"ಇಲ್ಲಿ ಜನರು ಸಾಯುತ್ತಿದ್ದಾರೆ, ನೀವು ಮಾಲ್ಡೀವ್ಸ್‌ ನಲ್ಲಿ ಹಣ ನೀರಿನಂತೆ ಪೋಲು ಮಾಡುತ್ತಿದ್ದೀರಿ, ನಾಚಿಕೆಯಿರಲಿ"

Update: 2021-04-25 06:39 GMT

ಹೊಸದಿಲ್ಲಿ: ದೇಶದಾದ್ಯಂತ ಕೊರೋನ ವೈರಸ್‌ ಪ್ರಕರಣಗಳು ತಾರಕಕ್ಕೇರುತ್ತಿದೆ. ದಿನನಿತ್ಯ ಸರಿಸುಮಾರು ಮೂರೂವರೆ ಲಕ್ಷಕ್ಕೂ ಅಧಿಕ ಮಂದಿ ಕೊರೋನ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹಲವಾರು ಮಂದಿ ಆಕ್ಸಿಜನ್ ವ್ಯವಸ್ಥೆಯಿಲ್ಲದೇ ಪರದಾಡುತ್ತಿದ್ದಾರೆ. ಈ ನಡುವೆ ಬಾಲಿವುಡ್‌ ತಾರೆಗಳಾದ ದಿಶಾ ಪಟಾನಿ, ಸಾರಾ ಅಲಿ ಖಾನ್‌, ಆಲಿಯಾ ಭಟ್‌, ರಣಬೀರ್‌ ಕಪೂರ್‌ ಸೇರಿದಂತೆ ಹಲವರು ಮಾಲ್ಡೀವ್ಸ್‌ ನಲ್ಲಿ ತಾವು ವಿಹಾರಕ್ಕೆ ತೆರಳಿದ್ದನ್ನು ಸಾಮಾಜಿಕ ತಾಣದಾದ್ಯಂತ ಪೋಸ್ಟ್‌ ಮಾಡುತ್ತಿರುವ ಕುರಿತು ಬಾಲಿವುಡ್‌ ನ ಖ್ಯಾತ ನಟ ನವಾಝುದ್ದೀನ್‌ ಸಿದ್ದೀಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಈ ಸಂದರ್ಭದಲ್ಲಿ ವಿಹಾರಕ್ಕೆಂದು ಮಾಲ್ಡೀವ್ಸ್‌ ಗೆ ತೆರಳಿದ ಕೆಲ ಸೆಲೆಬ್ರಿಟಿಗಳು ಮಾಲ್ಡಿವ್ಸ್‌ ನ ಹೆಸರನ್ನೇ ಅಪಹಾಸ್ಯ ಮಾಡುತ್ತಿದ್ದಾರೆ. ಅವರು ಪ್ರವಾಸೋದ್ಯಮದೊಂದಿಗೆ ಏನು ವ್ಯವಸ್ಥೆ ಮಾಡಿದ್ದಾರೋ ನನಗೆ ತಿಳಿದಿಲ್ಲ. ಆದರೆ ಮಾನವೀಯತೆಗಾಗಿಯಾದರೂ ನಿಮ್ಮ ವಿಹಾರಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ಇಲ್ಲಿ ಎಲ್ಲಾ ಕಡೆಗಳಲ್ಲೂ ನೋವಿದೆ. ಕೋವಿಡ್‌ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಒಂದಿಷ್ಟು ಹೃದಯವಂತಿಕೆಯಿರಲಿ. ಇಲ್ಲಿ ನರಳುತ್ತಿರುವವರನ್ನು ಅಪಹಾಸ್ಯ ಮಾಡದಿರಿ" ಎಂದು ಸಿದ್ದೀಕಿ ಹೇಳಿರುವುದಾಗಿ bollywood hungama ವರದಿ ಮಾಡಿದೆ.

"ದೇಶವು ಆರ್ಥಿಕ ಬಿಕ್ಕಟ್ಟಿಗೊಳಗಾಗಿರುವಂತಹ ಸಂದರ್ಭದಲ್ಲಿ ಈ ಸೆಲೆಬ್ರಿಟಿಗಳು ತಮ್ಮ ವಿಹಾರದ ಚಿತ್ರಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಜನರ ಬಳಿ ತಿನ್ನಲು ಆಹಾರವಿಲ್ಲ. ನೀವು ಹಣವನ್ನು ನೀರಿನಂತೆ ಪೋಲು ಮಾಡುತ್ತಿದ್ದೀರಿ. ಒಂದಿಷ್ಟು ನಾಚಿಕೆಯಿರಲಿ" ಎಂದು ನವಾಝುದ್ದೀನ್‌ ಸಿದ್ದೀಕಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News