ಸುಳ್ಯ: ಬಸ್ ನಿಲ್ದಾಣದ ಹಿಂಬದಿ ಕುತ್ತಿಗೆ ಕೊಯ್ಯಲ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Update: 2021-04-17 06:41 GMT

ಸುಳ್ಯ, ಎ.17: ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಿಂಬದಿಯಲ್ಲಿ ಮಧ್ಯ ವಯಸ್ಕ ವ್ಯಕ್ತಿಯೊಬ್ಬರ ಮೃತದೇಹ ಕುತ್ತಿಗೆ ಕೊಯ್ಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶುಕ್ರವಾರ ರಾತ್ರಿ 9.15ರ ಹೊತ್ತಿಗೆ ಬಸ್ ನಿಲ್ದಾಣದ ಶೌಚಾಲಯದ ಹಿಂಬದಿ ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಪೋಲೀಸರು ಬಂದು ವ್ಯಕ್ತಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದು, ಮೃತದೇಹದ ಬಳಿ ಇದ್ದ ಬ್ಯಾಗ್ ನಲ್ಲಿದ್ದ ಆಧಾರ್ ಕಾರ್ಡ್ ಆಧಾರದಲ್ಲಿ ಮೃತ ವ್ಯಕ್ತಿ ಮಂಗಳೂರಿನ ಅಚ್ಚುತ ಎಂಬವರೆಂದು ಗೊತ್ತಾಗಿರುವುದಾಗಿ ತಿಳಿದುಬಂದಿದೆ.

ಮೃತ ವ್ಯಕ್ತಿಯ ಮಗ ದಿಲೀಪ್ ಎಂಬವರು ಬಂದು ಪರಿಶೀಲಿಸಿ ಮುಖದ ಮೇಲೆ ಹಾಗು ಕುತ್ತಿಗೆಯಲ್ಲಿ ಸೀಳಿದ ಗಾಯಗಳಿರುವುದರಿಂದ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಅವರು ಸುಳ್ಯ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಮೃತದೇಹವನ್ನು ಕೆ.ವಿ.ಜಿ. ಆಸ್ಪತ್ರೆಗೆ ಕೊಂಡೊಯ್ದು ಶೈತ್ಯಾಗಾರದಲ್ಲಿ ಇರಿಸಿದರು. ಇದು ಕೊಲೆಯೇ, ಆತ್ಮಹತ್ಯೆಯೇ ಅಥವಾ ಬೇರೆ ಕಾರಣಗಳಿಂದ ಸಾವು ಸಂಭವಿಸಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News