ಕೋವಿಡ್-19 ವಿರುದ್ಧ ಹೋರಾಟಕ್ಕಾಗಿ ಮಹಾರಾಷ್ಟ್ರಕ್ಕೆ ಆಕ್ಸಿಜನ್ ಕಳುಹಿಸಿಕೊಟ್ಟ ಮುಕೇಶ್ ಅಂಬಾನಿ

Update: 2021-04-15 15:51 GMT

ಹೊಸದಿಲ್ಲಿ: ಕೋಟ್ಯಧಿಪತಿ ಮುಖೇಶ್ ಅಂಬಾನಿ ಅವರು ತಮ್ಮ ರೆಫನರಿಗಳಲ್ಲಿ ಉತ್ಪತ್ತಿಯಾಗುವ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಪೂರೈಕೆ ಮಾಡಿದ್ದಾರೆ. ಈ ಮೂಲಕ ಕೊರೋನ ವೈರಸ್ ವಿರುದ್ಧ ಹೋರಾಡುತ್ತಿರುವ ದೇಶದ ನೆರವಿಗೆ ಮುಂದಾಗಿದ್ದಾರೆ. ಮಹಾರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ದೈನಿಕ ಕೊರೋನ ಸೋಂಕಿತರ ಸಂಖ್ಯೆ ದಾಖಲೆಮಟ್ಟದಲ್ಲಿ ಏರಿಕೆಯಾಗುತ್ತಿದೆ.

ಮಹಾರಾಷ್ಟ್ರದಲ್ಲಿ ವಿಶ್ವದ ಅತಿದೊಡ್ಡ ಸಂಸ್ಕರಣಾ ಸಂಕೀರ್ಣವನ್ನು ನಿರ್ವಹಿಸುತ್ತಿರುವ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಗುಜರಾತ್‌ನ ಜಾಮ್‌ನಗರದಿಂದ ಮಹಾರಾಷ್ಟ್ರಕ್ಕೆ ಉಚಿತವಾಗಿ ಆಮ್ಲಜನಕವನ್ನು ಪೂರೈಸಲು ಪ್ರಾರಂಭಿಸಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಿಲಯನ್ಸ್‌ನಿಂದ ರಾಜ್ಯಕ್ಕೆ 100 ಟನ್ ಅನಿಲ ಸಿಗಲಿದೆ ಎಂದು ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ

ರಿಲಯನ್ಸ್ ತನ್ನ ಪೆಟ್ರೋಲಿಯಂ ಕೋಕ್ ಅನಿಲೀಕರಣ ಘಟಕಗಳಿಗೆ ಮೀಸಲಾದ ಕೆಲವು ಆಕ್ಸಿಜನ್ ಸ್ಟ್ರೀಮ್ ಗಳನ್ನು ವೈದ್ಯಕೀಯ ಬಳಕೆಗೆ ಸೂಕ್ತಗೊಳಿಸಿದ ಬಳಿಕ ಮಹಾರಾಷ್ಟ್ರಕ್ಕೆ ಪೂರೈಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರಕಾರಿ ಸ್ವಾಮ್ಯದ ಭಾರತ್ ಪೆಟ್ರೋಲ್ ಕಾರ್ಪೋರೇಶನ್ ತನ್ನ ಕೇರಳದ ಕೊಚ್ಚಿ ಸಂಸ್ಕರಣಾಗಾರದಲ್ಲಿ 20 ಟನ್ ಆಮ್ಲಜನಕದ ದಾಸ್ತಾನು ನಿರ್ಮಿಸಿದ್ದು, ಇದು ವೈದ್ಯಕೀಯ ಬಳಕೆಗಾಗಿ ಬಾಟಲಿಗಳಿಗೆ ಸರಬರಾಜು ಮಾಡುತ್ತಿದೆ ಎಂದು ಕಂಪೆನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಹಲವು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆ ಎದುರಾಗಿದೆ.  ಆಕ್ಸಿಜನ್ ಸರಬರಾಜಿನ ಬಳಿಕವಷ್ಟೇ ನಾವು ಇನ್ನಷ್ಟು ರೋಗಿಗಳನ್ನು ದಾಖಲಿಸಿಕೊಳ್ಳಬಹುದು. ನಮಗೆ ಪ್ರತಿದಿನ 50 ಸಿಲಿಂಡರ್ ಗಳ ಅಗತ್ಯವಿದೆ. ಆದರೆ ನಮಗೆ ಕೇವಲ 30 ಸಿಲಿಂಡರ್ ಗಳು ಸಿಗುತ್ತಿವೆ ಎಂದು ಉಮಾ ಆಸ್ಪತ್ರೆಯ ಡಾ.ಯೊಗೇಶ್ ಮೋರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News