ಬಾಹ್ಯಾಕಾಶದ ಆಕರ್ಷಣೆ: ಶನಿವಾರ ಮಂಗಳ ಗ್ರಹದ ಗ್ರಹಣ

Update: 2021-04-16 15:17 GMT

ಉಡುಪಿ, ಎ.16: ಕಳೆದ ರವಿವಾರದ (ಎ.11) ಅಮಾವಾಸ್ಯೆಯೊಂದಿಗೆ, ಚಂದ್ರನು ಸಂಜೆ ಆಕಾಶದಲ್ಲಿ ಅರ್ಧ ಬೆಳಕಿನಲ್ಲಿ ಕಾಣಿಸಿಕೊಳ್ಳುತ್ತಾನೆ. ಏಕೆಂದರೆ ಚಂದ್ರ ಸೂರ್ಯನನ್ನು ಪಶ್ಚಿಮ ದಿಗಂತದ ಕಡೆಗೆ ಅನುಸರಿಸುತ್ತಾನೆ. ಶನಿವಾರ ಸಂಜೆ 5ರ ಸುಮಾರಿಗೆ ಆಕಾಶವನ್ನು ನೀವು ಗಮನಿಸಿದರೆ, ಚಂದ್ರನಿಗೆ ಬಹಳ ಹತ್ತಿರದಲ್ಲಿ ಹೊಳೆಯುವ ಒಂದು ಸಣ್ಣ ಚುಕ್ಕಿಯನ್ನು ನೋಡಬಹುದು. ಇದೇ ಮಂಗಳಗ್ರಹ ಅಥವಾ ಕೆಂಪು ಗ್ರಹ. ಸಮಯ ಸರಿದಂತೆ ಕೆಲವೇ ನಿಮಿಷಗಳಲ್ಲಿ, ಕೆಂಪು ಗ್ರಹವು ಆಕಾಶದಲ್ಲಿ ಎಲ್ಲಿಯೂ ಕಾಣಿಸದೆ ಇ್ದಕ್ಕಿದ್ದಂತೆ ಕಣ್ಮರೆಯಾಗಿ ಬಿಡುತ್ತದೆ.

ಇದನ್ನೇ ಮಂಗಳ ಗ್ರಹಣ ಎನ್ನುವುದು. ಇದಕ್ಕೆ ಕಾರಣ ಚಂದ್ರನು ಮಂಗಳ ಗ್ರಹವನ್ನು ಆಚ್ಛಾದಿಸುವುದು. ಈ ವಿದ್ಯಮಾನ ಭಾರತೀಯರಿಗೆ ಮಾತ್ರ ಕಾಣಲು ಸಿಗುತ್ತದೆ. ಚಂದ್ರನು ಭೂಮಿಗೆ ಹತ್ತಿರದಲ್ಲಿ ಹಾಗೂ ಆಕಾಶದಲ್ಲಿ ಅರ್ಧ ಡಿಗ್ರಿ ಅಗಲದಲ್ಲಿ ಪ್ರತೀ ರಾತ್ರಿ ಆಕಾಶದಾದ್ಯಂತ ಚಲಿಸುತ್ತಾನೆ. ಈ ಪಥದಲ್ಲಿ, ಚಂದ್ರನು ನಕ್ಷತ್ರದ ಮುಂದೆ ಹಾದುಹೋಗುವುದು ಮತ್ತು ಆಚ್ಛಾದಿಸುವುದು ಅಪರೂಪದ ಸಂದರ್ಭಗಾಗಿವೆ.
ಆಚ್ಛಾದನೆಯು ಖಗ್ರಾಸ ಸೂರ್ಯಗ್ರಹಣದಂತೆ. ಚಂದ್ರನು ಒಂದು ವಸ್ತುವನ್ನು ಸಂಪೂರ್ಣವಾಗಿ ಆವರಿಸಿ, ಆ ವಸ್ತು ಆಕಾಶದಲ್ಲಿ ಒಂದು, ಒಂದೂವರೆ ಗಂಟೆಗಳ ಕಾಲ ಕಣ್ಮರೆಯಾಗಿಬಿಡುತ್ತದೆ. ನಕ್ಷತ್ರಗಳು ಚಂದ್ರನ ಹಿಂದೆ ಹಾದುಹೋಗುವಂತೆ ಕಾಣುತ್ತವೆ. ಒಂದು ಬದಿಯಲ್ಲಿ ಕಣ್ಮರೆಯಾಗಿ ಮತ್ತೊಂದು ಕಡೆಯಿಂದ ಕಾಣಿಸಿಕೊಳ್ಳುತ್ತವೆ.

ನಮ್ಮ ಸೌರವ್ಯೂಹದ ಎಲ್ಲಾ ಗ್ರಹಗಳು ಸೂರ್ಯನ ಸುತ್ತ ಡಿಸ್ಕ್ (ತಟ್ಟೆ)ನಂಥ ರಚನೆಯಲ್ಲಿ ಚಲಿಸುತ್ತವೆ. ಭೂಮಿಯಿಂದ ನೋಡಿದಾಗ, ಸೂರ್ಯ ಮತ್ತು ಈ ಗ್ರಹಗಳು ಎಲ್ಲವೂ ಕಾಂತಿವೃತ್ತದ ರೇಖೆಯಲ್ಲಿ ಚಲಿಸಿದಂತೆ ಕಾಣುತ್ತದೆ. ಅದರ ಕಕ್ಷೀಯ ಸಮತಲವು 5 ಡಿಗ್ರಿ ಇಳಿಜಾರಾಗಿರುವುದರಿಂದ ಚಂದ್ರನು ಈ ರೇಖೆಯ ಹತ್ತಿರ ಚಲಿಸುತ್ತಾನೆ. ಪ್ರತೀ ದಿನವೂ ಚಂದ್ರನು ಪೂರ್ವದೆಡೆಗೆ ಚಲಿಸುತ್ತಾನೆ ಹಾಗೂ ಪ್ರತೀ ತಿಂಗಳು ಚಂದ್ರ ಸೂರ್ಯನ ಹಾಗು ಗ್ರಹಗಳ ಮೇಲೆ ಅಥವಾ ಕೆಳಗೆ ಹಾದುಹೋಗುತ್ತಾನೆ. ಸೂರ್ಯನ ಹತ್ತಿರದಲ್ಲಿ ಹೋಗುವ ದಿನಗಳು ಅಮಾವಾಸ್ಯೆಯ ದಿನಗಳು ಎಂದು ನಮಗೆ ತಿಳಿದಿದ್ದರೂ, ಈ ಗ್ರಹಗಳಿಗೆ ಬಹಳ ಹತ್ತಿರದಲ್ಲಿ ಹಾದುಹೋದರೆ ಅದನ್ನು ಈ ಗ್ರಹಗಳೊಂದಿಗೆ ಚಂದ್ರನ ಸಂಯೋಗ ಎಂದು ಕರೆಯಲಾಗುತ್ತದೆ.

ಪ್ರತೀ ತಿಂಗಳು ಚಂದ್ರನು ಮಂಗಳ ಗ್ರಹದ ಜೊತೆಗೆ ಅತೀ ಕಡಿಮೆ ಕೋನಾಂತರದಲ್ಲಿ ಹಾದು ಹೋಗುತ್ತಾನೆ. ಭೂಮಿಯಿಂದ ನೋಡಿದರೆ ಇವರೆಡರ ನಡುವೆ ಕೆಲವೇ ಡಿಗ್ರಿಗಳಷ್ಟು ಅಂತರವಿದ್ದಂತೆ ಕಾಣುತ್ತದೆ. ನಾವು ಈ ಜೋಡಿಯನ್ನು ಭೂಮಿಯಿಂದ ನೋಡುತ್ತಿದ್ದಂತೆ, ಅವುಗಳ ನಡುವಿನ ಅಂತರವು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಮಂಗಳ ಹಾಗೂ ಚಂದ್ರನ ಸಂಯೋಗದ ಸಮಯದಲ್ಲಿ, ಒಬ್ಬರು ಇದನ್ನು ಎಲ್ಲಿಂದ ಗಮನಿಸುತ್ತಾರೆ ಎಂಬುದರ ಆಧಾರದ ಮೇಲೆ, ಚಂದ್ರನು ಮಂಗಳನ ಮುಂದೆ ಹಾದುಹೋಗುವಂತೆ ಗೋಚರಿಸುತ್ತದೆ ಮತ್ತು ಮಂಗಳ ಗ್ರಹಣವನ್ನು ಉಂಟುಮಾಡುತ್ತದೆ.ಇದನ್ನು ನಾವು ಮಂಗಳ ಗ್ರಹದ ಆಚ್ಛಾದನೆ ಎಂದು ಕರೆಯುತ್ತೇವೆ.

ಕಳೆದ ಕೆಲವು ತಿಂಗಳುಗಳಲ್ಲಿ, ಅಂತಹ ಆಚ್ಛಾದನೆಗಳು ಸಂಭವಿಸಿವೆ.ಆದರೆ ಅವು ಭೂಮಿಯ ಕೆಲವು ಭಾಗಗಳಿಂದ ಮಾತ್ರ ಗೋಚರಿಸುತ್ತವೆ. ಹಿಂದಿನ ಚಂದ್ರನ ಆಚ್ಛಾದನೆ ಕ್ರಮವಾಗಿ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಗೋಚರಿಸಿತ್ತು ಆದರೆ ಈ ತಿಂಗಳ ಚಂದ್ರನ ಆಚ್ಛಾದನೆಯು ಭಾರತ ದೇಶಾದ್ಯಂತ ಗೋಚರಿಸುತ್ತದೆ.

ಸಂಜೆ, ಆಕಾಶದಲ್ಲಿ ನೀಲಿಬಣ್ಣದ ಚದುರುವಿಕೆಯಿಂದಾಗಿ, ಚಂದ್ರನ ಕಪ್ಪು ಭಾಗವು ನೀಲಿ ಬಣ್ಣದಲ್ಲಿ ಕಾಣಿಸುತ್ತದೆ ಮತ್ತು ಸಂಜೆ 5ರ ಸುಮಾರಿಗೆ ಮಂಗಳ ಗ್ರಹವು ಚಂದ್ರನ ಹಿಂದೆ ಕತ್ತಲೆ ಭಾಗದಲ್ಲಿ ಕಣ್ಮರೆಯಾಗುವುದನ್ನು ಗಮನಿಸಬಹುದು. ಚಂದ್ರನ ಕಪ್ಪು ಭಾಗ ನೀಲಿ ಬಣ್ಣದ್ದಾಗಿರುವುದರಿಂದ, ಸಂಜೆ 5:08ರ ಸುಮಾರಿಗೆ (ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ) ಮಂಗಳವು ಆಕಾಶದಿಂದ ಕಣ್ಮರೆಯಾದಂತೆ ಕಾಣುತ್ತದೆ. ಸೂರ್ಯ ಮುಳುಗುತ್ತಾ ಕತ್ತಲೆಯಾದಂತೆ, ಸಂಜೆ 6:55ರ ಸುಮಾರಿಗೆ ಕೆಂಪು ಗ್ರಹವು ಚಂದ್ರನ ಪ್ರಕಾಶಮಾನವಾದ ಕಡೆಯಿಂದ ಮತ್ತೆ ಕಾಣಿಸಿಕೊಳ್ಳುತ್ತದೆ. ಅಲ್ಲಿೆ ಆಚ್ಛಾದನೆ ಪೂರ್ಣ ಗೊಳ್ಳುತ್ತದೆ .

ಸೂರ್ಯನ ಸುತ್ತ ಚಂದ್ರ, ಭೂಮಿ ಮತ್ತು ಮಂಗಳ ಗ್ರಹಗಳ ಕಕ್ಷೆಗಳ ಸ್ವರೂಪ ದಿಂದಾಗಿ, ಈ ಘಟನೆಗಳು ಅನಿಯಮಿತ ಮಾದರಿಯಲ್ಲಿ ಕಂಡುಬರುತ್ತವೆ. ಇಂಡೋನೇಷ್ಯಾದಂತಹ ದೇಶಗಳಲ್ಲಿ, ಸಮಯದ ವ್ಯತ್ಯಾಸದಿಂದಾಗಿ, ಮಂಗಳನ ಕಣ್ಮರೆ ರಾತ್ರಿ ಕತ್ತಲ ಆಕಾಶದಲ್ಲಿಯೂ ಗೋಚರಿಸುತ್ತದೆ. ಆದರೆ, ಭಾರತದಲ್ಲಿ ಮಂಗಳ ಗ್ರಹವು ಮರೆಯಾಗುವುದನ್ನು ನೋಡಲು ಬರಿಗಣ್ಣಿನಿಂದ ಕಷ್ಠಸಾಧ್ಯ. ಆದರೆ ಮಂಗಳ ಗ್ರಹವು ಚಂದ್ರನ ಇನ್ನೊಂದು ಬದಿಯಿಂದ ಕಾಣಿಸಿಕೊಳ್ಳುವುದನ್ನು ನೋಡಬಹುದು. ಈ ವಿದ್ಯಮಾನವನ್ನು ಈಗ ನೋಡದಿದ್ದರೆ, ಇನ್ನು ಸದ್ಯಕ್ಕೆ ಚಂದ್ರನು ಮಂಗಳ ಗ್ರಹವನ್ನು ಆಚ್ಚಾದಿಸುವುದಿಲ್ಲ. ಅನೇಕ ಗ್ರಹಗಳನ್ನು ಚಂದ್ರ ಆಚ್ಛಾದಿಸಿದರೂ, ಯಾವುದೂ ಸಹ ಭಾರತದಲ್ಲಿ ಗೋಚರಿಸುವುದಿಲ್ಲ.

ಹೀಗಾಗಿ ಆಕಾಶಕಾಯಗಳ ವೀಕ್ಷಣೆಯಲ್ಲಿ ಆಸಕ್ತಿ ಇರುವವರೆಲ್ಲರೂ ಈ ವಿದ್ಯಮಾನವನ್ನು ತಪ್ಪದೇ ವೀಕ್ಷಿಸುವಂತೆ ಮಾಹಿತಿಗಳನ್ನು ಹಂಚಿಕೊಂಡಿರುವ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಡಾ.ಅತುಲ್ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News