×
Ad

‘ಟೀಕಾ ಉತ್ಸವ್’ ಮೂಲಕ ಕೋವಿಡ್ ವಿರುದ್ಧ ಭಾರತದ ಎರಡನೇ ಮಹಾಯುದ್ಧ ಆರಂಭ: ಪ್ರಧಾನಿ ಮೋದಿ

Update: 2021-04-11 22:11 IST

ಹೊಸದಿಲ್ಲಿ,ಎ.11: ಇಂದಿನಿಂದ ಆರಂಭಗೊಂಡಿರುವ ನಾಲ್ಕು ದಿನಗಳ ‘ಟೀಕಾ ಉತ್ಸವ್’ ಲಸಿಕೆ ಅಭಿಯಾನವು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಭಾರತದ ಎರಡನೇ ಮಹಾಯುದ್ಧವಾಗಿದೆ ಎಂದು ರವಿವಾರ ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು,ವೈರಸ್‌ನ್ನು ನಿಯಂತ್ರಿಸಲು ಹಲವಾರು ಸಲಹೆಗಳನ್ನು ಜನರಿಗೆ ನೀಡಿದರಲ್ಲದೆ ವೈಯಕ್ತಿಕ ಮತ್ತು ಸಾಮಾಜಿಕ ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಆಗ್ರಹಿಸಿದರು.

ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಲಸಿಕೆಯನ್ನು ಹಾಕಿಸಿ,ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಚಿಕಿತ್ಸೆ ಕೊಡಿಸಿ,ಪ್ರತಿಯೊಬ್ಬರೂ ಇನ್ನೊಬ್ಬರನ್ನು ಉಳಿಸಿ ಮತ್ತು ಸೂಕ್ಷ್ಮ ಕಂಟೈನ್ಮೆಂಟ್ ವಲಯದ ಸೃಷ್ಟಿ ಸೇರಿದಂತೆ ನಾಲ್ಕು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಹೇಳಿಕೆಯಲ್ಲಿ ಜನರನ್ನು ಆಗ್ರಹಿಸಿದ ಮೋದಿ,ವಯಸ್ಸಾದವರು ಅಥವಾ ಹೆಚ್ಚು ಸುಶಿಕ್ಷಿತರಲ್ಲದವರಿಗೆ ಲಸಿಕೆಯನ್ನು ಪಡೆದುಕೊಳ್ಳಲು ನೆರವಾಗಬೇಕು ಮತ್ತು ಸಂಪನ್ಮೂಲಗಳು ಅಥವಾ ಮಾಹಿತಿಗಳ ಕೊರತೆ ಹೊಂದಿರಬಹುದಾದ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಹಕರಿಸಬೇಕು ಎಂದು ಕೋರಿದರು.

ಮಾಸ್ಕ್‌ಗಳನ್ನು ಧರಿಸುವ ಮೂಲಕ ಜನರು ತಮ್ಮನ್ನು ರಕ್ಷಿಸಿಕೊಳ್ಳಬಹುದು ಮತ್ತು ಇತರರನ್ನೂ ರಕ್ಷಿಸಬಹುದು ಎಂದ ಅವರು,ಯಾರಿಗಾದರೂ ಸೋಂಕು ತಗುಲಿದರೆ ಸೂಕ್ಷ್ಮ ಕಂಟೈನ್ಮೆಂಟ್ ವಲಯಗಳನ್ನು ರೂಪಿಸುವಲ್ಲಿ ಮಂಚೂಣಿಯಲ್ಲಿರುವಂತೆ ಕುಟುಂಬಗಳ ಮತ್ತು ಸಮಾಜದ ಸದಸ್ಯರಿಗೆ ಸೂಚಿಸಿದರು. ಭಾರತದಂತಹ ಹೆಚ್ಚಿನ ಜನಸಾಂದ್ರತೆಯಿರುವ ದೇಶದಲ್ಲಿ ಸಾಂಕ್ರಾಮಿಕವನ್ನು ತಡೆಯಲು ಇದು ಪ್ರಮುಖ ಮಾರ್ಗವಾಗಿದೆ ಎಂದರು.

ಸೂಕ್ಷ್ಮ ಕಂಟೈನ್ಮೆಂಟ್ ವಲಯಗಳ ಬಗ್ಗೆ ನಮ್ಮ ತಿಳುವಳಿಕೆ,ಅಗತ್ಯವಿಲ್ಲದಿದ್ದಾಗ ಮನೆಯಿಂದ ಹೊರಗೆ ಹೋಗದಿರುವುದು,ಅರ್ಹರು ಲಸಿಕೆಯನ್ನು ಪಡೆದುಕೊಳ್ಳುವುದು ಹಾಗೂ ಮಾಸ್ಕ್ ಧಾರಣೆ ಮತ್ತು ಇತರ ಕೋವಿಡ್ ಶಿಷ್ಟಾಚಾರಗಳ ಪಾಲನೆ ಇವುಗಳನ್ನು ನಮ್ಮ ಯಶಸ್ಸು ಅವಲಂಬಿಸಿದೆ ಎಂದ ಮೋದಿ,ಅರ್ಹರಾಗಿರುವ ಪ್ರತಿಯೊಬ್ಬರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಹಾಗೂ ಇದಕ್ಕಾಗಿ ಸಮಾಜ ಮತ್ತು ಆಡಳಿತ ಪೂರ್ಣ ಪ್ರಯತ್ನಗಳನ್ನು ಮಾಡಬೇಕು ಎಂದರು.

 ಲಸಿಕೆಯನ್ನು ಎಳ್ಳಷ್ಟೂ ವ್ಯರ್ಥಗೊಳಿಸಬಾರದು ಎಂದು ಒತ್ತಿ ಹೇಳಿದ ಅವರು,ದೇಶದ ಲಸಿಕೆ ಸಾಮರ್ಥ್ಯವನ್ನು ನಾವು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಮತ್ತು ಇದು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮಾರ್ಗವಾಗಿದೆ ಎಂದರು. ಜನರ ಸಹಭಾಗಿತ್ವ,ಅರಿವು ಮತ್ತು ಜವಾಬ್ದಾರಿಗಳನ್ನು ಈಡೇರಿಸುವ ಮೂಲಕ ಕೊರೋನವೈರಸ್ ಅನ್ನು ಮಣಿಸುವಲ್ಲಿ ನಾವು ಮತ್ತೆ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News