ಸರಕಾರಕ್ಕೆ ಜನರ ಸಮಸ್ಯೆಗೆ ಪರಿಹಾರಕ್ಕಿಂತಲೂ ಮೋದಿ ವರ್ಚಸ್ಸಿನದ್ದೆ ಚಿಂತೆ: ರಮಾನಾಥ ರೈ

Update: 2021-05-17 17:05 GMT

ಮಂಗಳೂರು, ಮೇ 17: ಕೊರೋನ ಸೋಂಕಿನಿಂದಾಗಿ ಜನರು ನೂರಾರು ಸಮಸ್ಯೆ, ಸಂಕಷ್ಟ ಎದುರಿಸುತ್ತಿದ್ದರೂ ಕೂಡ ರಾಜ್ಯ ಸರಕಾರಕ್ಕೆ ಪರಿಹಾರ ಕಲ್ಪಿಸುವ ಬದಲು ಕುಸಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ವರ್ಛಸ್ಸನ್ನು ಉಳಿಸುವುದೇ ಚಿಂತೆಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಟೀಕಿಸಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೊರೋನ ಸೋಂಕಿತರಿಗೆ ಸೂಕ್ತವಾದ ವೈದ್ಯಕೀಯ ಸೌಲಭ್ಯ ದೊರೆಯುತ್ತಿಲ್ಲ. ಸೂಚಿತ ವಯೋಮಾನದವರಿಗೆ ಸಾಕಷ್ಟು ಕೋವಿಡ್ ನಿರೋಧಕ ಲಸಿಕೆ ನೀಡುತ್ತಿಲ್ಲ. ಕೊರೋನ ನಿಯಂತ್ರಣಕ್ಕಾಗಿ ಹೇರಲಾದ ಲೌಕ್‌ಡೌನ್‌ನಿಂದಾಗಿ ಬಡ, ಕಾರ್ಮಿಕ ಮತ್ತು ಮಧ್ಯಮ ವರ್ಗದ ಜನರಿಗೆ ಜೀವನೋಪಾಯದ ಸಮಸ್ಯೆಯಾಗಿದೆ. ಜನರು ಸೂಕ್ತ ವೈದ್ಯಕೀಯ ಸೌಲಭ್ಯ ದೊರೆಯದೆ ನೂರಾರು ಮಂದಿ ಸಾಯುತ್ತಿದ್ದಾರೆ.

ಸರಕಾರದ ವೈಫಲ್ಯದಿಂದ ಪ್ರಧಾನಿಯ ವರ್ಛಸ್ಸಿಗೆ ಧಕ್ಕೆಯಾಗಿದ್ದು, ಅದನ್ನು ಉಳಿಸುವುದರ ಬಗ್ಗೆ ಚಿಂತಿತರಾಗಿದ್ದಾರೆ ಎಂದು ರೈ ಹೇಳಿದರು.
ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ಸಿನವರು ಬಿಟ್ಟು ಹೋಗಿರುವುದೇ ಕಾರಣ ಎಂದು ಸಂಸದರೊಬ್ಬರು ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಸರಕಾರಿ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಗುತ್ತಿಗೆದಾರ ಓಡಿ ಹೋದಾಗ ರಾಜ್ಯ ಸರಕಾರ ಮತ್ತು ಎಂಆರ್‌ಪಿಎಲ್ ಅನುದಾನದೊಂದಿಗೆ ಕಟ್ಟಡ ನಿರ್ಮಾಣ ಮಾಡಿರುವುದು ಕಾಂಗ್ರೆಸ್ ಸರಕಾರ. ಅಲ್ಲದೆ ವೆನ್ಲಾಕ್ ಆಸ್ಪತ್ರೆಯ ಹೊಸ ಬ್ಲಾಕುಗಳ ಸಹಿತ ಜಿಲ್ಲೆಯಲ್ಲಿ ಹಲವು ಸರಕಾರಿ ಆಸ್ಪತ್ರೆ ಗಳಿಗೆ ಕಟ್ಟಡ ನಿರ್ಮಾಣ ಮಾಡಿರುವುದು ಕಾಂಗ್ರೆಸ್ ಸರಕಾರ ಎಂಬುದನ್ನು ಸಂಸದರ ಅರಿತುಕೊಳ್ಳಲಿ ಎಂದರು.

ಕಾಂಗ್ರೆಸ್ ಸರಕಾರ ಇದ್ದರೆ ಪೆಟ್ರೋಲ್, ಡೀಸೆಲ್ ಸಹಿತ ಎಲ್ಲ ಆವಶ್ಯ ಸಾಮಾಗ್ರಿಗಳ ಬೆಲೆ ಕಡಿಮೆ ಆಗಿರುತ್ತಿತ್ತು. ಅಗತ್ಯವಿದ್ದರೆ ಕೊರೋನ ಸಂದರ್ಭ ಪಡಿತರ ವಿತರಿಸಲಾಗುತ್ತಿತ್ತು. ವೈದ್ಯಕೀಯ ಸೌಲಭ್ಯಗಳ ನಿರ್ವಹಣೆ ಇನ್ನೂ ಚೆನ್ನಾಗಿ ಮಾಡಲಾಗುತ್ತಿತ್ತು ಎಂದು ಕಾಂಗ್ರೆಸ್ ಇದ್ದರೆ ಏನು ಮಾಡುತ್ತಿತ್ತು ಎಂಬ ವಿಪಕ್ಷೀಯರ ಪ್ರಶ್ನೆಗೆ ರಮಾನಾಥ ರೈ ಉತ್ತರಿಸಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಕೊರೋನ ಲಾಕ್‌ಡೌನ್‌ನಿಂದ ಜನರಿಗೆ ಸಂಕಷ್ಟ ಆಗಿದೆ. ಹಾಗಾಗಿ ಸರಕಾರ ಸೂಕ್ತ ಪ್ಯಾಕೇಜ್ ವಿತರಿಸಬೇಕು ಮತ್ತು ಮಲೆನಾಡು ಮತ್ತು ಕರಾವಳಿಯ ಗ್ರಾಮೀಣ ಪ್ರದೇಶದ ಜನತೆ ವಾಹನ ನಿಷೇಧ ನಿಯಮಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಗುಡ್ಡಗಾಡು ಪ್ರದೇಶದ ಜನರಿಗೆ ಸರಕಾರವೇ ಜೀವನಾವಶ್ಯ ಸಾಮಾಗ್ರಿಗಳನ್ನು ವಿತರಿಸಬೇಕು. ಕೊರೋನ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರು, ದಾದಿಯರಿಗೆ ಮಾಸಿಕ ವೇತನ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿ ಲಸಿಕೆ ಅಭಿಯಾನ ಆರಂಭಿಸಬೇಕಿತ್ತು. ಮೊದಲು ಡಿ ಗ್ರೂಪ್ ಸಿಬ್ಬಂದಿಗೆ ಕೊಡುವ ಬದಲು ಸಚಿವರು, ಶಾಸಕರ ಸಹಿತ ವೈದ್ಯಕೀಯ ಕ್ಷೇತ್ರದ ವಿಐಪಿಗಳಿಗೆ ಲಸಿಕೆ ನೀಡಿ ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ನಾವು ಅಂದೇ ಹೇಳಿದ್ದೆವು. ಈಗ ಜನರು ಲಸಿಕೆ ಪಡೆಯಲು ಮುಂದೆ ಬಂದಾಗ ಲಸಿಕೆಯನ್ನು ಪೂರೈಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಶುಬೋದಯ ಆಳ್ವ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News