ಜೂ.14ರಿಂದ ದ.ಕ.ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ ಎನ್ಆರೈಗಳಿಗೆ ಲಸಿಕೆ ನೀಡಲು ಜಿಲ್ಲಾಧಿಕಾರಿ ಆದೇಶ

Update: 2021-06-11 11:34 GMT

ಮಂಗಳೂರು : ವಿದೇಶಕ್ಕೆ ತೆರಳಿರುವ ಅನಿವಾಸಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ, ನಗರ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಜೂನ್ 14‌ರಿಂದ ಲಸಿಕೆ ಹಾಕಿಸಿಕೊಳ್ಳಲು ದ.ಕ. ಜಿಲ್ಲಾಧಿಕಾರಿ‌ ಆದೇಶ ನೀಡಿದ್ದು, ಜಿಲ್ಲಾಧಿಕಾರಿಯ ಈ ಆದೇಶವನ್ನು ಅನಿವಾಸಿ ಕನ್ನಡಿಗರು ಸ್ವಾಗತಿಸಿದ್ದಾರೆ.

ದ.ಕ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಮೇ 30ರಂದು ಆಯೋಜಿಸಲ್ಪಟ್ಟ ದ.ಕ. ಜಿಲ್ಲಾಧಿಕಾರಿಗಳೊಂದಿಗೆ ಅನಿವಾಸಿ ಕನ್ನಡಿಗರ ವೀಡಿಯೊ ಸಂವಾದ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ಹಲವು ಅನಿವಾಸಿ ಕನ್ನಡಿಗರು, ಸಂಘಟನೆಗಳು ಪಾಲ್ಗೊಂಡು ದ.ಕ. ಜಿಲ್ಲೆಯ ಪ್ರಸಕ್ತ ಸ್ಥಿತಿಗತಿ ಹಾಗೂ ಅನಿವಾಸಿಗಳ ಸಮಸ್ಯೆ ಬಗ್ಗೆ ಚರ್ಚೆ ನಡೆದಿತ್ತು.

ವೀಡಿಯೊ ಸಂವಾದದಲ್ಲಿ ಬಹುಮುಖ್ಯವಾಗಿ ಚರ್ಚೆಯಾದ ವಿಷಯ ಅನಿವಾಸಿಗಳಿಗೆ ತುರ್ತು ಲಸಿಕೆ ನೀಡುವ ಕುರಿತಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾವಿರಾರು ಜನರು ವಿದೇಶದಲ್ಲಿ, ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ, ರಜೆ ನಿಮ್ಮಿತ ಊರಿಗೆ ತೆರಳಿರುವ ಅನೇಕರಿಗೆ ಮರಳಿ ಬರಲು ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸಿದರೆ ನೂರಾರು ಮಂದಿ ಲಸಿಕೆ ಪಡೆಯದೇ ಕ್ಲಪ್ತ ಸಮಯದಲ್ಲಿ ವಾಪಾಸಾಗಲೂ ಆಗದೇ ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ ಎಂದು ಅನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು.

ಸಂವಾದ ಕಾರ್ಯಕ್ರಮ ಮುಕ್ತಾಯವಾದ ನಂತರ ಈ ಕುರಿತು ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿ, ಅನಿವಾಸಿಗಳಿಗೆ ಲಸಿಕೆ ಪಡೆಯಲು ಹೆಸರು ನೋಂದಾಯಿಸಲು ಸೂಚಿಸಿ, ನೋಂದಾಯಿಸಿದ 402 ಜನರಿಗೆ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಪ್ರಥಮ ಲಸಿಕೆ ನೀಡುವ ವ್ಯವಸ್ಥೆ ಮಾಡಿದ್ದರು, ಹೊಸದಾಗಿ ನೋಂದಾಯಿಸಿದ 500 ಜನರಿಗೆ ಜುಲೈ 11ರಂದು ಲಸಿಕೆ ನೀಡಲು ವ್ಯವಸ್ಥೆ ಮಾಡಲಾಯಿತು. ಇದೀಗ, ಜೂನ್ 14‌ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ, ನಗರ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ವಿದೇಶಕ್ಕೆ ತೆರಳಿರುವ ಅನಿವಾಸಿಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಜಿಲ್ಲಾಧಿಕಾರಿ‌ ಆದೇಶ ನೀಡಿದ್ದಾರೆ.‌

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಈ ಆದೇಶವನ್ನು ಅನಿವಾಸಿ ಕನ್ನಡಿಗರು ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ 'ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ'ಯ ಯತೀಶ್ ಬೈಕಂಪಾಡಿರವರ ಕಾಳಜಿಗೆ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್, ಒಮನ್ ಪ್ರವಾಸಿ ಕನ್ನಡಿಗರ ಸೇವಾ ವೇದಿಕೆಯ ಶಶಿಧರ ಶೆಟ್ಟಿ, ದುಬೈ ಅಡ್ವೊಕೇಟ್ ಸುನೀಲ್ ಎ ಆರ್, ಕತರ್ ಅನಿವಾಸಿ ಸಂಘಟಕರಾದ ಅಬ್ದುಲ್ಲಾ ಮೋನು, ಬಂಟ್ ಸಂಘ ಕತರ್ ಸ್ಥಾಪಕಾಧ್ಯಕ್ಷ ರವಿ ಶೆಟ್ಟಿ, ಸಲೀಂ ಅಲ್ತಾಫ್, ಬ್ಯಾರೀಸ್ ವೆಲ್ಫೇರ್ ಫೋರಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ, ಕರ್ನಾಟಕ ಸಂಘ ದುಬೈ ಪ್ರಧಾನ ಕಾರ್ಯದರ್ಶಿ ದಯಾ ಕಿರೋಡಿಯನ್ ಹಾಗೂ ಇತರ ಸಂಘ ಸಂಸ್ಥೆಗಳು ಧನ್ಯವಾದ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News