ಮಾರ್ಪಳ್ಳಿಯಲ್ಲಿ ಸರಣಿ ಕಳ್ಳತನ
Update: 2021-04-06 15:52 GMT
ಉಡುಪಿ, ಎ. 6: ದೈವಸ್ಥಾನ ಹಾಗೂ ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಎ.5ರಂದು ರಾತ್ರಿ ಮಾರ್ಪಳ್ಳಿ ಪರಿಸರದಲ್ಲಿ ನಡೆದಿದೆ.
ಮಾರ್ಪಳ್ಳಿ ರೈಲ್ವೆ ಸೇತುವೆ ಬಳಿ ನಿವಾಸಿ ಚೆನ್ನಮ್ಮ ಎಂಬವರು ರಾತ್ರಿ ಸೆಕೆ ಇದ್ದ ಕಾರಣ ಮನೆಯ ಮುಂಬದಿಯ ಛಾವಣಿಯಲ್ಲಿ ತನ್ನ ಮಗನೊಂದಿಗೆ ಮಲಗಿದ್ದು ಈ ವೇಳೆ ಕಳ್ಳರು ಚೆನ್ನಮ್ಮ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ಮಗ ಮಂಜುನಾಥ ಬಳಿ ಇದ್ದ ಮೊಬೈಲ್ ಕಳವು ಮಾಡಿರುವುದಾಗಿ ತಿಳಿದು ಬಂದಿದೆ. ಕಳವುಗೈದ ಸೊತ್ತುಗಳ ಒಟ್ಟು ಮೌಲ್ಯ 27,000 ರೂ. ಎಂದು ಅಂದಾಜಿಸಲಾಗಿದೆ.
ಅದೇ ರೀತಿ ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿ ಮಾಹಾಲಿಂಗೇಶ್ವರ ದೇವಸ್ಥಾನದ ಬಳಿಯ ಕಂಬಿಗಾರ ಬಬ್ಬುಸ್ವಾಮಿ ದೈವಸ್ಥಾನದ ಗರ್ಭಗುಡಿಯ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿದ ಕಳ್ಳರು, ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.