ಉಡುಪಿ ಟ್ರಾಫಿಕ್ ಎಎಸ್ಸೈಗೆ ಕಪಾಳ ಮೋಕ್ಷ, ಹಲ್ಲೆ: ದೂರು
Update: 2021-04-17 13:46 GMT
ಉಡುಪಿ, ಎ.17: ಕರ್ತವ್ಯ ನಿರತ ಉಡುಪಿ ಸಂಚಾರ ಪೊಲೀಸ್ ಠಾಣೆಯ ಎಎಸ್ಸೈ ಚಂದ್ರಶೇಖರ ಎಂಬವರಿಗೆ ವ್ಯಕ್ತಿಯೊಬ್ಬ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾದ ಘಟನೆ ಎ.16ರಂದು ಸಂಜೆ 6.15ರ ಸುಮಾರಿಗೆ ಉಡುಪಿಯ ಕರಾವಳಿ ಬೈಪಾಸ್ ಬಳಿ ನಡೆದಿದೆ.
ಇವರು ಸಿಬ್ಬಂದಿಯೊಂದಿಗೆ ವಾಹನ ತಪಾಸಣೆ ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಓಡಿ ಬಂದ ಬಾಗಲಕೋಟೆ ಐಹೊಳೆಯ ಶಿವಕುಮಾರ್ ಆಸಂಗಿ(21) ಎಂಬಾತ ‘ಏ ಪೊಲೀಸರೆ ನೀವು ವಾಹನ ಚೆಕ್ ಮಾಡಲು ಏನು ಅಧಿಕಾರ ಇದೆ?' ಎಂದು ಹೇಳಿ, ಏಕಾಏಕಿ ಚಂದ್ರಶೇಖರ್ರ ಎಡಕೆನ್ನೆಗೆ ಬಲವಾಗಿ ಹೊಡೆದಿದ್ದು, ಇದರ ಪರಿಣಾಮ ಅವರ ಕನ್ನಡಕ ಒಡೆದು ಹೋಗಿರುವುದಾಗಿ ದೂರಲಾಗಿದೆ.
ಬಳಿಕ ಆತ ಎಎಸ್ಸೈಯ ಕಾಲರ್ ಪಟ್ಟಿಯನ್ನು ಹಿಡಿದು ಎಳೆದಾಡಿ, ಉರುಡಾಟ ಮಾಡಿದ್ದಲ್ಲದೆ ಬಿಡಿಸಲು ಬಂದ ಸಾರ್ವಜನಿಕರಿಗೂ ಕೂಡಾ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.