ಕಡಲ್ಕೊರೆತದ ಅಬ್ಬರ : ಉಪ್ಪಳದ ಮುಸೋಡಿಯಲ್ಲಿ ನೆಲಸಮವಾದ ಎರಡಂತಸ್ತಿನ ಮನೆ

Update: 2021-05-15 07:53 GMT

ಕಾಸರಗೋಡು : ಕಡಲ್ಕೊರೆತದ ಅಬ್ಬರದಿಂದ ಉಪ್ಪಳದ ಮುಸೋಡಿಯಲ್ಲಿ ಎರಡಂತಸ್ತಿನ ಮನೆ ನೆಲಸಮವಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಮುಸೋಡಿಯ ಮೂಸಾ ಎಂಬವರ ಮನೆ ಕಡಲ್ಕೊರೆತದ ಅಬ್ಬರದಿಂದ ನೆಲಸಮವಾಗಿದೆ. ಮನೆಯವರು ಮೊದಲೇ ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದುದರಿಂದ ಭಾರೀ ಅನಾಹುತ ತಪ್ಪಿದೆ.

ಅರಬಿ ಸಮುದ್ರದಲ್ಲಿ ಚಂಡಮಾರುತದ ಹಿನ್ನೆಲೆಯಲ್ಲಿ ಕಾಸರ ಗೋಡು ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ತೀರದಲ್ಲಿ ಕಡಲ್ಕೊರೆತದ ಅಬ್ಬರ ಹೆಚ್ಚಾಗಿದೆ.

ಭಾರೀ ಗಾಳಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ  ತೆಗೆದುಕೊಂಡಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಕರಾವಳಿ ಪಡೆಯ 35 ಮಂದಿಯ ತಂಡವನ್ನು ಸಜ್ಜು ಗೊಳಿಸಲಾಗಿದೆ.

ಉಪ್ಪಳ, ಕುಂಬಳೆ, ಕಾಸರಗೋಡು ತೀರದಲ್ಲಿ ಕಡಲ್ಕೊರೆತದಿಂದ ಹಲವಾರು ಮನೆಗಳು ಅಪಾಯದಲ್ಲಿವೆ. ಜಿಲ್ಲೆಯಲ್ಲಿ ಇಂದು ರೆಡ್ ಅಲರ್ಟ್  ಘೋಷಿಸಲಾಗಿದೆ. ಕಾಸರಗೋಡು ಚೇರಂಗೈ ತೀರದಲ್ಲಿ ಮನೆಗಳಿಗೆ ಸಮುದ್ರ ನೀರು ನುಗ್ಗಿದ್ದು,  ಎರಡು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕಡಲ್ಕೊರೆತ ಉಂಟಾದ ಮುಸೋಡಿಗೆ ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರಹ್ಮಾನ್ ಹಾಗು ಇತರರು ಭೇಟಿ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News