕಾರಗೊಂಡಿರುವ ರಾಷ್ಟ್ರೀಯ ಭದ್ರತಾ ಕಾಯ್ದೆಯುಡಿ ಗ್ರಾಮೀಣ ಜನಸಂಖ್ಯೆಯ ಶೇ.75ರಷ್ಟು ಮಂದಿಗೆ ಹಾಗೂ ನಗರಪ್ರದೇಶಗಳ ಶೇ.50ರಷ್ಟು ಜನರಿಗೆ ಅಂದರೆ ದೇಶ ಗರಿಷ್ಠ 81.35 ಕೋಟಿ ಮಂದಿಗೆ ಪಡಿತರ ಆಹಾರಧಾನ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

2013 ಹಾಗೂ 2021ರ ನಡುವಿನ ಅವಧಿಯಲ್ಲಿ ಜನರ ತಲಾ ಆದಾಯದಲ್ಲಿ ಶೇ.40- 50 ಏರಿಕೆಯಾಗಿದ್ದು, ಹಲವಾರು ಮಂದಿಯ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಯಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಸಬ್ಸಿಡಿ ದರದ ಆಹಾರಧಾನ್ಯಗಳ ವಿತರಣೆಗೆ ಸಂಬಂಧಿಸಿ ನೂತನ ಕ್ರಮಗಳನ್ನು ರೂಪಿಸುವಾಗ ಈ ಅಂಶವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಚಾಂದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News